ಸ್ವಾವಲಂಬಿಗಳಾಗಲು ದಿವ್ಯಾಂಗರಿಗೆ ಹೆಚ್ಚಿನ ಅವಕಾಶ ನೀಡಬೇಕು: ಡಾ. ಶಾಂತರಾಮ ಶೆಟ್ಟಿ

Update: 2022-05-22 14:09 GMT

ಮಂಗಳೂರು: ದಿವ್ಯಾಂಗರಿಗೆ, ವಿಶಿಷ್ಟ ಚೇತನರಿಗೆ ಸ್ವಾವಲಂಬಿಗಳಾಗಲೂ ಹೆಚ್ಚಿನ ಅವಕಾಶ ಕಲ್ಪಿಸಬೇಕಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ.ಎಂ.ಶಾಂತರಾಮ ಶೆಟ್ಟಿ ತಿಳಿಸಿದ್ದಾರೆ.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿಂದು  ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಶಿಷ್ಟಚೇತನರ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ.ಕ. ಜಿಲ್ಲಾ ಶಾಖೆ  ಮತ್ತು ಯುವ ಮಂಗಳೂರು ವಿಶ್ವವಿದ್ಯಾಲಯದ ರೆಡ್ ಕ್ರಾಸ್ ಘಟಕ ಜಂಟಿಯಾಗಿ ಆಯೋಜಿಸಿದ್ದ ಸಂಘದ 30ನೇ ವರ್ಷದ ವಾರ್ಷಿಕ ಸಮಾವೇಶ ಹಾಗೂ ದಿವ್ಯಾಂಗರಿಗೆ ವೈದ್ಯಕೀಯ ನೆರವು ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಗವಿಕಲರಾಗಿ ಹುಟ್ಟಿದ ಮಾತ್ರಕ್ಕೆ ಧೃತಿಗೆಡಬೇಕಾಗಿಲ್ಲ. ಬೇರೆಯವರ ಅನುಕಂಪಕ್ಕೆ ಕಾಯದೆ ದೃಢ ಮನಸ್ಸಿ ನಿಂದ ಸ್ವಂತ ಸಾಮರ್ಥ್ಯದಲ್ಲಿ ಬದುಕನ್ನು  ಸಾಗಿಸುವಂತಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸಿ ಎ ಶಾಂತಾರಾಮ ಶೆಟ್ಟಿ ಮಾತನಾಡಿ, ರೆಡ್ ಕ್ರಾಸ್, ದಿವ್ಯಾಂಗರು ಮತ್ತು ವಿಕಲಚೇತನರಿಗಾಗಿ ಅನೇಕ ಕೊಡುಗೆ ನೀಡಿದೆ.

ಸಮಾಜದಲ್ಲಿನ ದಾನಿಗಳ ನೆರವನ್ನು ಪಡೆದು ಸಮಾಜಕ್ಕಾಗಿಯೇ ವಿನಿಯೋಗಿಸುವ ಏಕೈಕ ಸಂಸ್ಥೆಯಾಗಿ ರೆಡ್ ಕ್ರಾಸ್ ಕಾರ್ಯನಿರ್ವಹಿಸುತ್ತಿದೆ. “ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಕಾಲೇಜುಗಳಲ್ಲಿನ ದಿವ್ಯಾಂಗ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ಮಾಡುವ ಕೆಲಸಕ್ಕೆ ಮುಂದಾಗಿರುವುದು ಸ್ವಾಗತಾರ್ಹ” ಎಂದರು.

ಮುಖ್ಯ ಅತಿಥಿ, ಮಂಗಳೂರು ಮಹಾನಗರಪಾಲಿಕೆಯ ಮಹಾಪೌರ ಪ್ರೇಮಾನಂದ ಶೆಟ್ಟಿ, ಸರಕಾರ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ವ್ಯಾಪ್ತಿಯಲ್ಲಿ ದಿವ್ಯಾಂಗರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡು ವುದಾಗಿ ತಿಳಿಸಿದರು. ಸಕ್ಷಮ ಟ್ರಸ್ಟಿನ ಟ್ರಸ್ಟಿ ಜಯದೇವ ಕಾಮತ್ ದಿವ್ಯಾಂಗರಿಗಾಗಿ ಟ್ರಸ್ಟ್ ಕೈಗೊಳ್ಳುತ್ತಿರುವ ಕ್ರಮಗಳ ಮಾಹಿತಿ ನೀಡಿದರು. ದಿವ್ಯಾಂಗರು ಮತ್ತು ವಿಶಿಷ್ಟಚೇತನರಿಗೆ ದೊರಕುವ ಸೌಲಭ್ಯಗಳ ಮಾಹಿತಿ ಪುಸ್ತಕವನ್ನು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯಾ ರೈ ಬಿಡುಗಡೆಗೊಳಿಸಿದರು.

ಅಪಘಾತಕ್ಕೊಳಗಾಗಿ ಬೆನ್ನುಹುರಿ ತೊಂದರೆಯಿದ್ದರೂ, ಸಮಾಜದಲ್ಲಿ ಇಂತಹ ತೊಂದರೆಗೊಳಗಾಗಿ ಕಷ್ಟಪಡುತ್ತಿ ರುವವರಿಗೆ ಸಹಾಯ ಮಾಡುತ್ತಿರುವ ಬೆಳ್ತಂಗಡಿ ತಾಲೂಕಿನ ಸೇವಾಭಾರತಿ ಟ್ರಸ್ಟ್ ನ ಅಧ್ಯಕ್ಷ  ವಿನಾಯಕ ರಾವ್ ಕನ್ಯಾಡಿ ಅವರನ್ನು  ಸನ್ಮಾನಿಸಲಾಯಿತು.

ಜಿಲ್ಲಾ ರೆಡ್ ಕ್ರಾಸ್  ಕಾರ್ಯದರ್ಶಿ ಪ್ರಭಾಕರ ಶರ್ಮಾ, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ನ  ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ವಿಶಿಷ್ಟಚೇತನರ ಸಂಘದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್  ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಶಿಷ್ಟಚೇತನರ ಸಂಘದ ಅಧ್ಯಕ್ಷ ಡಾ. ಮುರಳಿಧರ್ ನಾಯಕ್ ಪ್ರಾಸ್ತಾವಿಕ ದೊಂದಿಗೆ ಸ್ವಾಗತ ಮಾಡಿದರು. ರೆಡ್ ಕ್ರಾಸ್ ನ ದಿವ್ಯಾಂಗ ಕೋಶದ ಚೇರ್ಮನ್ ಡಾ. ಕೆಆರ್ ಕಾಮತ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ದಿನಮಣಿ ರಾವ್ ನಿರೂಪಿಸಿದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ದಿವ್ಯಾಂಗ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು. ದಿವ್ಯಾಂಗ ಮತ್ತು ವಿಕಲಚೇತನರಿಗೆ ಮಾಹಿತಿ ಶಿಬಿರ ನಡೆಸಿಕೊಟ್ಟ ಡಾ. ಮುರಳಿಧರ ನಾಯಕ್, ವಿದ್ಯಾರ್ಥಿಗಳು ತಮ್ಮ ಅಂಗ ನ್ಯೂನತೆಯಿಂದ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ ಸ್ವಂತ ಸಾಧನೆಯ ಹೆಜ್ಜೆ ಇಡಬೇಕು ಎಂದರು.

ಚರ್ಚೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News