ಅಡ್ಯಾರ್: ಮರಳುಗಾರಿಕೆಯ ದೋಣಿ ಮಗುಚಿ ಕಾರ್ಮಿಕ ನಾಪತ್ತೆ
Update: 2022-07-02 17:56 GMT
ಮಂಗಳೂರು : ಈ ಹಿಂದೆ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದ ಸಮಯದಲ್ಲಿ ಉಪಯೋಗಿಸುತ್ತಿದ್ದ ದೋಣಿಯನ್ನು ಪ್ರವಾಹದ ಕಾರಣ ದಡಕ್ಕೆ ಮೇಲೆತ್ತುವಾಗ ನೇತ್ರಾವತಿ ನದಿಯಲ್ಲಿ ಮೂವರು ಕಾರ್ಮಿಕರು ನದಿ ನೀರು ಪಾಲಾಗಿ ಇಬ್ಬರು ಪಾರಾಗಿ ಓರ್ವ ನಾಪತ್ತೆಯಾಗಿರುವ ಘಟನೆ ಇಂದು ನಡೆದಿದೆ.
ಅಡ್ಯಾರ್-ಪಾವೂರು ಬಳಿ ಘಟನೆ ನಡೆದಿದ್ದು ಮಳೆಯಿಂದ ನೇತ್ರಾವತಿ ನದಿಯಲ್ಲಿ ವಿಪರೀತ ನೀರು ಇದ್ದು, ಉತ್ತರ ಪ್ರದೇಶ ಮೂಲದವರಾದ ರಾಜು ಸಾಹ್, ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ಸಾಯನಿ ಎಂಬವರು ದೋಣಿ ಸಮೇತ ನದಿಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಬ್ರಿಡ್ಜಿನ ಅಡಿಯಲ್ಲಿ ಸಿಲುಕಿದ್ದರು.
ಅದರಲ್ಲಿ ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ರವರು ಈಜಿ ದಡ ಸೇರಿದ್ದು, ರಾಜು ಸಾಹ್ ಎಂಬವರು ನೀರಿನ ರಭಸಕ್ಕೆ ನಾಪತ್ತೆಯಾಗಿರುತ್ತಾರೆ. ಆಸಿಫ್ ಮತ್ತು ಇಸಾಕ್ ಎಂಬವರು ದೋಣಿಯ ಮಾಲಕರು ಎಂದು ತಿಳಿದುಬಂದಿದ್ದು, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.