ಸುಳ್ಯ: ಹುಂಡಿ ಹಣ ಕಳವುಗೈಯುತ್ತಿದ್ದ ಆರೋಪ; ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

Update: 2022-05-25 17:35 GMT

ಸುಳ್ಯ : ಜಯನಗರ ಶ್ರೀ ಆದಿ ಮೊಗೇರ್ಕಳ ದೈವಸ್ಥಾನದ ಹುಂಡಿಯನ್ನು ಒಡೆಯುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ವರದಿಯಾಗಿದೆ.

ಜಯನಗರದ ಆಶ್ರಯ ಕಾಲನಿಯ ಜೀವನ್‍ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತನ ವಿರುದ್ಧ ಪ್ರಕರಣ ದಾಖಲಾಗಿದೆ.

ಬುಧವಾರ ಬೆಳಗ್ಗೆ ಸ್ಥಳೀಯ ನಿವಾಸಿಗಳು ಪೂಜೆ ಸಲ್ಲಿಸಲು ದೈವಸ್ಥಾನಕ್ಕೆ ಹೋಗಿದ್ದ ಸಂದರ್ಭ ಅಡುಗೆ ಕೋಣೆಯಿಂದ ಶಬ್ದ ಕೇಳಿ ಬಂದಿದ್ದು, ಈ ವೇಳೆ ಸ್ಥಳೀಯರು ಕೋಣೆಯ ಒಳಪ್ರವೇಶಿಸಿ ಪರಿಶೀಲಿಸಿದಾಗ ಜೀವನ್‍ ದೈವಸ್ಥಾನದ ಹುಂಡಿಯನ್ನು ಒಡೆಯುವ ಪ್ರಯತ್ನದಲ್ಲಿದ್ದ ಎಂದು ದೂರಲಾಗಿದೆ.

ಈತನನ್ನು ನೋಡಿದ ಸ್ಥಳೀಯರು ದೈವಸ್ಥಾನಕ್ಕೆ ಸಂಬಂಧಪಟ್ಟವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಕೂಡಲೇ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸ್ಥಳೀಯರು ಸ್ಥಳಕ್ಕೆ ಬಂದು ಜೀವನ್‍ನನ್ನು ಸುಳ್ಯ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News