×
Ad

ದೇರಳಕಟ್ಟೆ: ಕಸಾಪ 'ಕನ್ನಡ ಸಂಭ್ರಮ' ಉದ್ಘಾಟನೆ

Update: 2022-06-04 22:05 IST

ಕೊಣಾಜೆ: ಇಂದು ಶಿಕ್ಷಣ ಸಂಸ್ಥೆಗಳು ವ್ಯಾಪಾರ ಕೇಂದ್ರಗಳಾಗಿ ಬದಲಾಗುತ್ತಿವೆ. ದೇಶ ನಿರ್ಮಾಣ ಮಾಡುವ, ಸಮಾನತೆಯ ಸಮಾಜವನ್ನು ರೂಪಿಸುವ ವಿದ್ಯಾಕೇಂದ್ರಗಳು ಭಾಷೆ, ಸಾಹಿತ್ಯ ಸಂಸ್ಜೃತಿ ಕುರಿತು ಅಭಿಮಾನ ಹುಟ್ಟಿಸುವ ಕಾರ್ಯಕ್ರಮಗಳನ್ನು ನಡೆಸಬೇಕಿದೆ ಎಂದು ಕರ್ನಾಟಕ ಸರಕಾರದ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ರೈ ಉಳಿದೊಟ್ಟು ಹೇಳಿದರು.

ಅವರು ಶನಿವಾರ  ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ದೇರಳಕಟ್ಟೆ ವಿದ್ಯಾರತ್ನ ವಿದ್ಯಾಲಯದಲ್ಲಿ ನಡೆದ ಕನ್ನಡ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಮನಸ್ಸನ್ನು ಆರೋಗ್ಯಯುತವಾಗಿಡುವ ಸಾಹಿತ್ಯ ಚಟುವಟಿಕೆಗಳು ಹೆಚ್ಚಾಗಬೇಕಿದ್ದು ಸಾಹಿತ್ಯ ಪರಿಷತ್ತಿನ ಸದಸ್ಯರಾಗುವ ಮೂಲಕ ಕನ್ನಡ ಚಟುವಟಿಕೆಗಳಿಗೆ ಬೆಂಬಲ ನೀಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಂಬಯಿ ಕಲಾ ಜಗತ್ತಿನ ನಿರ್ದೇಶಕ, ಸಿನಿಮಾ ನಿರ್ಮಾಪಕ ಡಾ. ವಿಜಯ ಕುಮಾರ್ ತೋನ್ಸೆ ಮಾತನಾಡಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಕಲರವ ಉಂಟುಮಾಡುವ ಉಳ್ಳಾಲ ಕಸಾಪದ ಪ್ರಯತ್ನ ಶ್ಲಾಘನೀಯ. ಮಕ್ಕಳಿಗೆ ಪುಸ್ತಕದ ಓದಿನ ಜೊತೆಗೆ ಜೀವನ ಪಾಠವನ್ನು ವಿವರಿಸಬೇಕಿದೆ ಎಂದರು.

ಕನ್ನಡ ಹೃದಯದ ಭಾಷೆ : ಕುಂಬ್ಳೆ

ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ ಜಿಲ್ಲಾ ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಮಾತನಾಡಿ ಕನ್ನಡ ನಮ್ಮ ಹೃದಯದ ಭಾಷೆ. ಇಂಗ್ಲಿಷ್ ವ್ಯಾವಹಾರಿಕ ಭಾಷೆ. ಇಂಗ್ಲಿಷ್ ನಿಂದ ಪದವಿ ಉದ್ಯೋಗ ಸಿಗಬಹುದು. ಆದರೆ ಕನ್ನಡ ತುಳುವಿನಿಂದ ನೆಮ್ಮದಿ ದೊರಕುವುದು. ಎಲ್ಲಿ ಹೋದರೂ ಮಾತೃಭಾಷೆ ಮತ್ತು  ನಮ್ಮ ಸಂಬಂಧಗಳನ್ನು ಮರೆಯದಿರೋಣ ಎಂದರು.

ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಕಲ್ಲಿಮಾರು ಇವರು ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ: ಸ್ವರೂಪ ಮತ್ತು ವಿನ್ಯಾಸ ಎಂಬ ವಿಷಯದ ಕುರಿತಾಗಿ ಮಾರ್ಗದರ್ಶಿ ಉಪನ್ಯಾಸ ನೀಡಿದರು. ಸ್ವಚ್ಛ,ಸ್ಪಷ್ಟ ಭಾಷೆ ಮತ್ತು ವಿಷಯದ ಬಗ್ಗೆ ಜ್ಞಾನವಿಲ್ಲದಿದ್ದರೆ ಯಾರೂ ಉತ್ತಮ ಮಾತುಗಾರನಾಗಲು ಸಾಧ್ಯವಿಲ್ಲ.ಇದು ಸಭಾ ಕಾರ್ಯಕ್ರಮ ನಿರೂಪಕರಿಗೂ ಅನ್ವಯಿಸುವುದು ಎಂದರು. 

ಕವಿ ಗುಣಾಜೆ ರಾಮಚಂದ್ರ ಭಟ್ ಸ್ವಾಗತಿಸಿದರು. ಅಧ್ಯಾಪಕ ನವೀನ್ ರಾವ್ ವಂದಿಸಿದರು. ಕಾರ್ಯಕ್ರಮ ಸಂಚಾಲಕ ರವಿಕುಮಾರ್ ಕೋಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಭ್ರಮದ ಅಂಗವಾಗಿ ಆಯೋಜಿಸಿದ ಕನ್ನಡ ಭಾಷಣ, ಭಾವಗೀತೆ, ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಕನ್ನಡ ಗೀತಗಾಯನ ಮತ್ತು ಜಾನಪದ ನೃತ್ಯ ಕಾರ್ಯಕ್ರಮಗಳು ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News