ವಾಲ್ಮೀಕಿ ಸ್ವಾಮೀಜಿ ಸತ್ಯಾಗ್ರಹ: ನೂರುದಿನ ನೂರಾರು ನೋವುಗಳು

Update: 2022-05-23 09:09 GMT

ಇಂದು ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ ಕೇವಲ ಶೇ.ಮೂರರಷ್ಟು ಸೌಲಭ್ಯ ಪಡೆಯುತ್ತಿರುವ ಜಾತಿಗಳು ಈ ಹಿಂದೆ ಹಿಂದುಳಿದ ಪಂಗಡದ (ಬಿ.ಟಿ.) ಪಟ್ಟಿಯಲ್ಲಿದ್ದಾಗ ಶೇ.ಐದರಷ್ಟು ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದವು. ಐವತ್ತು ಜಾತಿಗಳ ಸಮೂಹವಾಗಿರುವ ಪರಿಶಿಷ್ಟ ಪಂಗಡದ ಸೌಲಭ್ಯ ಶೇ.7.5ಕ್ಕೆ ಏರಿಸುವುದು. ಹಾಗೇಯೇ ನೂರಕ್ಕೂ ಹೆಚ್ಚು ಜಾತಿ ಸಮೂಹಗಳಿರುವ ಪರಿಶಿಷ್ಟ ಜಾತಿ ಸೌಲಭ್ಯಗಳನ್ನು ಶೇ.15ರಿಂದ 17ಕ್ಕೆ ಏರಿಸುವುದು ಆಯೋಗದ ವರದಿ ಸಾರಾಂಶ.

ಕರ್ನಾಟಕದ ಹೆಸರಾಂತ ಮಠವೊಂದರ ಮಠಾಧೀಶರೊಬ್ಬರು ನೂರು ದಿನಗಳನ್ನು ಮೀರಿ ಮುಂದುವರಿಸಿದ ಸತ್ಯಾಗ್ರಹ ಇದುವರೆಗೆ ಜರುಗಿದ ದಾಖಲೆಗಳೇ ಇಲ್ಲ. ಅಂತಹದ್ದೊಂದು ಐತಿಹಾಸಿಕ ಸತ್ಯಾಗ್ರಹ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿರಂತರ ಸಾಗುತ್ತಲಿದೆ. ಮಹಾಮಳೆ, ಚಳಿಗಾಳಿ, ಸಿಡಿಲು ಗುಡುಗುಗಳ ನಡುವೆ ಬೆಂಗಳೂರಿನ ಸ್ವಾತಂತ್ರ ಉದ್ಯಾನ ವನದಲ್ಲಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ ಸತ್ಯಾಗ್ರಹ ಅಹೋರಾತ್ರಿ ನಡೆಯುತ್ತಲಿದೆ. ಅದೇನು ದಾಖಲೆ ನಿರ್ಮಿಸಲು ನಡೆಸುತ್ತಿರುವ ಸತ್ಯಾಗ್ರಹವಲ್ಲ. ಅದರಲ್ಲೂ ಅದು ಕೇವಲ ವಾಲ್ಮೀಕಿ ಜನಾಂಗಕ್ಕಾಗಿ ಮಾಡುತ್ತಿರುವ ಜಾತಿಮಿತಿಯ ಹೋರಾಟವಲ್ಲ. ಕನ್ನಡನಾಡಿನ ಕಟ್ಟ ಕಡೆಯ ಮತ್ತು ನಿರ್ಲಕ್ಷಿತ ಜನಾಂಗಗಳ ಸಮ ಸಮಾಜದ ಕನಸುಗಳ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಜನಪರ ಸತ್ಯಾಗ್ರಹವದು. ಕರ್ನಾಟಕದ ನೂರೈವತ್ತಕ್ಕೂ ಹೆಚ್ಚಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದ ಅನುಷ್ಠಾನಕ್ಕಾಗಿ ಅವರದು ನ್ಯಾಯೋಚಿತ ಶಾಂತಿ ಚಳವಳಿ. ಅಂತೆಯೇ ನೂರು ದಿನಗಳಿಂದ ನಾಡಿನಾದ್ಯಂತ ಅಲೆಮಾರಿ, ಆದಿವಾಸಿ, ಅಸ್ಪೃಶ್ಯ, ಬುಡಕಟ್ಟು, ದಲಿತ ಇತ್ಯಾದಿ ತಳ ಸಮುದಾಯದ ಚಳವಳಿಗಾರರು, ಪ್ರಗತಿಪರರು ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಹೃತ್ಪೂರ್ವಕ ಬೆಂಬಲ ನೀಡಿದ್ದಾರೆ. ಆದರೆ ವೈದಿಕೇತರ ಈ ಶೂದ್ರ ಸ್ವಾಮೀಜಿ ಸತ್ಯಾಗ್ರಹವನ್ನು ವಿದ್ಯುನ್ಮಾನ ಮಾಧ್ಯಮಗಳು ಅಸ್ಪೃಶ್ಯ ಕಣ್ಣುಗಳಿಂದಲೇ ನೋಡಿದವು.

