ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದಿಂದಲೆ ಎರಡನೆ ಅಭ್ಯರ್ಥಿ ಕಣಕ್ಕೆ: ಸಿದ್ದರಾಮಯ್ಯ

Update: 2022-06-03 14:20 GMT
ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲಿ ಕಾಂಗ್ರೆಸ್ ನಾಯಕರು

ಬೆಂಗಳೂರು, ಜೂ.3: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂ.10ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದಿಂದಲೆ ಕಾಂಗ್ರೆಸ್ ಪಕ್ಷದ ಎರಡನೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ನಾವು ಯಾವ ಕಾರಣಕ್ಕಾಗಿ ನಾಮಪತ್ರವನ್ನು ಹಿಂಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಶುಕ್ರವಾರ ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‍ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ದ್ವಿತೀಯ ಪ್ರಾಶಸ್ತ್ಯದ 71 ಮತಗಳು ನಮಗೆ ಲಭ್ಯವಿದೆ. ಅಲ್ಲದೆ, ಬೇರೆ ಶಾಸಕರ ಮತಗಳು ನಮಗೆ ಸಿಗುತ್ತವೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಮಗೆ ಹಲವು ಶಾಸಕರು ಮತ ಹಾಕುತ್ತಾರೆ, ಇದರಿಂದಾಗಿ ನಾವು ಗೆಲ್ಲುತ್ತೇವೆ. ನಮಗೆ ಹೈಕಮಾಂಡ್‍ನವರೇ ಮನ್ಸೂರ್ ಅಲಿ ಖಾನ್ ಅವರನ್ನು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ಹೇಳಿರುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಎನ್.ಎಸ್.ಯು.ಐ ವಿದ್ಯಾರ್ಥಿ ಸಂಘಟನೆಯ ಮುಖಂಡ ಕೀರ್ತಿ ಗಣೇಶ್ ನಾಯಕತ್ವದಲ್ಲಿ ಜೂ.1ರಂದು ಶಿಕ್ಷಣ ಸಚಿವ ನಾಗೇಶ್ ನಿವಾಸದ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಅನ್ಯಾಯ, ಅಕ್ರಮಗಳ ವಿರುದ್ಧ ಪ್ರತಿಭಟನೆ, ಚಳವಳಿ ಮಾಡುವುದು ಸಂವಿಧಾನ ನೀಡಿರುವ ಹಕ್ಕು. ಇದಕ್ಕೆ ಕಾನೂನಿನ ರಕ್ಷಣೆ ಇದೆ. ಅದನ್ನೇ ವಿದ್ಯಾರ್ಥಿಗಳು ಮಾಡಿರುವುದು ಎಂದು ಅವರು ಹೇಳಿದರು.

