ಮಳಲಿ ಮಸೀದಿ ವಿಚಾರ ಮುಂದಿಟ್ಟು ಶಾಂತಿ ಕೆಡಿಸುವ ಹುನ್ನಾರ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಆರೋಪ

Update: 2022-05-26 16:55 GMT

ಮಂಗಳೂರು : ಮಳಲಿ ಮಸೀದಿಯ ವಿಚಾರವನ್ನು ವಿವಾದಕ್ಕೆ ಗುರಿಪಡಿಸಿಕೊಂಡು ಸಂಘ ಪರಿವಾರದ ಶಕ್ತಿಗಳು ಜಿಲ್ಲೆಯ ಶಾಂತಿ ಕೆಡಿಸುವ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿರುವ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರಿಸ್ ಹನೀಫಿ, ಸಂಘ ಪರಿವಾರದ ಶಕ್ತಿಗಳ ಹುನ್ನಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಮಳಲಿ ಮಸೀದಿಗೆ ನೂರಾರು ವರ್ಷಗಳ ಇತಿಹಾಸವಿದೆ ಅನ್ನುವುದನ್ನು ಮಸೀದಿಯ ಕುರಿತಾದ ದಾಖಲೆಗಳು ಸ್ಪಷ್ಟಪಡುಸುತ್ತಿವೆ. ಆದರೂ ಸಂಘಪರಿವಾರದ ಶಕ್ತಿಗಳು ಕೋಮುಧ್ರವೀಕರಣಕ್ಕಾಗಿ ಅದನ್ನು ಅನಗತ್ಯ ವಿವಾದಕ್ಕೆ ಗುರಿಪಡಿಸಿವೆ. ದಾಖಲೆ, ವಾಸ್ತವಾಂಶಗಳ ಆಧಾರದ ಮೇಲೆ ತುರ್ತಾಗಿ ಸ್ಪಂದಿಸಬೇಕಾಗಿದ್ದ ಪೊಲೀಸ್ ಇಲಾಖೆ, ಜಿಲ್ಲಾಡಳಿತವು ಸಂಘಪರಿವಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಕಳವಳಕಾರಿಯಾಗಿದೆ. ಇದೀಗ ತಾಂಬೂಲ ಪ್ರಶ್ನೆಯ ಮೂಲಕ ಹಿಂದು ಸಮುದಾಯವನ್ನು ಭಾವನಾತ್ಮಕವಾಗಿ ಕೆರಳಿಸುವ ಪ್ರಯತ್ನ ನಡೆಸಲಾ ಗಿದೆ. ಹಿಜಾಬ್, ಆಝಾನ್ ಮೊದಲಾದ ಶರೀಅತ್‌ಗೆ ಸಂಬಂಧಿಸಿದ ವಿಚಾರಗಳನ್ನು ವಿವಾದಕ್ಕೆ ಒಳಪಡಿಸುತ್ತಾ ಬಂದ ಸಂಘಪರಿವಾರವು ಇದೀಗ ವಕ್ಫ್ ಸೊತ್ತಾಗಿರುವ ಮಸೀದಿಯನ್ನೂ ಅತಿಕ್ರಮಿಸಲು ಷಡ್ಯಂತ್ರ ರೂಪಿಸುತ್ತಿದೆ ಎಂದು ಆರೋಪಿಸಿದರು.

ದ.ಕ.ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಸಮಾಜದ ಶಾಂತಿ, ಸಾಮರಸ್ಯ ಕೆಡಿಸುವ ಇಂತಹ ಕೋಮುವಾದಿ ಶಕ್ತಿಗಳನ್ನು ಕಾನೂನು ಕ್ರಮದ ಮೂಲಕ ನಿಯಂತ್ರಿಸ ಬೇಕು. ಮುಸ್ಲಿಮರ ಪ್ರಾರ್ಥನಾ ಸ್ಥಳಗಳನ್ನು ಅತಿಕ್ರಮಿಸುವ ಪ್ರಯತ್ನಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕು. ಆಡಳಿತ ವ್ಯವಸ್ಥೆಯ ಕೃಪಾಪೋಷಣೆಯಲ್ಲಿ ಸಂಘಪರಿವಾರ ನಡೆಸುತ್ತಿರುವ ಇಂತಹ ಪಿತೂರಿಗಳನ್ನು ಸಮುದಾಯವು ಒಂದಾಗಿ ಪ್ರಜ್ಞಾವಂತಿಕೆಯಿಂದ ಎದುರಿಸಬೇಕಾಗಿದೆ ಎಂದು ಹಾರಿಸ್ ಹನೀಫಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News