‘ಇ-ವಿಧಾನ್’ ಯೋಜನೆ ಹೆಸರಲ್ಲಿ 254 ಕೋಟಿ ರೂ.ಹಗರಣ: ರಮೇಶ್ ಬಾಬು ಆರೋಪ

Update: 2022-06-23 11:47 GMT

ಬೆಂಗಳೂರು, ಜೂ.23: ರಾಜ್ಯ ವಿಧಾನಮಂಡಲದಲ್ಲಿ ಕಾಗದ ರಹಿತ ಆಡಳಿತ ವ್ಯವಸ್ಥೆ ತರುವ ಉದ್ದೇಶದ ಇ-ವಿಧಾನ್ ಯೋಜನೆ ಹೆಸರಲ್ಲಿ ಅಧಿಕಾರಿಗಳು 254 ಕೋಟಿ ರೂ. ಹಗರಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ವಿಧಾನಸಭೆಯ ಕಾರ್ಯದರ್ಶಿಗಳ ಮಟ್ಟದಲ್ಲಿ 254 ಕೋಟಿ ರೂ.ಮೊತ್ತದ ಹಗರಣ ಮಾಡಲು ಮುಂದಾಗಿದ್ದು, ಈ ಕುರಿತು ಮೇ 5 ಹಾಗೂ 7 ರಂದು ವಿಧಾನಸಭೆ ಸ್ಪೀಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ನಂತರ ಸ್ಪೀಕರ್ ಅವರನ್ನು ಭೇಟಿ ಮಾಡಿಯೂ ಈ ವಿಚಾರವಾಗಿ ಮನವಿ ಮಾಡಿದ್ದೆ ಎಂದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯ ಮುಖ್ಯಸ್ಥರಾಗಿ ಸದನದ ಹಣವನ್ನು ಕಾಪಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಸಾರ್ವಜನಿಕರ ವಿರೋಧದ ನಡುವೆಯೂ ಅಧಿಕಾರಿಗಳು ವಿಧಾನಸಭೆಯ ಸಚಿವಾಲಯಗಳಲ್ಲಿ ಕಾಗದ ರಹಿತ ವ್ಯವಸ್ಥೆಯನ್ನು ತರುವ ಜವಾಬ್ದಾರಿಯನ್ನು ಕಿಯೋನಿಕ್ಸ್ ಎಂಬ ಖಾಸಗಿ ಕಂಪನಿಗೆ ನೀಡುವ ಮೂಲಕ ತಮ್ಮ ಜೇಬು ತುಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

2017-18ರಲ್ಲಿ ಕಾಂಗ್ರೆಸ್ ಸರಕಾರ ತನ್ನ ಆಯವ್ಯಯದಲ್ಲಿ ಕರ್ನಾಟಕ ವಿಧಾನಮಂಡಲದಲ್ಲಿ ಕಾಗದ ರಹಿತ ಯೋಜನೆಯ ಇ-ವಿಧಾನ ಕಾರ್ಯಕ್ರಮ ಜಾರಿಗೊಳಿಸಲು ಪ್ರಾಥಮಿಕವಾಗಿ ಮೂಲಭೂತ ಸೌಕರ್ಯಗಳಿಗೆ 20 ಕೋಟಿ ರೂ. ಬಿಡುಗಡೆ ಮತ್ತು ಈ ಯೋಜನೆಗೆ 250 ಕೋಟಿ ರೂ.ಗಳ ಅನುದಾನ ಘೋಷಣೆ ಮಾಡಿತ್ತು ಎಂದು ರಮೇಶ್ ಬಾಬು ತಿಳಿಸಿದರು.

ನಂತರ ಕೇಂದ್ರ ಸರಕಾರ ಒಂದು ರಾಷ್ಟ್ರ ಒಂದು ವಿಧ ಎಂಬ ಉದ್ದೇಶದಿಂದ ಎಲ್ಲ ಕಡೆ ಒಂದೇ ರೀತಿಯ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆ ಅಂದರೆ ಸಂಸದೀಯ ವ್ಯವಹಾರಗಳ ಸಚಿವಾಲಯದ ಮೂಲಕ ಮೇವಾ ಎಂಬ ಯೋಜನೆ ಘೋಷಿಸಿತ್ತು ಎಂದು ಅವರು ಹೇಳಿದರು.