ಆರೆಸ್ಸೆಸ್‍ನವರು ಹಿಂದೆ ಚಡ್ಡಿ ಹಾಕುತ್ತಿದ್ದರು, ಈಗ ಪ್ಯಾಂಟ್ ಹಾಕುತ್ತಿದ್ದಾರೆ. ನಮ್ಮವರು ಪ್ರತಿಭಟನೆ ಸಂದರ್ಭದಲ್ಲಿ ಸಾಂಕೇತಿಕವಾಗಿ ಒಂದೇ ಒಂದು ಚಡ್ಡಿ ಸುಟ್ಟು ಹಾಕಿದ್ದಾರೆ. ಅದು ಪೊಲೀಸರಿಗೆ ಮತ್ತು ಸರಕಾರಕ್ಕೆ ದೊಡ್ಡ ಅಪರಾಧವಾಗಿ ಕಂಡಿದೆ. ಇವರೇನು ಮನೆಗೆ ಬೆಂಕಿ ಹಚ್ಚುವ ಅಥವಾ ಬೆಂಕಿಯನ್ನು ಸಮಾಜ ವಿರೋಧಿ ಕೆಲಸಕ್ಕೆ ಬಳಸಿಲ್ಲ. ಇದು ಕಾನೂನು ವಿರೋಧಿ ಕೃತ್ಯ ಹೇಗಾಗುತ್ತದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕಾನೂನು ಉಲ್ಲಂಘನೆಗಾಗಿ ಗುಂಪುಗೂಡಿರುವುದು ಹೇಗಾಗುತ್ತೆ? ಒಬ್ಬರೇ ಪ್ರತಿಭಟನೆ ಮಾಡೋಕಾಗುತ್ತಾ? ಇವರು ಕಾಂಪೌಂಡ್ ಗೇಟ್‍ನ ಒಳಗಡೆ ಪ್ರವೇಶಿಸಿದ್ದಾರೆ, ಮನೆಗೆ ಪ್ರವೇಶ ಮಾಡಿಲ್ಲ. ಆಗ ಪೊಲೀಸರು ಏನು ಮಾಡುತ್ತಿದ್ದರು? ತಡೆಯಬೇಕಿತ್ತು ಅಲ್ವ? ಈಶ್ವರಪ್ಪ 144 ಸೆಕ್ಷನ್ ಹಾಕಿದಾಗ ಮೆರವಣಿಗೆ ಮಾಡಿದ್ದು ಕಾನೂನು ಉಲ್ಲಂಘನೆ ಅಲ್ಲವೇ? ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಜನರಲ್ಲಿ ದ್ವೇಷ ಭಾವನೆ ಹುಟ್ಟು ಹಾಕುವ ಕೆಲಸ ಮಾಡಿದ ಈಶ್ವರಪ್ಪ ಅವರ ಮೇಲೆ ಗೃಹ ಸಚಿವರು ಏನು ಕ್ರಮ ಕೈಗೊಂಡಿದ್ದಾರೆ? ಅವರೂ ಶಿವಮೊಗ್ಗ ಜಿಲ್ಲೆಯವರೇ ಅಲ್ವಾ? ಬೀದರ್‍ನಲ್ಲಿ 144 ಸೆಕ್ಷನ್ ಇದ್ದಾಗ ಕೇಂದ್ರ ಸಚಿವ ಭಗವಂತ್ ಖೂಬಾ ಕಾನೂನು ಉಲ್ಲಂಘನೆ ಮಾಡಿದ್ರು, ಅವರ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ? 25-30 ಜನ ಎನ್.ಎಸ್.ಯು.ಐ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದರೆ ಕಾನೂನು ಉಲ್ಲಂಘನೆ ಹೇಗಾಗುತ್ತೆ? ಎಂದು ಅವರು ಪ್ರಶ್ನಿಸಿದರು.

ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯ ಪರಿಷ್ಕರಣೆ ಸಮಿತಿ ಮಾಡಿ, ಪಠ್ಯವನ್ನು ಕೇಸರೀಕರಣ ಮಾಡುತ್ತಿದ್ದಾರೆ ಎಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈ ಬಗ್ಗೆ 71 ಸಾಹಿತಿಗಳು ಪ್ರತಿಭಟನೆ ಮಾಡಿ, ಸರಕಾರಕ್ಕೆ ಪತ್ರವನ್ನು ಬರೆದಿದ್ದಾರೆ, 10 ಮಂದಿ ಸಾಹಿತಿಗಳು ನಮ್ಮ ಸಾಹಿತ್ಯವನ್ನು ಪಠ್ಯದಿಂದ ತೆಗೆದುಹಾಕಿ ಎಂದು ಹೇಳಿದ್ದಾರೆ. ಪ್ರತಿಭಟನೆ ಮಾಡುವುದು ನಾಗರಿಕರ ಮೂಲಭೂತ ಹಕ್ಕು, ಅದನ್ನೇ ನಮ್ಮ ವಿದ್ಯಾರ್ಥಿ ಸಂಘಟನೆಗಳು ಮಾಡಿವೆ. ಅವರ ಮೇಲೆ ಕೇಸ್ ದಾಖಲು ಮಾಡಿರುವುದು ತಪ್ಪು ಎಂದು ಸಿದ್ದರಾಮಯ್ಯ ಹೇಳಿದರು. 

ಅದೇ ದಿನ ತುಮಕೂರಿನಲ್ಲಿ ಕೆಡಿಪಿ ಸಭೆ ಇತ್ತು, ಗೃಹ ಸಚಿವ ಆರಗ ಜ್ಞಾನೇಂದ್ರ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು. ಅವರು ಪೊಲೀಸರ ಮೇಲೆ ಒತ್ತಡ ಹಾಕಿ ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿಸಿ, ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅವರು ಆರೋಪಿಸಿದರು. 