ಹಾಗೆ ನೋಡಿದರೆ ಅದೇನು ದಿಢಿರನೇ ಹುಟ್ಟಿಕೊಂಡ ಸತ್ಯಾಗ್ರಹ ವಲ್ಲ. ಅದಕ್ಕೆ ದಶಕಗಳಷ್ಟು ಹಿರಿದಾದ ಚಳವಳಿಗಳ ಚಾರಿತ್ರಿಕ ಹಿನ್ನೆಲೆ ಇದೆ. 2019ರಲ್ಲಿ ಲಕ್ಷ ಲಕ್ಷ ಸಂಖ್ಯೆಯ ಜನರೊಂದಿಗೆ ವಾಲ್ಮೀಕಿ ಸ್ವಾಮೀಜಿ ರಾಜನಹಳ್ಳಿಯಿಂದ ರಾಜಧಾನಿವರೆಗೆ ಪಾದಯಾತ್ರೆ ಮಾಡಿದರು. ಪಾದಯಾತ್ರೆಯ ತೀವ್ರತೆ ಮನಗಂಡ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ 02-07-2019 ರಂದು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದಲ್ಲಿ ಪರಿಶಿಷ್ಟರ ಮೀಸಲಾತಿ ಹೆಚ್ಚಳ ಕುರಿತು ಆಯೋಗ ನೇಮಿಸಿದರು. ಆಯೋಗ ನೀಡಿದ ಮೀಸಲಾತಿ ಹೆಚ್ಚಳದ ವರದಿ ಜಾರಿಗೆ ಒತ್ತಾಯಿಸಿ ಪ್ರಸ್ತುತ ಸತ್ಯಾಗ್ರಹ. ಮೇ 20 ರಂದು ನೂರು ದಿನಗಳನ್ನು ಪೂರೈಸಿ ಸ್ವಾಮೀಜಿ ಏಕಾಂಗಿಯಾಗಿ ಮುನ್ನಡೆಯುತ್ತಿರುವ ಕಟ್ಟುನಿಟ್ಟಾದ ಹೋರಾಟವಿದು.

ನಾಗಮೋಹನದಾಸ್ ಆಯೋಗ ನೀಡಿರುವುದು ದಲಿತ, ದಮನಿತರಿಗೆ ಅತ್ಯಗತ್ಯವಾಗಿ ದಕ್ಕಬೇಕಾದ ಬದುಕಿನ ಹಕ್ಕುಗಳ ವರದಿ. ಅಂತಹ ವೈಜ್ಞಾನಿಕ ವರದಿಯ ಅನುಷ್ಠಾನಕ್ಕೆ ಒತ್ತಾಯಿಸಿ ರಾಜನಹಳ್ಳಿ ವಾಲ್ಮೀಕಿ ಪೀಠದ ಸ್ವಾಮೀಜಿ ಅವರು ಸರಕಾರದ ಗಮನಕ್ಕೆ ತಂದು ಕಳೆದ ಫೆಬ್ರವರಿ 10ನೇ ತಾರೀಕಿನಿಂದ ಬೆಂಗಳೂರಿನಲ್ಲಿ ಅಹೋರಾತ್ರಿ ನಿರಂತರ ಹೋರಾಟ ಆರಂಭಿಸಿದ್ದಾರೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಾ ನಾಗಮೋಹನದಾಸ್ ಆಯೋಗ ವರದಿ ನೀಡಿದ ಇಪ್ಪತ್ನಾಲ್ಕು ತಾಸುಗಳಲ್ಲೇ ಅದನ್ನು ಅನುಷ್ಠಾನಕ್ಕೆ ತರುವ ಪ್ರಮಾಣದ ಪರಿಭಾಷೆಯಲ್ಲಿ ವಚನ ಕೊಟ್ಟದ್ದುಂಟು.