ಯಾವ ರಾಜ್ಯಗಳ ಕಾಗದ ರಹಿತ ವ್ಯವಸ್ಥೆ ಜಾರಿಗೆ ಮುಂದೆ ಬರುತ್ತವೋ ಆ ರಾಜ್ಯಗಳಿಗೆ 60:40 ಅನುದಾನದ ನೀಡಲು ತೀರ್ಮಾನಿಸಲಾಗಿತ್ತು. ಅದಕ್ಕೆ ಅನುಗುಣವಾಗಿ 2018ರಲ್ಲಿ ಆಗಿನ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಕೇಂದ್ರಕ್ಕೆ ಪತ್ರ ಬರೆದು ಈ ಯೋಜನೆ ಜಾರಿಗೆ ಆಸಕ್ತಿ ಇದ್ದು ಇದರ ಡಿಪಿಆರ್ ಕಳುಹಿಸಿ, ಕೇಂದ್ರದ ಶೇ.60ರಷ್ಟು ಅನುದಾನ ಬಳಸಿಕೊಳ್ಳುವುದಾಗಿ ತಿಳಿಸಿದ್ದರು. ನಂತರ ರಾಜ್ಯ ಸರಕಾರಕ್ಕೆ ಕೇಂದ್ರ ಪತ್ರ ಬರೆದು ಈ ಯೋಜನೆಯ ಕಾರ್ಯಾಗಾರ ಏರ್ಪಡಿಸಲಾಗಿದ್ದು, ನಿಮ್ಮ ಸಚಿವಾಲಯದ ಅಧಿಕಾರಿಗಳನ್ನು ಕಳುಹಿಸಿಕೊಡಿ ಎಂದು ತಿಳಿಸಿತ್ತು ಎಂದು ಅವರು ತಿಳಿಸಿದರು.

ಇದಕ್ಕೆ ಅನುಗಣವಾಗಿ ಉಭಯ ಸದನಗಳ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು. ನಂತರ ಹಲವು ವಿಚಾರ ಸಂಕಿರಣ ನಡೆದಿದ್ದು, ಕಾಗೇರಿ ಹಾಗೂ ವಿಧಾನಪರಿಷತ್ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಭಾಗವಹಿಸಿದ್ದರು. ಈ ಸಮ್ಮೇಳನದ ನಂತರ ಸ್ಪೀಕರ್, ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಮೇವಾ ಯೋಜನೆ ಜಾರಿ ಹಾಗೂ ಅದರ ನಿರ್ವಹಣೆ ಮಾಡಲು ಉನ್ನತ ಮಟ್ಟದ ಸಮಿತಿ ಮಾಡಿದರು ಎಂದು ರಮೇಶ್ ಬಾಬು ಹೇಳಿದರು.

2018ರ ಮೇ 8ರಂದು ವಿಧಾನಮಂಡಲದ ಸಚಿವಾಲಯದ ಅಧಿಕಾರಿಗಳು ಹಿಮಾಚಲ ಪ್ರದೇಶದ ವಿಧಾನಸಭಾ ಸಚಿವಾಲಯಕ್ಕೆ ಭೇಟಿ ನೀಡಿ ಅಲ್ಲಿನ ಕಾಗದ ರಹಿತ ಆಡಳಿತದ ಅಧ್ಯಯನ ಮಾಡಿ, ಯೋಜನೆ ಮತ್ತು ಇದರ ತಂತ್ರÀಜ್ಞಾನ ಸಂಬಂಧ ಸಭಾಧ್ಯಕ್ಷರಿಗೆ ವರದಿ ಸಲ್ಲಿಸಿದರು ಎಂದು ರಮೇಶ್ ಬಾಬು ತಿಳಿಸಿದರು.

