ಸೂಟ್ಕೇಸ್ ನಲ್ಲಿ ಮಹಿಳೆ ಮೃತದೇಹ ಪತ್ತೆ ಪ್ರಕರಣ: ಪತಿ ಬಂಧನ
ಬೆಂಗಳೂರು, ಜು.2: ಇಲ್ಲಿನ ದಾಬಸ್ಪೇಟೆ ಬಳಿ ಕೆರೆಯ ನೀರಿನಲ್ಲಿ ಸೂಟ್ಕೇಸ್ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ ಸಂಬಂಧ ಪತಿಯನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ರಾಮು ಎಂದು ಗುರುತಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಎಸ್.ಪಿ.ಲಕ್ಷ್ಮೀ ಗಣೇಶ್ ತಿಳಿಸಿದರು.
ಮೃತ ಮಂಜುಳಾ ತನ್ನ ಮೊದಲ ಪತಿಯನ್ನು ತೊರೆದು ತಮ್ಮ ಇಬ್ಬರು ಮಕ್ಕಳೊಂದಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನೆಲೆಸಿದ್ದರು. ಬಳಿಕ ಮಂಜುಳಾ ತಾನು ಪೀಣ್ಯದಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಆರೋಪಿ ರಾಮುನನ್ನು ಮೊದಲ ಬಾರಿ ಭೇಟಿಯಾಗಿದ್ದರು. ಬಳಿಕ ಇಬ್ಬರು ಮದುವೆಯಾಗಿದ್ದರು. ಈ ನಡುವೆ ಇವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಈ ಮಧ್ಯೆ ಆರೋಪಿ ರಾಮು ಮನೆಗೆ ಬಂದಾಗ ಬಾಗಿಲು ತೆರೆಯಲು ತಡ ಮಾಡಿದ್ದಕ್ಕೆ ಮತ್ತು ಊಟ ಬಡಿಸಲು ನಿರಾಕರಿಸಿದ್ದಕ್ಕೆ ತನ್ನ ಪತ್ನಿಯನ್ನು ಕೊಲೆಗೈದಿದ್ದಾನೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಬಳಿಕ ಆರೋಪಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ಶವವನ್ನು ಸೂಟ್ಕೇಸ್ಗೆ ತುಂಬಿದ್ದಾರೆ. ನಂತರ ಕಾಮಾಕ್ಷಿಪಾಳ್ಯದಲ್ಲಿನ ತನ್ನ ಮನೆಯಿಂದ ಮೃತ ಮಂಜುಳಾ ಶವವನ್ನು ದ್ವಿಚಕ್ರ ವಾಹನದಲ್ಲಿರಿಸಿಕೊಂಡು ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿನ ದಾಬಸ್ಪೇಟೆ ಬಳಿಯ ಕೆರೆ ನೀರಿನಲ್ಲಿ ಶವ ಎಸೆದಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿದೆ ಎಂದರು.