ಕನ್ನಡ ಪತ್ರಿಕೋದ್ಯಮಕ್ಕೆ ಉತ್ತಮ ಭವಿಷ್ಯ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-07-01 18:30 GMT

ಬೆಂಗಳೂರು, ಜು. 1: ‘ಕನ್ನಡ ನಾಡಿಗೆ ಹೇಗೆ ಭವಿಷ್ಯವಿದೆಯೋ ಹಾಗೆಯೇ ಕನ್ನಡದ ಪತ್ರಿಕೋದ್ಯಮಕ್ಕೂ ಉತ್ತಮ ಭವಿಷ್ಯವಿದೆ. ಕನ್ನಡ ಭಾಷೆ, ಸಾಹಿತ್ಯಕ್ಕೆ ಕನ್ನಡ ಪತ್ರಿಕೋದ್ಯಮದ ಕೊಡುಗೆ ಅಪಾರ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಪ್ರೆಸ್‍ಕ್ಲಬ್ ಆವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್‍ಕ್ಲಬ್ ಆಶ್ರಯದಲ್ಲಿ ಏರ್ಪಡಿಸಿದ್ದ ‘ಪತ್ರಿಕಾ ದಿನಾಚರಣೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕನ್ನಡ ನಾಡಿನ ಸಂಸ್ಕøತಿಯನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ಕೆಲಸ ಮಾಡುವುದು ಸಮಸ್ಯೆಗಳಿಗೆ ಪರಿಹಾರ' ಎಂದರು.

‘ಹೊಸ ಓದುಗರು, ಹೊಸ ವೀಕ್ಷಕರು ಮಾಧ್ಯಮಗಳಿಗೆ ಇದ್ದೇ ಇರುತ್ತಾರೆ. ನಾಡಿನ ಭವಿಷ್ಯದೊಂದಿಗೆ ಪತ್ರಿಕೋದ್ಯಮದ ಭವಿಷ್ಯ ಹಾಸುಹೊಕ್ಕಾಗಿದೆ. ನಮ್ಮ ಪಾತ್ರಗಳನ್ನು ಎಷ್ಟು ಜವಾಬ್ದಾರಿಯಿಂದ, ಸುಸಂಸ್ಕøತವಾಗಿ ಮಾಡುತ್ತೇವೆ ಎನ್ನುವುದು ಮುಖ್ಯ. ನಾವು ಇತಿಹಾಸದ ಒಂದು ಭಾಗವಾಗಬೇಕು ಅಥವಾ ಇತಿಹಾಸವನ್ನು ಸೃಷ್ಟಿ ಮಾಡಬೇಕು. ಈ ಕೆಲಸವನ್ನು ಒಂದಾಗಿ ಮಾಡೋಣ. ನಾವು ಬೇರೆಯಲ್ಲ' ಎಂದು ನುಡಿದರು.

ನಂಟು ಆರೋಗ್ಯಕರವಾಗಿರಬೇಕು: ‘ರಾಜಕಾರಣಿಗಳು ಮಾಧ್ಯಮದವರಿಗೆ ಅನಿವಾರ್ಯ. ರಾಜಕೀಯದ ಸುದ್ದಿ ಇಲ್ಲದೆ ಪತ್ರಿಕೆಗಳು ಬರುವುದಿಲ್ಲ. ರಾಜಕಾರಣಿಗಳು ಹಾಗೂ ಮಾಧ್ಯಮದವರಿಗೆ ಬಿಡಿಸಲಾರದ ನಂಟಿದೆ.  ಅದು ಆರೋಗ್ಯಕರವಾಗಿದ್ದಷ್ಟೂ ಒಳ್ಳೆಯದು. ಟೀಕೆ-ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಯಾರು ಟೀಕೆಗಳನ್ನು ಸ್ವೀಕರಿಸುವುದಿಲ್ಲವೋ ಅವರು ಯಶಸ್ವಿ ರಾಜಕಾರಣಿಯಾಗಲು ಸಾಧ್ಯವಿಲ್ಲ. ಟೀಕೆಗಳಿಂದ ನಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಹಾಗೂ ಅದರಿಂದ ಸುಧಾರಿಸಲು ಸಾಧ್ಯ. ಹೊಗಳಿಕೆಯಿಂದ ಅದು ಸಾಧ್ಯವಾಗುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ನುಡಿದರು.

