ಕಾನೂನು ಕೈಗೆತ್ತಿಕೊಳಬೇಡಿ: 'ಗೋರಕ್ಷಕ' ಸಂಘಟನೆಗಳಿಗೆ ಬಕ್ರೀದ್ ಹಿನ್ನೆಲೆ ಹೈದರಾಬಾದ್ ಪೊಲೀಸ್ ಆಯುಕ್ತರಿಂದ ಎಚ್ಚರಿಕೆ
ಹೈದರಾಬಾದ್: ಬಕ್ರೀದ್ ಸಂದರ್ಭ ಬಲಿಗಾಗಿ ದನಗಳನ್ನು ಸಾಗಿಸುವ ವಾಹನಗಳನ್ನು ಬೆಂಬತ್ತದಂತೆ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರಿಗೆ ಹೈದರಾಬಾದ್ ಪೊಲೀಸ್ ಆಯುಕ್ತ ಸಿ ವಿ ಆನಂದ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸಭೆಯೊಂದನ್ನು ನಡೆಸಿದ ಆಯುಕ್ತರು ಸಭೆಯಲ್ಲಿ ಉಪಸ್ಥಿತರಿದ್ದ ಹಿಂದು ಸಂಘಟನೆಗಳ ಪ್ರತಿನಿಧಿಗಳನ್ನುದ್ದೇಶಿಸಿ, ಜಾನುವಾರು ಸಾಗಿಸುವ ವಾಹನಗಳನ್ನು ಬೆಂಬತ್ತದಂತೆ ಹಾಗೂ ಚೆಕ್ಪೋಸ್ಟ್ ಗಳಲ್ಲಿ ಹಸ್ತಕ್ಷೇಪ ನಡೆಸದಂತೆ ಸೂಚಿಸಿದ್ದಾರೆ.
"ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಗುಂಪುಗಳ ನಡುವೆ ಯಾವುದೇ ಜಗಳಗಳು ನಡೆದರೆ ಮತೀಯ ಸೌಹಾರ್ದತೆಗೆ ಧಕ್ಕೆಯಾಗುತ್ತದೆ" ಎಂದು ಅವರು ಹೇಳಿದರು.
ಜಾನುವಾರುಗಳ ಅಕ್ರಮ ಸಾಗಾಟ ತಡೆಯಲು ಪೊಲೀಸರು ಕೈಗೊಂಡ ಕ್ರಮಗಳನ್ನು ಸಭೆಯಲ್ಲಿ ವಿವರಿಸಲಾಯಿತು. ಎಲ್ಲಿಯಾದರೂ ಅಕ್ರಮ ಜಾನುವಾರು ಸಾಗಣೆಯ ಮಾಹಿತಿಯಿದ್ದರೆ ಪೊಲೀಸರಿಗೆ ತಿಳಿಸಿ ತ್ವರಿತ ಕ್ರಮಕೈಗೊಳ್ಳಲಾಗುವುದೆಂಬ ಭರವಸೆಯನ್ನೂ ಈ ಸಂದರ್ಭ ಅಧಿಕಾರಿಗಳು ನೀಡಿದರು.
ಲವ್ ಫಾರ್ ಕೌ, ತೆಲಂಗಾಣ ಗೋಶಾಲ, ಕೌ ಗ್ಯಾನ್ ಫೌಂಡೇಶನ್, ವಿಶ್ವ ಹಿಂದು ಪರಿಷದ್, ಬಜರಂಗದಳ ಮತ್ತಿತರ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.