ಪ್ರತಿಭಟನೆ ಮಾಡುವವರನ್ನು ಕರೆದುಕೊಂಡು ಹೋಗಿ ಒಂದು ಸಹಿ ಪಡೆದು ಬಿಟ್ಟು ಕಳುಹಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಗೃಹ ಸಚಿವರು ಎಲ್ಲಿ ಕ್ರಮ ಕೈಗೊಳ್ಳಬೇಕು ಅಲ್ಲಿ ಕ್ರಮ ತಗೊಳಲ್ಲ. ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಆರೇಳು ಜನ ರೌಡಿ ಶೀಟರ್‍ಗಳು ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಎಂದು ಅವರು ತರಾಟೆಗೆ ತೆಗೆದುಕೊಂಡರು. 

ರೋಹಿತ್ ಮತ್ತು ಮಂಜು ಎಂಬ ರೌಡಿ ಶೀಟರ್‍ಗಳು ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿದ್ದಾರೆ? ಅವರ ಬಂಧನ ಆಗಿದೆಯಾ? ನಾವು ಇದನ್ನು ಸಹಿಸಿಕೊಂಡು ಸುಮ್ಮನಿರಲ್ಲ. ಪ್ರತಿಭಟನಾ ನಿರತರ ಮೇಲೆ ಹಲ್ಲೆ ಮಾಡಿದವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು, ಕೇಸ್ ದಾಖಲಿಸಿ ಬಂಧನವಾಗಬೇಕು. ಇಲ್ಲದಿದ್ದರೆ, ಸರಕಾರ, ಗೃಹ ಸಚಿವರು, ಶಿಕ್ಷಣ ಸಚಿವ ನಾಗೇಶ್ ವಿರುದ್ಧ ಹೋರಾಟ ರೂಪಿಸುತ್ತೇವೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು. 

ಕರ್ನಾಟಕ ಗೂಂಡಾಗಳ ರಾಜ್ಯವಾಗುತ್ತಿದೆ, ಸರ್ವಾಧಿಕಾರದ ರಾಜ್ಯವಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಈ ರೀತಿ ವರ್ತನೆ ಇರುತ್ತಾ? ನಾವು ಆಡಳಿತ ಮಾಡಿದ್ದೇವೆ, ನಮ್ಮ ಕಾಲದಲ್ಲೂ ಪ್ರತಿಭಟನೆ ನಡೆದಿವೆ, ನಾವು ಇವರಂತೆ ಜೈಲಿಗೆ ಕಳುಹಿಸುವ ಕೆಲಸ ಮಾಡಿಲ್ಲ ಎಂದು ಅವರು ಹೇಳಿದರು. 

ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ವಿರೋಧ ಪಕ್ಷಗಳು ಸರಕಾರದ ತಪ್ಪುಗಳನ್ನು ಹೇಳಲು ಅವಕಾಶ ಇರಬೇಕು. ಇದನ್ನು ಸರಕಾರ ಹತ್ತಿಕ್ಕುವ ಕೆಲಸ ಮಾಡಿದರೆ ಕಾನೂನು ಸುವ್ಯವಸ್ಥೆ ಇನ್ನಷ್ಟು ಹದಗೆಡುತ್ತದೆ ಎಂಬ ಎಚ್ಚರಿಕೆಯನ್ನು ಸರಕಾರಕ್ಕೆ ನೀಡುತ್ತಿದ್ದೇನೆ. ಇನ್ನೊಮ್ಮೆ ಈ ರೀತಿ ಸುಳ್ಳು ಕೇಸ್ ದಾಖಲಿಸಿದರೆ ಇಡೀ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಅವರು ತಿಳಿಸಿದರು. 

ಈಗಾಗಲೇ ಸರಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಜನ ಶಾಪ ಹಾಕುತ್ತಿದ್ದಾರೆ, ಈ ಸರಕಾರ ತೊಲಗಿದ್ರೆ ಸಾಕು ಎಂದು ಕಾಯುತ್ತಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಾಶಮಾಡುವ ಕೆಲಸ ಮಾಡಬಾರದು. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಗೂಂಡಾಗಳ ಮೂಲಕ ಹಲ್ಲೆ ಮಾಡಿರುವುದನ್ನು ನಾನು ಖಂಡಿಸುತ್ತೇನೆ. ತಕ್ಷಣ ಅವರ ಬಂಧನವಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News