ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗಾಗಿ ಶ್ರಮಿಸಿದ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ: ಬಿ.ಕೆ.ಹರಿಪ್ರಸಾದ್

Update: 2022-05-20 14:56 GMT

ಮಂಗಳೂರು: ವಡ್ಡರ್ಸೆ ರಘುರಾಮ ಶೆಟ್ಟಿಯವರು ಸಾಮಾಜಿಕ ಕಾಳಜಿಯೊಂದಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗಾಗಿ ತಮ್ಮ ಪತ್ರಿಕೆಯ ಮೂಲಕ ಶ್ರಮಿಸಿದ ಪತ್ರಕರ್ತರಾಗಿದ್ದರು ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ರಂಗಚಾವಡಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯ ವತಿಯಿಂದ ನಗರದ ಸಹೋದಯ  ಸಭಾಂಗಣ ದಲ್ಲಿಂದು ಹಮ್ಮಿಕೊಂಡಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರ ಬರಹಗಳ ಬೇರೆಯೇ ಮಾತು ಕೃತಿ ಬಿಡುಗಡೆ ಗೊಳಿಸಿ ಮಾತನಾಡುತ್ತಿದ್ದರು.

ಸಮಾಜದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿಯವರಂತಹ ಪತ್ರಕರ್ತರ ಪ್ರಜಾಪ್ರಭುತ್ವದ ಮೌಲ್ಯ ಗಳನ್ನು ಉಳಿದಿದೆ. ದುರ್ಬಲ ವರ್ಗದವರು, ಶೋಷಿತರು, ತುಳಿತಕ್ಕೊಳಗಾದವರ ಪರವಾಗಿ ಮುಂಗಾರು ಪತ್ರಿಕೆಯ ಮೂಲಕ ಅವರ ಧ್ವನಿಯಾಗಿದ್ದರು. ಡಾ.ಬಾಬಾ ಸಾಹೇಬ್, ಜ್ಯೋತಿ ಬಾಪುಲೆ, ನಾರಾಯಣ ಗುರುಗಳ ಸಾಮಾಜಿಕ ಕ್ರಾಂತಿ ಯನ್ನು ಬೆಂಬಲಿಸಿ ವಡ್ಡರ್ಸೆ ರಘುರಾಮ ಶೆಟ್ಟಿಯವರು ಬೆಂಬಲಿಸಿದ್ದರು. ಕರಾವಳಿಯ ಜನರಿಗಿದ್ದ ಗೌರವ ಇತ್ತೀಚೆಗೆ ಕುಸಿದಿದೆ. ಕರಾವಳಿ ಸೇರಿದಂತೆ  ದೇಶದ ವೈವಿಧ್ಯತೆಯಲ್ಲಿ ಏಕತೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.

"ಬೇರೆಯೇ ಮಾತು" ಕೃತಿಯ ಸಂಪಾದಕ ದಿನೇಶ್ ಅಮೀನ್ ಮಟ್ಟು ಮಾತನಾಡುತ್ತಾ ಶಿಕ್ಷಣ, ಉದ್ಯೋಗ, ಬ್ಯಾಂಕಿಂಗ್ ಕ್ಷೇತ್ರದ ಜೊತೆಗೆ ಹಿಂದು, ಮುಸ್ಲಿಂ, ಕ್ರೈಸ್ತರ ಸೌಹಾರ್ದತೆಗೆ ಖ್ಯಾತಿ ಪಡೆದಿರುವ ಕರಾವಳಿಯಲ್ಲಿ ಸಣ್ಣ ಪುಟ್ಟ ಘಟನೆಗಳ ಮೂಲಕ ಸೌಹಾರ್ದತೆಗೆ ಇಲ್ಲಿನ ಮೂಲ ಸಂಸ್ಕೃತಿಯ ಮೇಲೆ ಕೋಮುವಾದಿ ಶಕ್ತಿ ಗಳಿಂದ ದಾಳಿ ನಡೆಯುತ್ತಿರುವುದು ಖೇದಕರ ಸಂಗತಿ ಎಂದರು. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವವರ ಪರ ಬೆಂಬಲವಾಗಿ ನಿಲ್ಲುತ್ತಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರು ನೆನಪಾಗುತ್ತಾರೆ. ಅವರ ಬರಹಗಳು ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ ಎಂದು ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ "ವಾರ್ತಾಭಾರತಿ" ಪತ್ರಿಕೆಯ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡುತ್ತಾ "ವಡ್ಡರ್ಸೆ ರಘುರಾಮ ಶೆಟ್ಟಿಯವರು ಲೆಕ್ಕಾಚಾರದ 'ಬುದ್ಧಿವಂತ'ರಾಗಿರಲಿಲ್ಲ.  ಹಾಗಾಗಿ ಅವರು ದಿನಪತ್ರಿಕೆ ಆರಂಭಿಸುವ ಭಾರೀ ಸವಾಲಿನ ಕೆಲಸಕ್ಕೆ ಕೈಹಾಕಿದರು. ಮುಂಗಾರು ಆರಂಭಿಸಿದ್ದೇ ದೊಡ್ಡ ಸಾಧನೆ. ಅವರು ಬದ್ಧತೆಯೊಂದಿಗೆ ಪತ್ರಿಕೆ ನಡೆಸಿದವರು ಮತ್ತು ಪತ್ರಕರ್ತರಿಗೆ ಸ್ಫೂರ್ತಿಯಾದರು. ಅವರ  ಬರಹಗಳ ಸಂಕಲನ ಇತರರಿಗೆ ಸ್ಫೂರ್ತಿಯಾಗಲಿ" ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರ ಕರ್ತಕರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ಮಾತನಾಡುತ್ತಾ, ಕ್ರೀಯಾಶೀಲ ಪತ್ರಕರ್ತರಾಗಿದ್ದ ವಡ್ಡರ್ಸೆಯವರು ಪತ್ರಕರ್ತರಿಗೆ ಮಾದರಿ ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸುವ ಇಂಗಿತವಿದೆಯೆಂದು ತಿಳಿಸಿದ್ದಾರೆ.

ಪುಸ್ತಕದ ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಉಪಸ್ಥಿತರಿದ್ದರು. ರಂಗ ಚಾವಡಿ ಸಂಘಟನೆ ಯ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ ವಂದಿಸಿದರು. ಸಲಹೆಗಾರರಾದ ನರೇಶ್ ಕುಮಾರ್ ‌ಸಸಿಹಿತ್ಲು  ಸ್ವಾಗತಿಸಿದರು. ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News