ಪಿಎಫ್‍ಐ ಖಾತೆಗಳನ್ನು ಈ.ಡಿ ಮುಟ್ಟುಗೋಲು ಹಾಕಿರುವುದು ಖಂಡನೀಯ: ಅನೀಸ್ ಅಹ್ಮದ್

Update: 2022-06-02 12:01 GMT

ಬೆಂಗಳೂರು, ಜೂ.2: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಸಂಘಟನೆಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ(ಈ.ಡಿ) ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವುದು ಖಂಡನೀಯ ಎಂದು ಪಿಎಫ್‍ಐ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು. 

ಗುರುವಾರ ನಗರದ ಬೆನ್ಸನ್ ಟೌನ್‍ನ ಎಸ್.ಕೆ.ಗಾರ್ಡನ್‍ನಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಜನಪರ ಚಳವಳಿಗಳು, ಎನ್‍ಜಿಒಗಳು, ಮಾನವ ಹಕ್ಕುಗಳ ಸಂಘಟನೆಗಳು, ವಿರೋಧ ಪಕ್ಷಗಳು, ಮಾಧ್ಯಮಗಳು ಮತ್ತು ಆಡಳಿತ ಪಕ್ಷವನ್ನು ಟೀಕಿಸುವ ದೇಶದ ಯಾವುದೆ ಪ್ರಜಾಸತ್ತಾತ್ಮಕ ಧ್ವನಿಗಳನ್ನು ದಮನಿಸುವ ಮೂಲಕ ಜಾರಿ ನಿರ್ದೇಶನಾಲಯವು ರಾಜಕೀಯ ನಾಯಕರ ದಾಳವಾಗಿ ವರ್ತಿಸುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಕಿಡಿಗಾರಿದರು.

ಪಿಎಫ್‍ಐನಂತಹ ರಾಷ್ಟ್ರಮಟ್ಟದ ಸಾಮಾಜಿಕ ಆಂದೋಲನದ ಕಾರ್ಯನಿರ್ವಹಣೆಗೆ 13 ವರ್ಷಗಳ ಅವಧಿಗೆ ಠೇವಣಿ ಇಡುವುದು ಸಾಮಾನ್ಯ ಸಂಗತಿ. ದೇಶದಲ್ಲಿನ ಪ್ರಮುಖ ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ನಿರ್ವಹಣೆಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಿಧಿಯ ಠೇವಣಿಗಳನ್ನು ಈ ಮೊತ್ತವು ಒಳಗೊಂಡಿದೆ ಎಂದು ಅನೀಸ್ ಅಹ್ಮದ್ ಹೇಳಿದರು.

ನಾವು ಸಂಗ್ರಹಿಸಿದ ಪ್ರತಿ ಪೈಸೆಯ ಲೆಕ್ಕವನ್ನು ಈಗಾಗಲೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ್ದೇವೆ. 2020ರಲ್ಲಿ ಅನೇಕ ಮಾಧ್ಯಮಗಳು ಪಾಪ್ಯುಲರ್ ಫ್ರಂಟ್ 120 ಕೋಟಿ ಸಂಗ್ರಹಿಸಿದೆ ಎಂದು ವರದಿ ಮಾಡಿದ್ದವು. ಈಗ 60 ಕೋಟಿ ಸಂಗ್ರಹಿಸಿದೆ ಎಂದು ಹೇಳುವ ಮೂಲಕ ಹಿಂದಿನ ಸುಳ್ಳು ಪ್ರತಿಪಾದನೆಯನ್ನು ತಾನೆ ನಿರಾಕರಿಸಿದೆ ಎಂದು ಅವರು ತಿಳಿಸಿದರು.

ಅಮ್ನೆಸ್ಟಿ ಇಂಟರ್ ನ್ಯಾಷನಲ್ ಮತ್ತು ಗ್ರೀನ್ ಪೀಸ್‍ನಂತಹ ಪ್ರತಿಷ್ಠಿತ ಎನ್‍ಜಿಒಗಳ ಬ್ಯಾಂಕ್ ಖಾತೆಗಳನ್ನು ಇದೇ ರೀತಿಯಲ್ಲಿ ಸ್ಥಗಿತಗೊಳಿಸಲಾಗಿದೆ. ಎಲ್ಲ ಪಕ್ಷಗಳ ಭ್ರಷ್ಟ ರಾಜಕಾರಣಿಗಳು, ತನಿಖೆಯ ರೂಪದಲ್ಲಿ ನಡೆಯುವ ಈ.ಡಿ.ಯ ಪ್ರತಿಕಾರಕ್ಕೆ ಹೆದರಿ ತಮ್ಮ ಅಕ್ರಮ ಸಂಪತ್ತನ್ನು ಉಳಿಸಿಕೊಳ್ಳಲು ಬಿಜೆಪಿಗೆ ಸೇರುತ್ತಿರುವ ಸಂಗತಿ ಈಗಾಗಲೆ ದೇಶದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ ಎಂದು ಅವರು ಟೀಕಿಸಿದರು.

ಬಿಜೆಪಿ ನಾಯಕರ ಭ್ರಷ್ಟಾಚಾರ ಮತ್ತು ಕಪ್ಪುಹಣದ ವ್ಯವಹಾರಗಳು ನೂರಾರು ಕೋಟಿ ರೂ.ಗಳಷ್ಟಿದ್ದರೂ ಜಾರಿ ನಿರ್ದೇಶನಾಲಯಕ್ಕೆ ಇದೊಂದು ಕಾಳಜಿಯ ವಿಷಯವಲ್ಲ. ವಿರೋಧ ಪಕ್ಷದವರನ್ನು ಗುರಿಯಾಗಿಸಲು ಮತ್ತು ಮೌನಗೊಳಿಸಲು ಬಿಜೆಪಿ ಯಾವಾಗಲೂ ಈ.ಡಿ. ಮತ್ತು ಇತರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ರೀತಿಯನ್ನು ಗಮನಿಸಿದರೆ, ನಮ್ಮ ವಿರುದ್ಧದ ಈ ಕ್ರಮವು ಅಚ್ಚರಿ ಮೂಡಿಸುತ್ತಿಲ್ಲ ಎಂದು ಅನೀಸ್ ಅಹ್ಮದ್ ತಿಳಿಸಿದರು.

ಯಾವುದೆ ಸಣ್ಣ ಮತ್ತು ದೊಡ್ಡಮಟ್ಟದ ಹಣಕಾಸು ವ್ಯವಹಾರಗಳನ್ನು ಪಾರದರ್ಶಕವಾಗಿ ಮಾಡಬೇಕೆಂಬುದು ಸಂಸ್ಥೆ ತನ್ನ ಪ್ರಾರಂಭದಿಂದಲೂ ಅನುಸರಿಸಿಕೊಂಡು ಬಂದ ನೀತಿಯಾಗಿದೆ. ಸಂಘಪರಿವಾರದ ವಿಭಜನಕಾರಿ ರಾಜಕಾರಣದ ವಿರುದ್ಧ ಪಿಎಫ್‍ಐ ತಾಳಿದ ರಾಜಿರಹಿತ ನಿಲುವೆ ಸಂಘಟನೆಯನ್ನು ರಾಜಕೀಯ ಪ್ರೇರಿತ ಪ್ರಕರಣಗಳಲ್ಲಿ ಗುರಿಯಾಗಿಸಲು ಇರುವ ಏಕೈಕ ಕಾರಣ ಎಂದು ಪಿಎಫ್‍ಐ ಕಾರ್ಯದರ್ಶಿ ಮುಹಮ್ಮದ್ ಸಾಕಿಫ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News