254 ಕೋಟಿ ರೂ. ಮೊತ್ತದ ಯೋಜನೆಗೆ ಸುಮಾರು 152 ಕೋಟಿ ರೂ. ಕೇಂದ್ರದಿಂದ ಅನುದಾನ ಬರುತ್ತಿತ್ತು. ರಾಜ್ಯ ಸರಕಾರ ಕೇವಲ 101 ಕೋಟಿ ರೂ.ಮಾತ್ರ ನೀಡಬೇಕಾಗಿತ್ತು. ಆದರೆ, ಈ ಮೇವಾ ಯೋಜನೆ ಜಾರಿ ಮಾಡಿದರೆ ಅಧಿಕಾರಿಗಳ ಜೇಬು ತುಂಬುವುದಿಲ್ಲ ಎಂಬ ಉದ್ದೇಶದಿಂದ ಸ್ಪೀಕರ್, ಪರಿಷತ್ತಿನ ಸಭಾಪತಿಯ ದಾರಿ ತಪ್ಪಿಸಿ ಇದನ್ನು ಖಾಸಗಿಯವರಿಗೆ ನೀಡಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.

ವಿಧಾನಸಭೆ ಅಧಿಕಾರಿಗಳಿಂದ ಈ ಯೋಜನೆ ಜಾರಿ ಕುರಿತು ಕಿಯೋನಿಕ್ಸ್ ಸಂಸ್ಥೆಗೆ ಪತ್ರ ಬರೆಯಲಾಗಿದ್ದು, ಕಂಪನಿಯು ಈ ಯೋಜನೆ ನಾವೆ ಮಾಡುತ್ತೇವೆ. ಕೇರಳ ಮೂಲದ ಕಂಪನಿಗಳ ಮೂಲಕ ಮಾಡುವುದಾಗಿ ಪತ್ರ ಬರೆದಿದೆ. ಆನಂತರ, ಆರ್ಥಿಕ ಇಲಾಖೆಗೆ ಪತ್ರ ಬರೆದು 254 ಕೋಟಿ ರೂ.ಹಣ ಬಿಡುಗಡೆ ಮಾಡುವಂತೆ ಕೋರಲಾಗಿದೆ ಎಂದು ರಮೇಶ್ ಬಾಬು ತಿಳಿಸಿದರು.

ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಯೋನಿಕ್ಸ್ ವರದಿಯ ಯೋಜನೆಗೆ ಹಣ ಬಿಡುಗಡೆ ಮಾಡದಂತೆ ಸರಕಾರದ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದರು. ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿ ತನ್ನ ವರದಿ ನೀಡಿ ಕೇಂದ್ರ ಸರಕಾರದ ಯೋಜನೆ ಉತ್ತಮವಾಗಿದೆ ಎಂದು ತಿಳಿಸಿತ್ತು. ಇತ್ತೀಚೆಗೆ ಸಭಾಪತಿ, ಸ್ಪೀಕರ್‍ಗೆ ಪತ್ರ ಬರೆದು ಈ ಯೋಜನೆಗೆ ಪ್ರತ್ಯೇಕವಾಗಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ರಮೇಶ್ ಬಾಬು ತಿಳಿಸಿದರು.

ಸ್ಪೀಕರ್ ಅವರು ಅಧಿಕಾರಿಗಳ ತಪ್ಪು ಮಾಹಿತಿಯಿಂದ ದಾರಿ ತಪ್ಪಬಾರದು, ಕೇಂದ್ರದ ಮೇವಾ ಯೋಜನೆ ಜಾರಿ ಮಾಡಲಿ. ಸಾರ್ವಜನಿಕರ ಹಣ ಸಂರಕ್ಷಣೆಗೆ ಮುಂದಾಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ಸ್ಪೀಕರ್ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಈ ವಿಚಾರವಾಗಿ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾನೂನು ವಿಭಾಗದ ಉಪಾಧ್ಯಕ್ಷ ದಿವಾಕರ್, ಮಾಧ್ಯಮ ವಿಭಾಗದ ಸಂಯೋಜಕ ರಾಮಚಂದ್ರಪ್ಪ, ಜಿ.ಸಿ.ರಾಜುಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News