ಕಲಾವಿದರ ಸಮರ್ಪಣಾ ಭಾವದಿಂದ ಯಕ್ಷಗಾನ ಕಲೆ ಉಳಿದಿದೆ : ಸಚಿವ ಅರಗ ಜ್ಞಾನೇಂದ್ರ
ಮಂಗಳೂರು, (ಪುನೀತ್ ರಾಜ್ ಕುಮಾರ್ ವೇದಿಕೆ): ಕಲಾವಿದರ ಸಮರ್ಪಣಾ ಭಾವದಿಂದ, ಹೊಸತನವನ್ನು ಮೈಗೂಡಿಸಿ ಕೊಂಡ ಯಕ್ಷಗಾನ ದಂತಹ ಕಲೆ ಉಳಿದಿದೆ ಎಂದು ಕರ್ನಾಟಕ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಅಡ್ಯಾರ್ ಗಾರ್ಡನ್ ನಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ 2022 ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನಮ್ಮ ನಡುವೆ ಸಾಕಷ್ಟು ಕಲೆಗಳು ನಶಿಸಿ ಹೋಗಿವೆ. ಆದರೆ ಯಕ್ಷಗಾನ ಕಲೆಯಲ್ಲಿ ಪಟ್ಲ ಸತೀಶ್ ರಂತಹ ಯುವ ಕಲಾವಿದರು ಹೊಸತನವನ್ನು ಈ ಕಲೆಯಲ್ಲಿ ತೋರಿಸಿ ಕೊಟ್ಟ ಕಾರಣ ಸಾಕಷ್ಟು ಜನರನ್ನು ಆಕರ್ಷಿಸುತ್ತಿದೆ. ಯಕ್ಷಗಾನ ಎಲ್ಲರನ್ನೂ ಆಕರ್ಷಿಸುವ ಒಂದು ಅದ್ಭುತ ಕಲೆ. ಆದರೆ ಯಕ್ಷಗಾನ ಕಲಾವಿದರು ತಮ್ಮ ಬದುಕನ್ನು ಕಟ್ಟಿ ಕೊಳ್ಳಲು ಸಾಕಷ್ಟು ಕಷ್ಟ ನಷ್ಟ ಪಟ್ಟಿದ್ದಾರೆ. ಅದರಿಂದಾಗಿ ಕಲೆ ಉಳಿದಿದೆ. ಕನ್ನಡ ಭಾಷೆ ಬೆಳೆದಿದೆ. ಇಂತಹ ಕಲಾವಿದರಿಗೆ ನೆರವು ನೀಡಲು ಪಟ್ಲ ಫೌಂಡೇಶನ್ ಮುಂದೆ ಬಂದಿರುವುದು ಶ್ಲಾಘನೀಯ. ಅವರ ಯೋಜನೆ ಗೆ ಸರಕಾರದ ಸಹಾಯ ನೀಡುವ ಭರವಸೆ ನೀಡಿದರು. ನಾನು ಯಕ್ಷಗಾನದ ಮತ್ತು ಪಟ್ಲ ಸತೀಶ್ ಅವರ ಅಭಿಮಾನಿ ಎಂದು ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮತ್ತು ಶ್ರೀ ಒಡಿಯೂರು ಕ್ಷೇತ್ರದ ಶ್ರೀ ಗುರುದೆವಾ ನಂದ ಸ್ವಾಮೀಜಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಬಂದರು ಮತ್ತು ಮೀನುಗಾರಿಕೆ ಸಚಿವ ಅಂಗಾರ, ಶಾಸಕ ವೇದವ್ಯಾಸ ಕಾಮತ್, ಡಾ.ಮಂಜುನಾಥ ಭಂಡಾರಿ, ನಿವೃತ್ತ ಕೆಪಿಎಸ್ಸಿ ಆಯುಕ್ತ ಟಿ,ಶ್ಯಾಮ್ ಭಟ್, ಕಿಯೋನಿಸ್ಕ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೈಸೂರು ಎಲೆಕ್ಟ್ರಾನಿಕ್ ಲಿ.ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೊಳಿಯಾರ್,ಹೇರಂಬ ಕೆಮಿಕಲ್ ಇಂಡಸ್ಟ್ರಿಸ್ ಇದರ ನಿರ್ದೇಶಕ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಗುಜರಾತ್ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಸಿಎ ದಿವಾಕರ್ ರಾವ್, ಉದ್ಯಮಿ ಆನಂದ ಶೆಟ್ಟಿ ತೋನ್ಸೆ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಶಶೀಂದ್ರ ಕುಮಾರ್, ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಜಯರಾಮ್ ಶೇಖ, ಬಂಟ್ಸ್ ಸಂಘ ಸುರತ್ಕಲ್ ಅಧ್ಯಕ್ಷ ಸುಧಾಕರ್ ಪೂಂಜಾ, ಅಡ್ಯಾರ್ ಮಾಧವ್ ನಾಯಿಕ್, ಕಳತ್ತೂರು ವಿಶ್ವನಾಥ್ ಶೆಟ್ಟಿ, ವಿಜಯಕುಮಾರ್ ಅಮೀನ್,ಪಟ್ಲ ಮಹಾಬಲ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.
ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿಮತ್ತು ಪುರುಷೋತ್ತಮ ಕೆ ಭಂಡಾರಿ ಕಾರ್ಯ ಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ರವರಿಗೆ ಪಟ್ಲ ಪ್ರಶಸ್ತಿ 2022 ನ್ನು ವಿತರಿಸಿ ಸನ್ಮಾನಿಸಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ. ಎಲ್. ಸಾಮಗ ಅಭಿನಂದನಾ ಭಾಷಣ ಮಾಡಿದರು. ಸಮಾರಂಭದಲ್ಲಿ ಉದ್ಯಮಿಕೆ. ಡಿ.ಶೆಟ್ಟಿ ದಂಪತಿ, ವಕ್ವಾಡಿ ಪ್ರವೀಣ್ ಶೆಟ್ಟಿ, ಸವಣೂರು ಸೀತಾರಾಮ ರೈ ದಂಪತಿ, ಸುರೇಶ್ ಭಂಡಾರಿ ಮೊದಲಾದವರನ್ನು ಸನ್ಮಾನಿಸಲಾಯಿತು.