ಕೈಪುಂಜಾಲ್ನಲ್ಲಿ ಮೀನುಗಾರಿಕಾ ದೋಣಿಯ ಅವಶೇಷ ಪತ್ತೆ
Update: 2022-07-02 15:40 GMT
ಕಾಪು : ಕಡಲಿನ ಅಬ್ಬರಕ್ಕೆ ಮಲ್ಪೆಧಕ್ಕೆಯಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಮೀನುಗಾರಿಕಾ ದೋಣಿಯೊಂದು ಸಮುದ್ರ ಪಾಲಾಗಿದ್ದು, ಇದರ ಅವಶೇಷ ಗಳು ಕಾಪು ಸಮೀಪದ ಕೈಪುಂಜಾಲು ಕಡಲ ಕಿನಾರೆಯಲ್ಲಿ ಶನಿವಾರ ಪತ್ತೆಯಾಗಿವೆ.
ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆಯ ರಾಕೇಶ್ ಮತ್ತು ಯಶವಂತ್ ಎಂಬವರ ಮೀನುಗಾರಿಕಾ ದೋಣಿಯನ್ನು ಮಲ್ಪೆ ಬಂದರಿನ ಧಕ್ಕೆಯಲ್ಲಿ ಲಂಗಾರು ಹಾಕಿ ನಿಲ್ಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕಡಲು ಪ್ರಕ್ಷುಬ್ಧಗೊಂಡಿದ್ದು, ಇದರ ಪರಿಣಾಮ ನೀರಿನ ಸೆಳೆತಕ್ಕೆ ಸಿಲುಕಿ ದೋಣಿ ನೀರಿನಲ್ಲಿ ಪತ್ತೆಯಾಗಿದೆ.
ಮೀನುಗಾರಿಕಾ ದೋಣಿ ಸಹಿತವಾಗಿ ಅದರಲ್ಲಿದ್ದ ಬಲೆ, ಇಂಜಿನ್ ಸಹಿತ ಎಲ್ಲಾ ವಸ್ತುಗಳು ಸಮುದ್ರ ಪಾಲಾಗಿದ್ದು, ಅಲೆಗಳ ಅಬ್ಬರಕ್ಕೆ ದೋಣಿ ಸಂಪೂರ್ಣ ಛಿಧ್ರವಾಗಿದ್ದು, ಇದರ ಕೆಲವು ಅವಶೇಷಗಳು ಕೈಪುಂಜಾಲು ಕೆಂಪು ಗುಡ್ಡೆಯ ಸಮುದ್ರ ತೀರದಲ್ಲಿ ಕಂಡುಬಂದಿದೆ. ಇದರಿಂದ ಸುಮಾರು ೧೫ ಲಕ್ಷ ರೂ. ನಷ್ಟ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ.