ಸಂವಿಧಾನಬದ್ಧ ಚೌಕಟ್ಟಿನಲ್ಲಿ ಇಲ್ಲದ ಪರಿಷ್ಕೃತ ಪಠ್ಯಕ್ರಮ ಕೈಬಿಡಬೇಕು: ಡಾ.ಸಾದ್ ಬೆಳಗಾಮಿ

Update: 2022-06-02 12:37 GMT

ಬೆಂಗಳೂರು, ಜೂ.2: ಇತ್ತೀಚೆಗೆ ಪಠ್ಯಪುಸ್ತಕ ಪರಿಷ್ಕರಣಾ ವಿವಾದವು ಇಡೀ ರಾಜ್ಯದಲ್ಲಿ ಗೊಂದಲವನ್ನು ಉಂಟುಮಾಡಿದ್ದು ರಾಜ್ಯ ಸರಕಾರವು ಇತ್ತೀಚಿನ ದಿನಗಳಲ್ಲಿ ಎಸಗುತ್ತಿರುವ ಹಲವಾರು ಪ್ರಮಾದಗಳಲ್ಲಿ ಇದು ಒಂದು ಹೊಸ ಅಧ್ಯಾಯವಾಗಿದೆ ಎಂದರೆ ತಪ್ಪಾಗದು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರೊಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಹುಟ್ಟುಹಾಕಿದ ಈ ಸಮಿತಿಯು ಪಠ್ಯಪುಸ್ತಕಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲು ಸಿದ್ಧತೆ ನಡೆಸಿದೆ. ನಮ್ಮ ನಾಡಿನಲ್ಲಿ ಅತೀಗೌರವದಿಂದ ನೋಡಲಾಗುವ ಕುವೆಂಪು, ನಾರಾಯಣಗುರು ಹಾಗೂ ಬಸವಣ್ಣನಂತಹ ಸಮಾಜ ಸುಧಾರಕರ ಬೋಧನೆಗಳನ್ನು ತಿರುಚಿ ಆ ಜಾಗದಲ್ಲಿ ಆರೆಸ್ಸೆಸ್ ಚಿಂತಕರಾದ ಹೆಡ್ಗೇವಾರ್ ಮತ್ತು ಸಾವರ್ಕರ್ ರಂತಹವರಿಗೆ ಮಹತ್ವವನ್ನು ನೀಡಲಾಗಿರುವುದನ್ನು ನಾವು ಗಮನಿಸಬಹುದು ಎಂದು ಹೇಳಿದ್ದಾರೆ.

ದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಟಿಪ್ಪು ಸುಲ್ತಾನ್ ಹಾಗೂ ಭಗತ್‌ಸಿಂಗ್‌ರ ಗೌರವಕ್ಕೆ ಚ್ಯುತಿ ಬರುವಂತೆ ಮಾಡಿ ಅದರ ಜಾಗದಲ್ಲಿ ಯಾರು ವಿಭಜಕ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೊ ಅಂತವರನ್ನು ಮುನ್ನೆಲೆಗೆ ತರುವಂತಹ ಪಿತೂರಿ ನಡೆಯುತ್ತಿದೆ ಎಂದು ಮುಹಮ್ಮದ್ ಸಾದ್ ಬೆಳಗಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ಅರ್ಹತೆ ಅವರು ಹಿಂದುತ್ವ ಸಿದ್ಧಾಂತದ ಪ್ರತಿಪಾದಕರಾಗಿದ್ದಾರೆ ಎಂಬುವುದನ್ನು ಹೊರತುಪಡಿಸಿ ಮತ್ತೇನೂ ಅಲ್ಲ. ಬ್ರಾಹ್ಮಣರನ್ನು ಹೊರತುಪಡಿಸಿ ಈ ಸಮಿತಿಯಲ್ಲಿ ಮಹಿಳೆಯರನ್ನಾಗಲಿ, ಅಲ್ಪಸಂಖ್ಯಾತರನ್ನಾಗಲಿ ಅಥವಾ ಹಿಂದುಳಿದ ವರ್ಗದವರನ್ನಾಗಲಿ ಯಾವುದೇ ಜಾಗ ನೀಡದಿರುವುದು ದುರಂತವೇ ಸರಿ ಎಂದು ಅವರು ಕಿಡಿಗಾರಿದ್ದಾರೆ.

ನಾಡಿನ ಬಹುತೇಕ ಚಿಂತಕರು, ಸಾಹಿತಿಗಳು, ಧರ್ಮಗುರುಗಳು, ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸುವ ಪ್ರಗತಿಪರರು, ಶಿಕ್ಷಣ ತಜ್ಞರು ಹೀಗೆ ಪ್ರತಿಯೊಬ್ಬ ಕಾಳಜಿ ಉಳ್ಳವರು ಈ ಪಠ್ಯಪುಸ್ತಕ ಪರಿಷ್ಕರಣಕಾರ್ಯದ ವಿರುದ್ಧ ತಮ್ಮ ಧ್ವನಿ ಎತ್ತಿದ್ದು ಸರಕಾರ ಈಗಲಾದರೂ ಎಚ್ಚೆತ್ತು ಈ ಕೆಲಸವನ್ನು ತಕ್ಷಣ ಕೈಬಿಟ್ಟು ರಾಜ್ಯದ ಗೌರವವನ್ನು ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ಸಮಾಜದಲ್ಲಿ ಇದರಿಂದಾಗಿ ಅನಗತ್ಯ ಗೊಂದಲ ಉಂಟಾಗುತ್ತಿರುವುದು ನಿತ್ಯ ನಾವು ಕಾಣುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಬೇಡಿಕೆಗಳು ಈ ಕೆಳಗಿನಂತಿವೆ. ಸರಕಾರವು ಈ ಸಮಿತಿಯನ್ನು ಕೂಡಲೆ ರದ್ದುಗೊಳಿಸಬೇಕು. ಈ ಹಿಂದೆ ಇದ್ದಂತಹ ಪಠ್ಯಕ್ರಮವನ್ನೇ ಮುಂದುವರೆಸಬೇಕು. ಸಂವಿಧಾನಬದ್ಧ ಚೌಕಟ್ಟಿನಲ್ಲಿ ಇಲ್ಲದ ಈ ಪರಿಷ್ಕರಣ ಪಠ್ಯಕ್ರಮವನ್ನು ಕೈಬಿಡಬೇಕು ಎಂದು ಮುಹಮ್ಮದ್ ಸಾದ್ ಬೆಳಗಾಮಿ ಆಗ್ರಹಿಸಿದ್ದಾರೆ. 

ನಾಡಿನ ಮೌಲ್ಯ, ಬಹುತ್ವ, ಸಾಮರಸ್ಯವನ್ನು ಎತ್ತಿಹಿಡಿಯುವಂತಹ ಪಠ್ಯಕ್ರಮವನ್ನು ಮಕ್ಕಳಿಗೆ ಬೋಧಿಸಬೇಕು. ಒಟ್ಟಾರೆ ಪಠ್ಯಪುಸ್ತಕ ಎಂಬುವುದು ಯಾವುದೆ ರಾಜಕೀಯ ಪಕ್ಷದ ಸಿದ್ಧಾಂತವನ್ನು ಕಲಿಸುವಂತಹದ್ದಲ್ಲ. ಬದಲಾಗಿ ನಮ್ಮ ದೇಶದ ಜಾತ್ಯತೀತ ಮೌಲ್ಯಗಳ ಪ್ರತಿಬಿಂಬವನ್ನು ಸಾರುವಂತಹದಿರಬೇಕು ಎಂದು ಅವರು ಸರಕಾರವನ್ನು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News