VIDEO- ದಲಿತ ಸ್ವಾಮೀಜಿಯ ಬಾಯಲ್ಲಿದ್ದ ಅನ್ನ ಕೇಳಿ ತಿಂದ ಶಾಸಕ ಝಮೀರ್ ಅಹ್ಮದ್ ಖಾನ್

Update: 2022-05-22 16:16 GMT

ಬೆಂಗಳೂರು:  ದಲಿತ ಸ್ವಾಮೀಜಿಗೆ ಅನ್ನ ತಿನ್ನಿಸಿದ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಖಾನ್‌, ಬಳಿಕ ಅವರ ಬಾಯಿಯಲ್ಲಿದ್ದ ಎಂಜಲು ಅನ್ನವನ್ನು ತಿನ್ನುವ ಮೂಲಕ ಸೌಹಾರ್ದ ಮೆರೆದಿದ್ದಾರೆ.  ಈ ಕುರಿತ ವೀಡಿಯೋ  ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನಗರದ ಪಾದರಾಯನಪುರದ ಅಲ್‌ ಅಝರ್‌ ಫೌಂಡೇಶನ್‌ ಶಾಲೆಯಲ್ಲಿ ಡಾ. ಬಿಆರ್‌ ಅಂಬೇಡ್ಕರ್‌ ಜಯಂತಿ ಮತ್ತು ಈದ್‌ ಮಿಲನ್ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಝಮೀರ್‌ ಅಹ್ಮದ್, ಸ್ವಾಮೀಜಿ ಬಾಯಲ್ಲಿದ್ದ ಅನ್ನವನ್ನು ತಿಂದಿದ್ದು, ಈ ಮೂಲಕ ಸೌಹಾರ್ದತೆ ಸಾರುವ ಪ್ರಯತ್ನ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು,  ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ದಲಿತರು ಮಾಡಿದ ಅಡುಗೆಯನ್ನು ತಿನ್ನಲು ಮಕ್ಕಳು ನಿರಾಕರಿಸಿದ ಘಟನೆಯನ್ನು ಉಲ್ಲೇಖಿಸಿದ ಝಮೀರ್‌ ಖಾನ್‌, ಇಂತಹ ಬೇಧ ಭಾವ ಮಾಡಬಾರದು ಎಂದು ಕರೆ ನೀಡಿದರು. ಮಾತ್ರವಲ್ಲದೇ  ದಲಿತ ಸ್ವಾಮೀಜಿಯ ಬಾಯಿಯಲ್ಲಿದ್ದ ಆಹಾರವನ್ನು ಸ್ವತಃ ತಾನೇ ತಿಂದು ನನಗೆ ಬೇಧ ಭಾವ ಇಲ್ಲ, ನಾನು ದಲಿತರ ಎಂಜಲನ್ನು ತಿನ್ನುತ್ತೇನೆ ಎಂದಿದ್ದಾರೆ.

'ಮನುಷ್ಯರಾಗಿ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮ ಎಂದಿಗೂ ಅಡ್ಡಿಯಾಗದು. ನಾವೆಲ್ಲರೂ ಸಹೋದರರಂತೆ ಬಾಳಬೇಕು. ಸ್ವಾಮೀಜಿ ಬಾಯಲ್ಲಿದ್ದ ಅನ್ನ ತಿಂದ ನಾನು ಸತ್ತು ಹೋದೆನಾ?' ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್‌ ಆಗಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News