ಸಂತ ಅಲೋಶಿಯಸ್ ಕಾಲೇಜಿಗೆ ನಿವೃತ್ತ ಕಾನ್‌ಸ್ಟೆಬಲ್ ಪುತ್ರ, ಸ್ನೇಹಿತನಿಂದ 1 ಕೋಟಿ ರೂ. ನಿಧಿ

Update: 2022-05-27 15:37 GMT

ಮಂಗಳೂರು : ಪೊಲೀಸ್ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕಾಗಿ ನಿವೃತ್ತ ಕಾನ್‌ಸ್ಟೇಬಲ್ ಅವರ ಪುತ್ರ ಸ್ನೇಹಿತನ ಜೊತೆ ಸೇರಿ ಒಂದು ಕೋಟಿ ರೂ. ನಿಧಿಯನ್ನು ತಾನು ಕಲಿತ ಅಲೋಶಿಯಸ್ ಕಾಲೇಜಿಗೆ ನೀಡಿದ್ದಾರೆ.

ಎಡಿಜಿಪಿ ಅಲೋಕ್ ಕುಮಾರ್ ಅವರು ಚೆಕ್‌ನ್ನು ಕಾಲೇಜಿನ ಪ್ರಾಂಶುಪಾಲರಿಗೆ ಶುಕ್ರವಾರ ಹಸ್ತಾಂತರಿಸಿದರು.

ಮಂಗಳೂರಿನ ಅಲೋಶಿಯಸ್ ಕಾಲೇಜಿನ ಹಳೇ ವಿದ್ಯಾರ್ಥಿ ಎಂ.ವಿ. ನಾಯರ್ ಅವರು ಬ್ಯಾಂಕ್‌ವೊಂದರ ಚೇರ್‌ಮೆನ್ ಆಗಿ ನಿವೃತ್ತಿಯಾಗಿದ್ದಾರೆ. ಇವರು ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಎಂ.ಕೆ.ಆರ್. ನಾಯರ್ ಎಂಬುವರ ಪುತ್ರ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಎಂ.ಕೆ.ಆರ್. ನಾಯರ್ ಅವರು ಪುತ್ರನನ್ನು ಪದವಿ ವಿದ್ಯಾಭ್ಯಾಸಕ್ಕಾಗಿ ಅಲೋಶಿಯಸ್ ಕಾಲೇಜಿಗೆ ಸೇರಿಸಿದ್ದರು. ಆರ್ಥಿಕವಾಗಿ ತುಂಬಾ ಕಷ್ಟವಿದ್ದರೂ ಇವರನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಿದ್ದರು. ತನ್ನ ತಾಯಿ ಕೂಡಿಟ್ಟ ಹಣದ ಡಬ್ಬಿಯನ್ನು ಒಡೆದು ಅವರ ವಿದ್ಯಾಭ್ಯಾಸಕ್ಕಾಗಿ ನೀಡಿದ್ದನ್ನು ಎಂ.ವಿ. ನಾಯರ್ ನೆನಪಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿ ಬೇರೆಯವರಿಗೆ ಬರಬಾರದೆಂದು ಪೊಲೀಸ್ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ನಿಧಿಯನ್ನು ಸ್ಥಾಪಿಸಿದ್ದಾರೆ.

ಎಂ.ವಿ. ನಾಯರ್ ದುಡಿದು ಗಳಿಸಿದ ೨೫ ಲಕ್ಷ ರೂ. ಹಣವನ್ನು ಈ ಕಾರ್ಯಕ್ಕಾಗಿ ಮೀಸಲಿಟ್ಟಿದ್ದು, ಅದೇ ರೀತಿಯಲ್ಲಿ ಅವರ ಉದ್ದೇಶದ ಬಗ್ಗೆ ಈ ಹಿಂದೆ ಸಹೋದ್ಯೋಗಿಯಾಗಿದ್ದ ಗೆಳೆಯನಲ್ಲಿ ಹೇಳಿದಾಗ ಪ್ರಸ್ತುತ ಹಾಂಕಾಂಗ್‌ನಲ್ಲಿರುವ ಇ.ಎಸ್.ವೆಂಕಟ್ ೭೫ ಲಕ್ಷ ರೂ. ನೀಡಿದ್ದಾರೆ. ಹೀಗೆ ಒಟ್ಟಾದ ಒಂದು ಕೋಟಿ ರೂ. ಹಣವನ್ನು ಅವರು ಕಲಿತ ಅಲೋಶಿಯಸ್ ಕಾಲೇಜಿನಲ್ಲಿ ಎಂ.ವಿ ನಾಯರ್ -ವೆಂಕಟ್ ಎಂಡೋಮೆಂಟ್ ಫಂಡ್ ಸ್ಥಾಪಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ನೀಡಿದ್ದಾರೆ.

ಒಂದು ಕೋಟಿ ರೂ.ಗೆ ಬ್ಯಾಂಕಿನಲ್ಲಿ ಅಂದಾಜು ೪ ಲಕ್ಷ ರೂ.ಬಡ್ಡಿ ಸಿಗಲಿದ್ದು, ಈ ಬಡ್ಡಿ ಹಣದಿಂದ ಪೊಲೀಸ್ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲಿದ್ದಾರೆ. ತಲಾ ೫೦ ಸಾವಿರದಂತೆ ವರ್ಷಕ್ಕೆ ೮ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ದೊರೆಯಲಿದೆ. ಪೊಲೀಸ್ ಸಿಬ್ಬಂದಿ ಮಕ್ಕಳು ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎನ್ನುವುದು ಇವರ ಆಶಯವಾಗಿದೆ.

ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಎಂ.ವಿ.ನಾಯರ್ ಮತ್ತು ವೆಂಕಟ್ ಎಂಡೋಮೆಂಟ್ ಫಂಡ್‌ನ ಸ್ಥಾಪಕರಾದ ಎಂ.ವಿ.ನಾಯರ್ ಹಾಗೂ ಇ.ಎಸ್.ವೆಂಕಟ್, ಕಾಲೇಜು ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್, ಕಾಲೇಜಿನ ರೆಕ್ಟರ್ ರೆ.ಫಾ.ಮೆಲ್ವಿನ್ ಜೆ. ಪಿಂಟೋ, ಹಣಕಾಸು ಅಧಿಕಾರಿ ರೆ.ಫಾ.ವಿನ್ಸೆಂಟ್ ಪಿಂಟೋ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News