ನ್ಯಾ. ನಾಗಮೋಹನದಾಸ್ ಆಯೋಗವು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರಕ್ಕೆ 02-07-2020 ರಂದು ಪೂರ್ಣ ವರದಿ ನೀಡಿ ಎರಡು ವರುಷಗಳೇ ಸಮೀಪಿಸುತ್ತಿವೆ. ಆದರೆ ವರದಿ ಜಾರಿಗೆ ತರುವ ಸಹೃದಯತೆಯ ಸದ್ಬುದ್ಧಿ ವಚನ ಕೊಟ್ಟ ಸರಕಾರಕ್ಕಿಲ್ಲ.

ಅಷ್ಟೇ ಯಾಕೆ ನೂರು ದಿನಗಳ ಕಾಲ ಕೆಂಡದಂತಹ ಬಿಸಿಲು, ಮಿಂಚು, ಗುಡುಗು ಸಿಡಿಲು, ಚಳಿಗಾಳಿ, ಮಳೆಯ ಬಯಲಲ್ಲಿ ವಾಲ್ಮೀಕಿ ಪೀಠದ ಸ್ವಾಮೀಜಿ ತೋಯ್ದು ತೊಪ್ಪೆಯಾಗುತ್ತಿದ್ದಾರೆ. ಪರಿಶಿಷ್ಟ ವರ್ಗದ ಅವೈದಿಕ ಸ್ವಾಮೀಜಿಯ ಸತ್ಯಾಗ್ರಹ ಶಿಬಿರಕ್ಕೆ ಭೇಟಿ ನೀಡಿ ಪರಿಶಿಷ್ಟ ಸಮುದಾಯಗಳ ಮೀಸಲಾತಿ ಪರ ಸೌಜನ್ಯದ ಮಾತಾಡುವ ಔದಾರ್ಯ ಈ ಸರಕಾರದ ಮುಖ್ಯಮಂತ್ರಿ ಆದವರಿಗಿಲ್ಲ. ಹಾಗೊಂದು ವೇಳೆ ವೈದಿಕ ಪರಂಪರೆಯ ಮೇಲ್ಜಾತಿ ಯ ಸ್ವಾಮೀಜಿ ನೂರು ದಿನಗಳಲ್ಲ ಒಂದೇ ಒಂದು ದಿನ ಸತ್ಯಾಗ್ರಹ ಕುಳಿತಿದ್ದರರೆ ಏನಾಗುತ್ತಿತ್ತು ಎಂಬ ಮಾತು ಊಹೆಗೂ ನಿಲುಕಲಾಗದು. ಮತ್ತೊಂದು ಮಾತು ನೆನಪಿರಲಿ: ಯಾವೊಂದು ಸತ್ಯಾಗ್ರಹ, ಪ್ರತಿಭಟನೆಗಳ ಸೊಲ್ಲಿಲ್ಲದೇ ಮೇಲ್ಜಾತಿಗೆ ಸೇರಿದ, ಕೇವಲ ಶೇ. ಮೂರರಷ್ಟು ಸಂಖ್ಯೆಯಲ್ಲಿರದ ಬ್ರಾಹ್ಮಣರಿಗೆ ವಾರವೊಪ್ಪತ್ತಿನಲ್ಲೇ ಸರಕಾರ ಶೇ. ಹತ್ತರಷ್ಟು ಮೀಸಲಾತಿ ನೀಡಿ ವಿಶ್ವದಾಖಲೆ ಸ್ಥಾಪಿಸಿತು.