ಕೊಡುಗೆ ದೊಡ್ಡದು: ‘ಕನ್ನಡ ಪತ್ರಿಕೋದ್ಯಮದಲ್ಲಿ ಪತ್ರಕರ್ತರ ಕೊಡುಗೆ ಬಹಳ ದೊಡ್ಡದಿದೆ. ಭಾಷೆ, ಸಾಹಿತ್ಯ, ನಾಡಿನ ಅಭಿವೃದ್ಧಿಗೆ, ಜನಜೀವನದ ಗುಣಮಟ್ಟವನ್ನು ಹೆಚ್ಚಿಸಲು, ಕರ್ನಾಟಕವನ್ನು ಪ್ರಗತಿಶೀಲ ರಾಜ್ಯವನ್ನಾಗಿ ಬಿಂಬಿಸಲು, ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಮತ್ತು ಮೌಲ್ಯಾಧಾರಿತವಾದ ವಿಚಾರಗಳಿಗೆ ಶಕ್ತಿಯನ್ನು ತುಂಬಲು ಪತ್ರಕರ್ತರು ಅದ್ಭುತ ಕೆಲಸವನ್ನು ಮಾಡಿದ್ದಾರೆ.

ಸಂಪಾದಕೀಯಗಳು ಅತ್ಯಂತ ಮಹತ್ವದ್ದಿರುತ್ತಿತ್ತು, ಅದ್ಭುತ ವಿಶ್ಲೇಷಣೆಗಳಿರುತ್ತಿದ್ದವು. ಸ್ವಾತಂತ್ರ್ಯಾನಂತರ ಕರ್ನಾಟಕದಲ್ಲಿ ಪತ್ರಿಕೆಗಳ ಸಂಗ್ರಹಕ್ಕೆ ಹೋದರೆ ಅದ್ಭುತ ಲೇಖನಗಳನ್ನು ಕಾಣಬಹುದು. ಅಂದಿನ ಚಿತ್ರಣ ನಮ್ಮ ಮುಂದೆ ಬರುತ್ತದೆ. ಆಧುನಿಕ ಕಾಲದಲ್ಲಿ ಮಕ್ಕಳು, ಮಹಿಳೆಯರಿಗೆ ವಿವಿಧ ಪುರವಣಿಗಳನ್ನು ಹೊರತಂದ ಪತ್ರಿಕೆಗಳು ತಮ್ಮದೇ ಪಾತ್ರವನ್ನು ವಹಿಸಿದೆ. ಎಲೆಕ್ಟ್ರಾನಿಕ್ ಮಾಧ್ಯಮ ಪರಿಣಾಮಕಾರಿಯಾಗಿ ತನ್ನ ಕೆಲಸವನ್ನು ಮಾಡುತ್ತಿದೆ' ಎಂದು ಅವರು ಸ್ಮರಿಸಿದರು.

ಟೀಕೆಗಳಿಂದ ಸುಧಾರಣೆ ಸಾಧ್ಯ: ಸುದ್ದಿಯನ್ನು ಯಾವ ರೀತಿ ಕೊಡುತ್ತೇವೆ ಎನ್ನುವುದರ ಮೇಲೆ ಮಾಧ್ಯಮಗಳು ಕೆಲಸ ಮಾಡುತ್ತವೆ. ನಮ್ಮ ಭಾಷೆಯ ಮೇಲೆ ನಮಗೆ ಹಿಡಿತವಿಲ್ಲದಿದ್ದರೆ, ಅವರಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಟೀಕೆಯನ್ನು ಸುಂದರವಾಗಿ ಮಾಡಬಹುದು. ಕೂಗಾಡಿದರೆ, ಕೆಟ್ಟ ಶಬ್ದ ಬಳಕೆ ಮಾಡಿದರೆ ಮಾತ್ರ ಟೀಕೆ ಎಂಬ ಭಾವನೆ ಮೂಡಿದೆ. ಟೀಕೆಯನ್ನು ಮೊನಚಾಗಿ, ಪರಿಣಾಮಕಾರಿಯಾಗಿ ಒಳ್ಳೆಯ ಮಾತುಗಳಿಂದ ಮಾಡಬಹುದು. ಅವೆಲ್ಲವನ್ನು ಹಿರಿಯ ರಾಜಕಾರಣಿಗಳು ಮತ್ತು ಹಿರಿಯ ಪತ್ರಕರ್ತರಿಂದ ಕಲಿಯಬೇಕಾಗಿದೆ' ಎಂದು ಅವರು ತಿಳಿಸಿದರು.

ಅಭಿವೃದ್ಧಿಗೊಂಡ ಪತ್ರಿಕೋದ್ಯಮ: ಪತ್ರಕರ್ತರ ವೃತ್ತಿ ರೋಚಕವಾಗಿರುತ್ತದೆ. ಪತ್ರಕರ್ತರು ತಮ್ಮ ವರದಿಗಾರಿಕೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಾರೆ. ಈಗ ಸುದ್ದಿ ನಿರಂತರವಾಗಿ ಪ್ರಸಾರವಾಗುತ್ತಲೇ ಇರುತ್ತದೆ. ಆಧುನಿಕ ತಂತ್ರಜ್ಞಾನದಿಂದ ಪತ್ರಿಕೋದ್ಯಮದಲ್ಲಿ ಬಹಳಷ್ಟು ಬದಲಾವಣೆಯನ್ನು ಕಂಡಿದೆ. ‘ನಮ್ಮಲ್ಲೆ ಮೊದಲು’ ಎನ್ನುವ ಸ್ಪರ್ಧೆ ಈಗ ಹೆಚ್ಚಾಗಿದೆ ಎಂದು ಅವರು ವಿವರಿಸಿದರು.

