ಪಠ್ಯದಿಂದ ಭಗತ್‌ಸಿಂಗ್, ನಾರಾಯಣಗುರುಗಳಿಗೆ ಕೊಕ್: ಉಡುಪಿ ಜಿಲ್ಲಾ ಸಿಪಿಎಂ ಖಂಡನೆ

Update: 2022-05-19 16:57 GMT

ಉಡುಪಿ : 10ನೇ ತರಗತಿ ಪಠ್ಯ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ಸಮಾಜ ಸುಧಾರಕರಾದ ಶ್ರೀ ನಾರಾಯಣ ಗುರು ಮತ್ತು ಪೆರಿಯಾರ್ ಕುರಿತಾದ ಪಾಠಗಳನ್ನು ಕೈ ಬಿಟ್ಟಿರುವುದನ್ನು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ವಿರೋಧಿಸಿದೆ.

ನಾರಾಯಣಗುರುಗಳು ಮತ್ತು ಪೆರಿಯಾರ್ ಅವರ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಯನ್ನು ದೇಶದೆಲ್ಲೆಡೆ ಜನ ಮೆಚ್ಚಿಕೊಂಡದ್ದು ಮಾತ್ರವಲ್ಲದೆ ಅವರ ನೀತಿಗಳನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದಾರೆ. ಅದನ್ನು ಅಲ್ಲಗಳೆಯು ವುದೆಂದರೆ ಸಮಾಜವನ್ನು  ಹಿಮ್ಮುಖಕ್ಕೆ ಕೊಂಡೊಯ್ಯಲು ಬಿಜೆಪಿ ಸರಕಾರ ಮತ್ತು ಸಂಘ ಪರಿವಾರ ವಿಫಲ ಪ್ರಯತ್ನ ಮಾಡುತ್ತಿದೆ ಎಂದೇ ಅರ್ಥ ಎಂದು ಸಿಪಿಐ(ಎಂ) ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದೆ.

ಕಳೆದ ಗಣರಾಜ್ಯೋತ್ಸವ ಪೆರೇಡ್‌ಗೆ ಕೇರಳ ಸರಕಾರ ನಾರಾಯಣ ಗುರುಗಳ ಸ್ತಭ್ಧ ಚಿತ್ರ ಕಳಿಸಲು ನೀಡಿದ ಸೂಚನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದಾಗ ಉಡುಪಿ ಮತ್ತು ಹಲವೆಡೆ ತೀವ್ರ ಪ್ರತಿಭಟನೆ ನಡೆದಿದೆ. ಅದರಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಭಾಗವಹಿಸಿದ್ದರು. ಈಗ ರಾಜ್ಯ ಬಿಜೆಪಿ ಸರಕಾರ ನೇಮಿಸಿದ ರೋಹಿತ್ ಚಕ್ರತೀರ್ಥ ಸಮಿತಿಯು ನಾರಾಯಣಗುರು ಮತ್ತು ಪೆರಿಯಾರ್ ರಾಮಸ್ವಾಮಿ ಅವರ ಪಾಠಗಳನ್ನು ಕೈಬಿಡುತ್ತಿರುವುದು ಕೇವಲ ಕಾಕತಾಳೀಯ ವಲ್ಲ. ಧ್ವನಿಯಿಲ್ಲದ ಹಿಂದುಳಿದ ವರ್ಗಗಳ ಜನರಿಗಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸುವುದೇ ಅಪರಾಧ ಎಂಬಂತೆ ಬಿಜೆಪಿ ಸರಕಾರಗಳು ವರ್ತಿಸುತ್ತಿವೆ ಎಂದು  ಸಿಪಿಎಂ ಖಂಡಿಸಿದೆ.

ಇದರೊಂದಿಗೆ ಕನ್ನಡದ ಹೆಸರಾಂತ ಲೇಖಕರಾದ ಅರವಿಂದ ಮಾಲಗತ್ತಿ, ಬಿ.ಟಿ.ಲಲಿತಾ ನಾಯ್ಕ್, ಕೆ.ನೀಲಾ ಮೊದಲಾದವರ ಲೇಖನ, ಕವಿತೆ, ವಚನ ಗಳನ್ನೂ ಸಹ ಕೈ ಬಿಟಟ್ಟಿರುವ ಬಗ್ಗೆ ಮಾಹಿತಿ ಇದ್ದು, ರಾಜ್ಯದ ಬಿಜೆಪಿ ಸರಕಾರವು ಸಮಾಜ ಸುಧಾರಣೆ, ಸಾಮರಸ್ಯ ಬಯಸುವ ಪಾಠ, ಕವಿತೆ, ವಚನಗಳನ್ನು ಕೈ ಬಿಡಬಾರದೆಂದು ಸಿಪಿಐ(ಎಂ) ಆಗ್ರಹಿಸಿದೆ.

ಮುಗ್ಧ ಮಕ್ಕಳ ಮನಸ್ಸುಗಳ ಮೇಲೆ ಮನುವಾದಿ ಚಿಂತನೆಗಳನ್ನು ಹೇರುವ ಸರಕಾರದ ಧೋರಣೆಯನ್ನು ನಾಡಿನ ಎಲ್ಲರೂ ವಿರೋಧಿಸಬೇಕೆಂದು ಜನತೆಯಲ್ಲಿ ಸಿಪಿಐ(ಎಂ) ಮನವಿ ಮಾಡುತ್ತದೆ ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News