ಪರಿಶಿಷ್ಟ ಪಂಗಡದ ಮೀಸಲಾತಿ ಕ್ಷೇತ್ರದಿಂದಲೇ ಚುನಾಯಿತರಾದ ಆಗ ಸಮಾಜ ಕಲ್ಯಾಣ ಸಚಿವರೂ ಆಗಿದ್ದ ಶ್ರೀರಾಮುಲು, ಆಯೋಗದ ವರದಿ ದೊರಕಿದ ಮೂರು ದಿನದಲ್ಲೇ ಜಾರಿಗೆ ತರುವ ಕುರಿತು ಸರಕಾರದ ಪರವಾಗಿ ರಕ್ತದಲ್ಲೇ ಬರೆದು ಕೊಡುವೆನೆಂದು ರೋಷಾವೇಶದಲ್ಲಿ ಹೇಳಿದರು. ಅವರದೇ ಆದ ವಿಶಿಷ್ಟ ಕನ್ನಡದಲ್ಲಿ ಹಾಗೆ ಆಡಿದ ಮಾತುಗಳು, ಕಪಟ ರಾಜಕಾರಣದ ಪರಮ ಸುಳ್ಳುಗಳೆಂಬುದನ್ನು ಸಾಕ್ಷೀಕರಿಸಿದರು. ಇಂತಹ ಹಸಿ ಹಸಿ ಸುಳ್ಳುಗಳನ್ನು ಹೇಳಿದ್ದು ಜಗಜ್ಜಾಹೀರಾದ ಮೇಲೂ ಮತ್ತೆ ಮತ್ತೆ ಸಾರ್ವಜನಿಕ ವೇದಿಕೆಗಳಲ್ಲಿ ಅವರು ಸರಣಿ ಸರಣಿ ಸುಳ್ಳುಗಳ ಸರಗಳನ್ನೇ ಹೆಣೆದು ಪೋಣಿಸಿ ಮಿಥ್ಯದ ತೋರಣ ಕಟ್ಟುವ ಮೂಲಕ ಲೋಕದ ವಿಶ್ವಾಸ ಕಳೆದುಕೊಳ್ಳುವುದಲ್ಲ, ಅದೊಂದು ಹೇಸಿಗೆಯ ಹಗುರ ಸಂಗತಿ ಎಂಬಂತಾಗಿದೆ.

ಅಜಮಾಸು ಒಂದುಕೋಟಿ ಎಪ್ಪತ್ತು ಲಕ್ಷದಷ್ಟು ಜನಸಂಖ್ಯಾ ಬಾಹುಳ್ಯವುಳ್ಳ ಕರ್ನಾಟಕದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಕ್ಷೇತ್ರಗಳಿವೆ. ಆ ಕ್ಷೇತ್ರಗಳ ಪೂರ್ಣ ಪ್ರಮಾಣದ ರಾಜಕೀಯ ಸ್ವಾಯತ್ತತೆ ಪಡೆದು ಶಾಸಕರು, ಸಂಸದರಾಗಿ ಮೀಸಲಾತಿಯ ಸವಿಯುಂಡ ರಾಜಕಾರಣಿಗಳು ಮಂತ್ರಿಗಳಾಗಿಯೂ ಹುಲುಸಾಗಿದ್ದಾರೆ. ಅವರು ಸರಕಾರದ ಹತ್ತು ಹಲವು ಸೌಲಭ್ಯಗಳ ಸಾಗರದಲ್ಲಿ ಸಂಭ್ರಮದಿಂದ ಇದ್ದಾರೆ. ಹೀಗಿರುವಾಗ ಅವರಿಗೆ ತಾವು ಹುಟ್ಟಿಬಂದ ಜನಾಂಗದ ತಾಯ್ತನದ ಅರಿವು ಮತ್ತು ಸಂಕಟಗಳೆಂದರೆ ವೇದಿಕೆಯ ಆವೇಶದ ಮಾತುಗಳಾಗಿವೆ. ಆ ದಿಸೆಯಲ್ಲಿ ಅವು ಅರ್ಥ ಕಳಕೊಂಡಿವೆ. ಶಿಕ್ಷಣ ಮತ್ತು ಉದ್ಯೋಗಗಳು ಸೇರಿದಂತೆ ನಿಕೃಷ್ಟ ಸ್ಥಿತಿಯಲ್ಲಿ ಬದುಕುತ್ತಿರುವ ನೂರೈವತ್ತೆರಡು ಪರಿಶಿಷ್ಟ ಜಾತಿ, ಪಂಗಡಗಳ ಜನರ ಬದುಕು ಹಸನಾಗಬೇಕೆಂಬುದು ಆಯೋಗದ ವಸ್ತುನಿಷ್ಠ ಶಿಫಾರಸ್ಸು.