‘ನಾನು ನಾಲ್ಕೈದು ಮಂದಿ ಮುಖ್ಯಮಂತ್ರಿಗಳ ಹತ್ತಿರ ಕೆಲಸ ಮಾಡಿದ್ದೇನೆ. ಬೆಳಗ್ಗೆ ಗುಪ್ತಚರ ವಿಭಾಗದವರು ಹೇಳುವ ಮಾಹಿತಿ ಕೇಳಬೇಕಿತ್ತು. ಆದರೆ ಈಗ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಎಲ್ಲ ಮಾಹಿತಿಗಳು ಬಹುಬೇಗ ದೊರೆಯುತ್ತಿವೆ. ತ್ವರಿತವಾಗಿ ಸಿಗುವ ಇಂತಹ ಮಾಹಿತಿಗಳಿಂದ ಆಡಳಿತ ನಡೆಸಲು ಸಹಾಯವಾಗುತ್ತದೆ. ಯಾವುದಾದರೂ ತುರ್ತು ಪರಿಸ್ಥಿತಿಯಲ್ಲಿ ಕ್ಷಿಪ್ರ ಕ್ರಮಗಳನ್ನು ತೆಗೆದುಕೊಳ್ಳಬೇಕಾದರೆ ಮೊದಲು ಅಲ್ಲಿನ ಮಾಹಿತಿ, ವರದಿ ನಮಗೆ ಸಿಗಬೇಕು. ಈ ನಿಟ್ಟಿನಲ್ಲಿ ಪತ್ರಿಕೋದ್ಯಮದಲ್ಲಿ ತಂತ್ರಜ್ಞಾನ ಒಳ್ಳೆಯದನ್ನೇ ಮಾಡಿದೆ ಎಂದು ಅವರು ನುಡಿದರು.

‘ಸರಕಾರದ್ದು ಮತ್ತು ಮಾಧ್ಯಮಗಳದ್ದು ಅವಿನಾಭಾವ ಸಂಬಂಧ. ಸರಕಾರದ ವಿಚಾರಗಳು ಜನರಿಗೆ ಮಾಧ್ಯಮಗಳ ಮೂಲಕವೇ ತಲುಪಲು ಸಾಧ್ಯ. ಬೆಳಗಿನ ಚಹಾದೊಂದಿಗೆ ಮಾಧ್ಯಮಗಳ ಸುದ್ದಿ ಬೇಕೇಬೇಕು. ರಾಜಕೀಯ ಸುದ್ದಿಗಳಿಲ್ಲದೇ ಮಾಧ್ಯಮಗಳಿಲ್ಲ' ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ, ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ವಾರ್ತಾ ಇಲಾಖೆ ಆಯುಕ್ತ ಡಾ.ಹರ್ಷ, ಪ್ರೆಸ್‍ಕ್ಲಬ್ ಅಧ್ಯಕ್ಷ ಶ್ರೀಧರ್, ಶಿವಾನಂದ ತಗಡೂರು, ಸದಾಶಿವ ಶೆಣೈ, ಹಿರಿಯ ಪತ್ರಕರ್ತರಾದ ಹುಣಸವಾಡಿ ರಾಜನ್, ಮಾಯಾ ಶರ್ಮ ಸೇರಿದಂತೆ ಪತ್ರಕರ್ತರು ಹಾಗೂ ಮಾಧ್ಯಮ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

ಸೂಕ್ಷ್ಮತೆ ಇರಬೇಕು: ‘ಅಪರಾಧ ವರದಿಗಳು ಯಾರನ್ನು ಗುರಿಯಾಗಿಸಿ ಮಾಡುತ್ತೀರಿ, ಏಕೆಂದರೆ ಟಿವಿ ಕಾರ್ಯಕ್ರಮಗಳನ್ನು ಮಹಿಳೆಯರು, ಮಕ್ಕಳು, ಹಿರಿಯರೂ ವೀಕ್ಷಿಸುತ್ತಾರೆ. ಆದುದರಿಂದ ನಿಮ್ಮ ವರದಿಗಳು ವೀಕ್ಷಕರ ಮೇಲೆ ಮಾಡುತ್ತಿರುವ ಪರಿಣಾಮದ ಬಗ್ಗೆ ಚಿಂತನೆ ಅಗತ್ಯ. ಅಪರಾಧ ವರದಿಗಾರಿಕೆಯಲ್ಲಿ ಕ್ರೈಮ್ ಅನ್ನು ಎಷ್ಟು ಬಿಂಬಿಸಬೇಕು, ಹೇಗೆ ಬಿಂಬಿಸಬೇಕು ಎಂಬ ಸೂಕ್ಷ್ಮತೆ ಇರಬೇಕು'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News