ಈ ಹಿಂದಿನ ಪಠ್ಯಪುಸ್ತಕ ಶೀಘ್ರವೇ ಶಾಲೆಗಳಿಗೆ ಪೂರೈಸಲು ಒತ್ತಾಯ

Update: 2022-05-27 13:51 GMT

ಮಂಗಳೂರು : ಸರಕಾರ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ರದ್ದುಗೊಳಿಸಿ ಈ ಹಿಂದೆ ಇದ್ದಂತಹ ಪಠ್ಯ ಪುಸ್ತಕಗಳನ್ನು ರಾಜ್ಯದ ಎಲ್ಲ ಶಾಲೆಗಳಿಗೆ ಪೂರೈಸಬೇಕೆಂದು  ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಮುಹಮ್ಮದ್ ಅಸ್ಲಮ್  ಒತ್ತಾಯಸಿದ್ದಾರೆ.

ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭಗೊಂಡು ಈಗಾಗಲೆ ೨೦ದಿನಗಳು ಗತಿಸಿವೆ. ಸರ್ಕಾರ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಪೂರೈಸದೆ ಮಕ್ಕಳ ಶೈಕ್ಷಣಿಕ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಎಂಬ ಪ್ರಹಸನವು ಗೊಂದಲದ ಗೂಡಾಗಿದ್ದು ಅನರ್ಹ ವ್ಯಕ್ತಿಗಳು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಹೊಣೆಗಾರಿಕೆಯನ್ನು ಹೊತ್ತು ಮಕ್ಕಳ ಮಾನಸಿಕತೆಯನ್ನು ಅರಿಯದೆ ಅವೈಜ್ಞಾನಿಕ ರೀತಿಯಲ್ಲಿ ಪಠ್ಯಪುಸ್ತಕಗಳ ಮೂಲಕ ಮೂಢನಂಬಿಕೆಗಳನ್ನು ಹೇರಲು ಪ್ರಯತ್ನಿಸುತ್ತಿದ್ದಾರೆಂದು  ಮುಹಮ್ಮದ್ ಅಸ್ಲಮ್  ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಶೈಕ್ಷಣಿಕ ವಿಭಾಗವು ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿ ರುವ ಬೆಳೆವಣೆಗೆಗಳ ಕುರಿತಂತೆ ಗಂಭೀರವಾಗಿ ಚಿಂತನೆ ನಡೆಸಿದ್ದು ಕೂಡಲೇ ಈ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಪಠ್ಯಪುಸ್ತಕಗಳು ಒಂದು ಪೀಳಿಗೆಯನ್ನೇ ರೂಪಿಸುತ್ತವೆ. ಸದ್ಯ ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ನ ಬೆಳವಣೆಗಳು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಆತಂಕಕ್ಕೆ ದೂಡಿದ್ದು ಮಕ್ಕಳ ಮನಸ್ಸಿನಲ್ಲಿ ಕೊಳಕು ತುಂಬು ವಂತಹ ಪ್ರಯತ್ನಗಳಿಂದಾಗಿ ಮುಂದಿನ ಪೀಳಿಗೆಯು ಯಾವ ರೀತಿ ದೇಶ ಮತ್ತು  ಸಮಾಜವನ್ನು ರಕ್ಷಿಸಬಲ್ಲದು ಎಂಬ ಭಯವನ್ನು ಹುಟ್ಟುವಂತೆ ಮಾಡಿದೆ. ಪಠ್ಯಪುಸ್ತಕಗಳು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ನಂಬಿಕೆ, ಪರಸ್ಪರ ಗೌರವ, ಮಾನವ ಹಕ್ಕುಗಳು, ಮಕ್ಕಳ ಹಕ್ಕುಗಳು, ಮಾನವೀಯ ಮೌಲ್ಯಗಳು ಒಟ್ಟಾರೆಯಾಗಿ ಬಹುತ್ವ ಭಾರತದ ಕಲ್ಪನೆ ಹೇಗಿರಬೇಕು, ಬಹುತ್ವದದೊಂದಿಗೆ ನಾವು ಹೇಗೆ ಬದುಕಬೇಕು ಎಂಬ ವಿಷಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವಂತಹ ಪ್ರಯತ್ನಗಳು ಪಠ್ಯಪುಸ್ತಕಗಳಿಂದಾಗಬೇಕು. ಆದರೆ ಸದ್ಯದ ರಾಜ್ಯದಲ್ಲಿ ಉಂಟಾ ಗುತ್ತಿರುವ ಬೆಳವಣೆಗೆಯನ್ನು ಕಂಡರೆ, ಮೇಲೆ ತಿಳಿಸಿದ ಮೌಲ್ಯಗಳ ಕಡೆಗೆ ಒತ್ತು ನೀಡದೇ, ಬಲಪಂಥೀಯ, ಕೋಮುದ್ವೇಷ, ಸಮಾಜ ಒಡೆಯುವ ಮತ್ತು ಪರಸ್ಪರಲ್ಲಿ ಅಪನಂಬಿಕೆ ಮೂಡಿಸುವ ವಿಷಯಗಳು ಪಠ್ಯಪುಸ್ತಕ ಗಳಲ್ಲಿ ಸೇರ್ಪಡೆಗೊಳ್ಳುತ್ತಿರುವುದು ದೇಶದ ಭವಿಷ್ಯ ಅಂಧಕಾರದೆಡೆಗೆ ಸಾಗುತ್ತಿರುವ ದ್ಯೋತಕವಾಗಿದೆ.

ಆದ್ದರಿಂದ ಸರಕಾರ ಕೂಡಲೇ ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈಬಿಟ್ಟು ಈ ಹಿಂದೇ ಇದ್ದ ಪಠ್ಯಗಳನ್ನೇ ಯಥಾವತ್ತಾಗಿ ಮುದ್ರಿಸಿ ಕೂಡಲೆ ಶಾಲೆಗಳಿಗೆ ಪೂರೈಸಬೇಕು ಎಂದು ಮುಹಮ್ಮದ್ ಅಸ್ಲಮ್  ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News