ಸಂವಿಧಾನದತ್ತ ಸಹಬಾಳ್ವೆ, ಸಹೋದರತ್ವ ಮತ್ತು ಸಮ ಸಮಾಜದ ಬದುಕಿನ ಸೌಲಭ್ಯಗಳನ್ನು ನೀಡುವುದು ಪ್ರಭುತ್ವದ ಆದ್ಯ ಕರ್ತವ್ಯ. ಕೇಂದ್ರ ಸರಕಾರ ರಾಜ್ಯಗಳಿಗೆ ನೀಡುತ್ತಿರುವ ಮೀಸಲಾತಿ ಹಂಚಿಕೆಯಲ್ಲೇ ರಾಜ್ಯ ಸರಕಾರಗಳು ತಾರತಮ್ಯ ಮಾಡುತ್ತಿರುವುದು ಖಂಡನಾರ್ಹ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದೊಂದು ರಾಜ್ಯಕ್ಕೆ ಒಂದೊಂದು ಬಗೆಯ ಮೀಸಲಾತಿ ನೀತಿ ಇರಬಾರದು. ಜಾರ್ಖಂಡ್, ರಾಜಸ್ಥಾನ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಶೇಕಡಾ ಐವತ್ತಕ್ಕೂ ಹೆಚ್ಚು ಪ್ರಮಾಣದಲ್ಲಿದೆ. ಒಂದೆಡೆ ಶೇಕಡಾ ಎಂಭತ್ತು ಪ್ರಮಾಣದವರೆಗೂ ಇರುವುದು ನೋಡಿದ್ದೇವೆ.

ಇಂದು ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ ಕೇವಲ ಶೇ. ಮೂರರಷ್ಟು ಸೌಲಭ್ಯ ಪಡೆಯುತ್ತಿರುವ ಜಾತಿಗಳು ಈ ಹಿಂದೆ ಹಿಂದುಳಿದ ಪಂಗಡದ (ಬಿ.ಟಿ.) ಪಟ್ಟಿಯಲ್ಲಿದ್ದಾಗ ಶೇ. ಐದರಷ್ಟು ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದವು. ಐವತ್ತು ಜಾತಿಗಳ ಸಮೂಹವಾಗಿರುವ ಪರಿಶಿಷ್ಟ ಪಂಗಡದ ಸೌಲಭ್ಯ ಶೇ.7.5ಕ್ಕೆ ಏರಿಸುವುದು. ಹಾಗೇಯೇ ನೂರಕ್ಕೂ ಹೆಚ್ಚು ಜಾತಿ ಸಮೂಹಗಳಿರುವ ಪರಿಶಿಷ್ಟ ಜಾತಿ ಸೌಲಭ್ಯಗಳನ್ನು ಶೇ.15ರಿಂದ 17ಕ್ಕೆ ಏರಿಸುವುದು ಏರಿಸುವುದು ಆಯೋಗದ ವರದಿ ಸಾರಾಂಶ.

