VIDEO- ನಮ್ಮ ಜಿಲ್ಲೆಯೊಳಗೇ ನಮಗೆ ವರ್ಗಾವಣೆ ಕೊಡಿ: ಸರಕಾರಿ ಶಾಲೆಗಳ ಶಿಕ್ಷಕಿಯರ ಪ್ರತಿಭಟನೆ
ಬೆಂಗಳೂರು, ಜೂ.3: ರಾಜ್ಯ ಸರಕಾರ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಇತ್ತೀಚೆಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ, ತಮ್ಮ ತವರು ಜಿಲ್ಲೆಗಳಿಗೆ ವರ್ಗಾವಣೆ ಮಾಡಲು ನಿರಾಕರಿಸಿರುವ ಸರಕಾರದ ವಿರುದ್ಧ ಸರಕಾರಿ ಶಾಲಾ ಶಿಕ್ಷಕರು ಪ್ರತಿಭಟನೆ ನಡೆಸಿದರು.
ನಗರದ ಫ್ರೀಡಂ ಪಾರ್ಕ್ನಲ್ಲಿ ಜಮಾಯಿಸಿದ ನೂರಾರು ಶಾಲಾ ಶಿಕ್ಷಕರು, ಕಳೆದ 10 ವರ್ಷಗಳಿಂದ ತಾವು ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದು ಹಲವು ವರ್ಷಗಳಿಂದ ತಮ್ಮ ವರ್ಗಾವಣೆ ಬಾಕಿಯಿದೆ. ನಮ್ಮ ಜಿಲ್ಲೆಯೊಳಗೇ ನಮಗೆ ವರ್ಗಾವಣೆ ಕೊಡಿ ಎಂದು ಪ್ರತಿಭಟಿಸುವ ಮೂಲಕ ಸರಕಾರದ ವಿರುದ್ಧ ಸೆಟೆದು ನಿಂತಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯಿದೆ, 2020ಕ್ಕೆ ತಿದ್ದುಪಡಿಯನ್ನು ಮಾಡಲಾಗಿದ್ದು, ಶಿಕ್ಷಕರಿಗೆ ಅವರ ತವರು ಜಿಲ್ಲೆಗಳಿಗೆ ವರ್ಗಾವಣೆಗೆ ಒಂದು ಬಾರಿ ಆಯ್ಕೆಯನ್ನು ನೀಡಲಾಗಿದೆ.
ಹುದ್ದೆಗಳ ಕೊರತೆಯ ನೆಪವೊಡ್ಡಿ ಸರಕಾರ ತಮ್ಮ ವರ್ಗಾವಣೆಗೆ ನಿರಾಕರಿಸುತ್ತಿದೆ ಎಂದು ಪ್ರತಿಭಟನೆಯನ್ನು ಆರಂಭಿಸಿದ್ದೇವೆ. ನಮ್ಮ ಜಿಲ್ಲೆಗಳಲ್ಲಿ ಅಥವಾ ನಮ್ಮ ಜಿಲ್ಲೆಗಳಿಗೆ ಹತ್ತಿರವಿರುವ ಜಿಲ್ಲೆಗಳಲ್ಲಿ ನಮಗೆ ಹುದ್ದೆ ಕೊಟ್ಟರೆ ನಮ್ಮ ಕುಟುಂಬದವರನ್ನು ನೋಡಲು ಸಹಕಾರಿಯಾಗುತ್ತದೆ, ಇದಕ್ಕಾಗಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾ ನಿರತ ಶಿಕ್ಷಕಿಯೊಬ್ಬರು ಹೇಳಿದ್ದಾರೆ.
ನಾವು ನಮ್ಮ ಮಕ್ಕಳು ಮತ್ತು ಕುಟುಂಬಗಳನ್ನು ಭೇಟಿ ಮಾಡಲು ನಮ್ಮ ಜಿಲ್ಲೆಯೊಳಗಿದ್ದರೆ ಅನುಕೂಲವಾಗುತ್ತದೆ. ವಿಶೇಷವಾಗಿ ನಮ್ಮ ಕುಟುಂಬದಿಂದ ದೂರವಿರುವ ಚಿಕ್ಕ ಮಕ್ಕಳಿರುವ ನಮ್ಮಂತಹವರಿಗೆ, ಅವರನ್ನು ನೋಡಿಕೊಳ್ಳಲು ಜನ ಸಿಗುವುದಿಲ್ಲ ಎಂದು ಶಿಕ್ಷಕಿಯೊಬ್ಬರು ಹೇಳಿಕೊಂಡರೆ, ಇನ್ನು ಕೆಲವರು ವಿಚ್ಛೇದನದ ಕಾರಣವನ್ನೂ ಸಹ ನೀಡಿದರು.