ಸುಳ್ಯದಲ್ಲಿ ಯುವಕನ ಮೇಲೆ ಗುಂಡಿನ ದಾಳಿ ಪ್ರಕರಣ; ಮೂವರು ಆರೋಪಿಗಳ ಬಂಧನ

Update: 2022-06-09 14:52 GMT
ಕೆ.ಜಯನ್, ವಿನೋದ್, ಎಚ್.ಎಸ್.ಮನೋಜ್

ಸುಳ್ಯ:  ಜೂ.6ರಂದು ರಾತ್ರಿ ವಾಹನದಲ್ಲಿ ಬಂದ ತಂಡ ಮಹಮ್ಮದ್ ಸಾಯಿ(39) ಎಂಬವರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣವನ್ನು ಪತ್ತೆ ಹಚ್ಚಿರುವ ಪೊಲೀಸರು 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಡಗು ಕುಶಾಲನಗರದ ಕೆ. ಜಯನ್ (38), ಮಡಿಕೇರಿಯ ವಿನೋದ್ (34), ಎಚ್.ಎಸ್ ಮನೋಜ್ (25) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ನಾಡ ಪಿಸ್ತೂಲು ಮತ್ತು ಎರಡು ಸಜೀವ ತೋಟೆಗಳನ್ನು ಹಾಗೂ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವೊಂದು ವಿಚಾರದಲ್ಲಿ ಉಂಟಾದ ವೈಷಮ್ಯದಿಂದ ಈ ದಾಳಿ ನಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಲ್ಲಿ ಜಯನ್ ಎಂಬಾತ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಜೂ.6 ರಂದು ರಾತ್ರಿ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸುಳ್ಯದ ಜ್ಯೋತಿ ಸರ್ಕಲ್ ಹತ್ತಿರ ವೆಂಕಟರಮಣ ಸೊಸೈಟಿ ಬಳಿಯಲ್ಲಿ ಘಟನೆ ನಡೆದಿದ್ದು, ಸುಳ್ಯ ಜಯನಗರದ ಮಹಮ್ಮದ್ ಸಾಯಿ ಎಂಬವರ ಮೇಲೆ ಸ್ಕಾರ್ಪಿಯೋದಲ್ಲಿ ಬಂದ ತಂಡ ಗುಂಡಿನ ದಾಳಿ ನಡೆಸಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರತ್ಯೇಕ ತಂಡ ರಚನೆ ಮಾಡಿ ತನಿಖೆ ನಡೆಸಿ ಕೇವಲ 3 ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋಣಾವನೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ, ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನಾ ಪಿ ಕುಮಾರಿ ಮತ್ತು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನ್ ಚಂದ್ರ ಜೋಗಿ ಅವರ ಮಾರ್ಗದರ್ಶನದಲ್ಲಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ದಿಲೀಪ್ ಜಿ ಆರ್ ಮತ್ತು ತಂಡ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸುಳ್ಯ ಎಸ್‍ಐ ದಿಲೀಪ್ ಜಿ.ಆರ್, ಅಪರಾಧ ವಿಭಾಗದ ಎಸ್.ಐ ರತ್ನಕುಮಾರ್, ಪಿಎಸ್‍ಐ ಸರಸ್ವತಿ ಬಿ.ಟಿ, ಎಎಸ್‍ಐಗಳಾದ ರವೀಂದ್ರ, ಶಿವರಾಮ, ಹೆಚ್.ಸಿಗಳಾದ ಧನೇಶ್, ಉದಯ ಗೌಡ, ಪಿಸಿಗಳಾದ ಅನಿಲ್, ಅನುಕುಮಾರ್, ಹೈದರಾಲಿ, ಸುನಿಲ್ ತಿವಾರಿ, ನಾಗರಾಜ್, ಇತರ ಸಿಬ್ಬಂದಿ  ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News