ಇದು ಜನಸಂಖ್ಯೆ ಹೆಚ್ಚಳ ಆಧಾರಿತ ಮಾತ್ರವಲ್ಲದೇ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನೆಲೆಯ ವೈಜ್ಞಾನಿಕ ಶಿಫಾರಸು ಆಗಿದೆ. ವರದಿ ಅತ್ಯಂತ ವೈಜ್ಞಾನಿಕ ಮತ್ತು ಅಧ್ಯಯನ ನಿಷ್ಠೆಯಿಂದ ಕೂಡಿದೆಯೆಂಬುದು ಆಳುವವರಿಗೆ ಗೊತ್ತಿಲ್ಲವೇ.? ಆದರೆ ರಾಜಕೀಯ ಕಾರಣಕ್ಕೆಂಬಂತೆ ಸುಭಾಷ್ ಅಡಿ ಸಮಿತಿ ರಚಿಸಿ ಪ್ರಭುತ್ವವು ಪರಿಶಿಷ್ಟ ಜಾತಿ ಮತ್ತು ಪಂಗಡಗಳೊಂದಿಗೆ ಚೆಲ್ಲಾಟ ಆಡುತ್ತಿದೆ. ಅದಕ್ಕೂ ಹಿಂದೆ ಯಡಿಯೂರಪ್ಪ ಸದನದ ಉಪಸಮಿತಿ ನೇಮಕ ನೆಪದ ಆಟ ಆಡಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರುವತ್ತು ಮಂದಿ ಶಾಸಕರು, ಎಂಟು ಮಂದಿ ಸಂಸದರು ಕಳ್ಳ ಬೆಕ್ಕುಗಳಂತೆ ಕಳ್ಳಾಟ ಆಡುವುದನ್ನು ನಿಲ್ಲಿಸಬೇಕು.

ರಾಜಕೀಯ ಮೀಸಲಾತಿ ಪಡೆವ ರಾಜಕಾರಣದ ಸೋಗಲಾಡಿತನ ಬಯಲಾಗುವ ಕಾಲ ಸನ್ನಿಹಿತಗೊಂಡಿದೆ. ಆತ್ಮಾವಲೋಕನ ಮಾಡಿಕೊಂಡು ಪಕ್ಷಾತೀತವಾಗಿ ಸೆಟೆದು ನಿಂತು ಸೆಡ್ಡು ಹೊಡೆದು ಸಂವಿಧಾನಬದ್ಧ ಹಕ್ಕು ದಕ್ಕಿಸಿಕೊಳ್ಳಬೇಕಿದೆ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಪಕ್ಷದ ಟಿಕೆಟ್ ತೆವಲು ಮತ್ತು ಜೋಬದ್ರಗೇಡಿ ಗೆಲುವಿಗಾಗಿ ಜೊಲ್ಲು ಸುರಿಸುವುದನ್ನು ನಿಲ್ಲಿಸಬೇಕು. ಹೈಕಮಾಂಡ್ ಕೃಪಾ ಕಟಾಕ್ಷಗಳ ಎಂಜಲಲ್ಲಿ ಹೊರಳಾಡುವ ಸಿಂಬಳದ ಹುಳಗಳಂತೆ ಮಿಸುಕಾಡುವುದು ದುರದೃಷ್ಟದ ಮಹಾದುರಂತ.

ಅಂಬೇಡ್ಕರ್ ಕಲಿಸಿ ಕೊಟ್ಟ ಸ್ವಾಭಿಮಾನದ ಬಾಳು ಬದುಕದೇ ಹೋದಲ್ಲಿ ಅವರ ಅಸ್ತಿತ್ವಕ್ಕೆ ಅನಾಹುತ ಕಾದಿದೆ. ಎಲ್ಲಾ ಹಿಂದುಳಿದ ಮತ್ತು ದಲಿತ ಮಠಾಧೀಶರು ವಾಲ್ಮೀಕಿ ಶ್ರೀಗಳ ಸತ್ಯಾಗ್ರಹದ ನೊಗಕ್ಕೆ ಸಕ್ರಿಯ ಹೆಗಲು ಕೊಡಬೇಕು. ಆ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ನೂರೈವತ್ತೆರಡು ಜಾತಿ ಜೀವಗಳಿಗೆ ಬದುಕಿನ ಉಸಿರು ದೊರಕಲಿ.

Writer - ಮಲ್ಲಿಕಾರ್ಜುನ ಕಡಕೋಳ

contributor

Editor - ಮಲ್ಲಿಕಾರ್ಜುನ ಕಡಕೋಳ

contributor

Similar News