ಕೋಡಿಹಳ್ಳಿ ಚಂದ್ರಶೇಖರ್ ಅವರ 35 ಕೋಟಿ ರೂ. ಹಗರಣ | ತನಿಖಾ ವರದಿ ನೀಡಲು 15 ದಿನ ಗಡುವು; ರಾಜ್ಯ ರೈತ ಸಂಘ ಎಚ್ಚರಿಕೆ
Update: 2022-06-01 19:03 IST
ಬೆಂಗಳೂರು, ಜೂ.1: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ 35 ಕೋಟಿ ವ್ಯವಹಾರ ನಡೆಸಿರುವ ಬಗ್ಗೆ ಖಾಸಗಿ ವಾಹಿನಿಯೊಂದು ಆರೋಪ ಮಾಡಿದೆ. ಇದು ರೈತ ಸಮುದಾಯದಲ್ಲೇ ಗೊಂದಲಗಳು ಸೃಷ್ಟಿ ಮಾಡಿದೆ. ಹಾಗಾಗಿ ಖಾಸಗಿ ಚಾನೆಲ್ ಒಂದು ವಾರದೊಳಗೆ ಹಣ ಯಾರು ನೀಡಿದ್ದಾರೆ ಮತ್ತು ಯಾವ ಖಾತೆಗೆ ಹೋಗಿದೆ ಎಂದು ಬಹಿರಂಗಪಡಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ಆಗ್ರಹಿಸಿದ್ದಾರೆ.
ಬುಧವಾರ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಅವರು ವಿಡಿಯೋದಲ್ಲಿ ಮಾತನಾಡಿರುವುದನ್ನು ಖಾಸಗಿ ಚಾನೆಲ್ ಪ್ರಸಾರ ಮಾಡಿದೆ. ಆದರೆ ಹಣ ವರ್ಗಾವಣೆ ಕುರಿತು ಗೊಂದಲ ಇದೆ. ಹಾಗಾಗಿ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರವು ತನಿಖೆ ನಡೆಸಿ, 15 ದಿನದೊಳಗೆ ವರದಿ ನೀಡಬೇಕು. ಇಲ್ಲವಾದಲ್ಲಿ ರೈತರಿಗೆ ಅವಮಾನ ಮಾಡಿದವರು ಕ್ಷಮೆ ಕೇಳಬೇಕು ಎಂದರು.