ಮಂಗಳೂರು: ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹ ಆರಂಭ
ಮಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಳೆದ ನಾಲ್ಕು ದಿನಗಳ ಕಾಲ ಪೌರ ಕಾರ್ಮಿಕರ ಮುಷ್ಕರ ದಿಂದ ಗಬ್ಬೆದ್ದು ನಾರುತ್ತಿದ್ದ ಮಂಗಳೂರು ನಗರದ ಜನತೆ ಮಂಗಳವಾರ ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ ತಕ್ಷಣ ಮುಷ್ಕರ ಕೈ ಬಿಟ್ಟ ಪೌರ ಕಾರ್ಮಿಕರು ತ್ಯಾಜ್ಯಗಳ ವಿಲೇವಾರಿ ಮಾಡುವುದಾಗಿ ಪ್ರಕಟಿಸಿದರು.
ಅದರಂತೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆಯಿಂದಲೇ ಪೌರ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾದರು. ಮನೆ ಮನೆಗಳಿಂದ ಕಸ ಸಂಗ್ರಹಿಸತೊಡಗಿದರು. ಒಂದೇ ದಿನದಲ್ಲಿ ಪಾಲಿಕೆ ವ್ಯಾಪ್ತಿಯಿಂದ ಸುಮಾರು ೪೦೦ ಟನ್ ಕಸ ಸಂಗ್ರಹಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಶುಕ್ರವಾರದಿಂದ ತೆಗೆದುಕೊಂಡು ಹೋಗದೆ ಬಾಕಿ ಉಳಿದಿರುವ ಒಣ ತ್ಯಾಜ್ಯವನ್ನು ಕೂಡ ಈ ವಾರದಲ್ಲಿ ವಿಲೇವಾರಿ ಮಾಡಲು ಸಂಬಂಧಿತ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.