ವಿಶಿಷ್ಟ ಕಂಠದ ಮಧುರ ಗಾಯಕ ಭೂಪಿಂದರ್ ಸಿಂಗ್

Update: 2022-07-23 06:19 GMT

ಗಾಯನ ಸಾಮ್ರಾಜ್ಯದಲ್ಲಿ ತಮ್ಮದೇ ಆದ ಸ್ಥಾನ ಪಡೆಯಲು ಎಂದಿಗೂ ಸ್ಪರ್ಧಿಸದ ಭೂಪಿಂದರ್ ಸಂಗೀತದ ಶಾಸ್ತ್ರೀಯತೆ ಮತ್ತು ಮಾಧುರ್ಯದ ಗೆರೆಯನ್ನು ದಾಟಲೇ ಇಲ್ಲ ಎನ್ನುವುದು ವಿಶೇಷ. ಸಂಗೀತ ನಿರ್ದೇಶಕರು ಕೆಲವು ಸಂದರ್ಭಗಳಲ್ಲಿ ಹಾಡಿನಲ್ಲಿ ತಮ್ಮದೇ ಆದ ಹೊಸ ಸ್ವರಾನ್ವೇಷಣೆಯನ್ನು ತರಲು ಇಚ್ಛಿಸಿದರೂ, ಭೂಪಿಂದರ್ ಅಂತಹ ಹಾಡುಗಳನ್ನು ನಿರಾಕರಿಸಿದ್ದಿದೆ.

ಮೂರು ದಶಕಗಳ ಕಾಲ ಗಾಯಕನಾಗಿ ಬಾಲಿವುಡ್ ಚಿತ್ರರಂಗದಲ್ಲಿ ಮತ್ತು ಗಝಲ್ ಗಾಯನದಲ್ಲಿ ಸಾಮ್ರಾಟನಂತೆ ಮೆರೆದ ಈ ಗಾಯಕ, ತನ್ನ ಶಾಸ್ತ್ರೀಯ ಸಂಗೀತದ ಸ್ಪರ್ಶವನ್ನು ಉಳಿಸಿಕೊಂಡೇ ಜನಪ್ರಿಯತೆಯ ಶಿಖರಕ್ಕೇರಿದ್ದರು. ಕಂಠ ಮಾಧುರ್ಯಕ್ಕೆ ಮತ್ತೊಂದು ಆಯಾಮವನ್ನು ನೀಡಿದ ಗಝಲ್ ಗಾಯಕ, ಭೂಪಿಂದರ್ ಸಿಂಗ್ ಇದೇ ೧೮ರಂದು, ತಮ್ಮ ೮೨ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸಂಗೀತ ಪ್ರಿಯರಿಗೆ ಸಾಮಾನ್ಯವಾಗಿ ಭೂಪಿಂದರ್ ಎಂದರೆ ನೆನಪಾಗುವುದು ಅವರ ಮೆಲುದನಿಯ ಮಧುರ ಗಝಲ್‌ಗಳು.  ಆದರೆ ಹಿಂದಿ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ಗಿಟಾರ್ ವಾದಕರಲ್ಲಿ ಭೂಪಿಂದರ್ ಒಬ್ಬರಾಗಿದ್ದರು ಎನ್ನುವುದು ಸಹ ಈ ಪೀಳಿಗೆಯವರಿಗೆ ಅಚ್ಚರಿಯ ವಿಷಯವಾಗಬಹುದು.  ‘ಹರೇರಾಮ ಹರೇಕೃಷ್ಣ’ ಚಿತ್ರದ ‘ದಮ್ ಮಾರೋ ದಮ್’ ಹಾಡಿನ ಗಿಟಾರ್ ಇಂಪನ್ನು, ‘ಯಾದೋಂಕಿ ಬಾರಾತ್’ ಚಿತ್ರದ ‘ಚುರಾಲಿಯಾ ಹೈ’ ಹಾಡಿನ ಆರಂಭದ ಗಿಟಾರ್ ಸ್ವರವನ್ನೂ, ಶೋಲೆ ಚಿತ್ರದ ‘ಮೆಹಬೂಬಾ ಮೆಹಬೂಬಾ’ ಹಾಡಿನ ಹಿನ್ನೆಲೆಯ ಸ್ವರವನ್ನೂ, ‘ಚಲ್ತೇ ಚಲ್ತೇ’ ಹಾಡಿನ ನೇಪಥ್ಯದ ಮಾಧುರ್ಯವನ್ನೂ ಯಾರಿಂದ ಮರೆಯಲು ಸಾಧ್ಯ. ಈ ಗಿಟಾರ್ ವಾದನಕ್ಕೆ ಜೀವ ಕೊಟ್ಟವರು ಭೂಪಿಂದರ್. ಖಯ್ಯಾಂ, ಆರ್.ಡಿ. ಬರ್ಮನ್ ಮತ್ತು ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರೊಡನೆ ಸಹಾಯಕರಾಗಿ, ಗಿಟಾರ್ ವಾದಕರಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ೧೨ ತಂತಿಗಳ ಗಿಟಾರ್ ಪರಿಚಯಿಸಿದ ಕೀರ್ತಿಯೂ ಭೂಪಿಂದರ್‌ಗೆ ಸಲ್ಲುತ್ತದೆ.

೧೯೪೦ರ ಫೆಬ್ರವರಿ ೬ರಂದು ಪಂಜಾಬ್‌ನ ಅಮೃತಸರದಲ್ಲಿ, ಸಂಗೀತಗಾರ ನಾಥಾ ಸಿಂಘ್‌ಜಿ ದಂಪತಿಗೆ ಜನಿಸಿದ ಭೂಪಿಂದರ್ ಅವರ ತಂದೆಯಿಂದಲೇ ಸಂಗೀತ ಶಿಕ್ಷಣ ಮತ್ತು ದೀಕ್ಷೆ ಪಡೆದಿದ್ದು ವಿಶೇಷ. ಆಕಾಶವಾಣಿಯಲ್ಲಿ ತಾತ್ಕಾಲಿಕ ಕಲಾವಿದರಾಗಿ ಸತೀಶ್ ಭಾಟಿಯಾ ಅವರ ನಿರ್ದೇಶನದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಭೂಪಿಂದರ್ ದೂರದರ್ಶನದಲ್ಲೂ ಸೇವೆ ಸಲ್ಲಿಸಿದ್ದಾರೆ. ೧೯೬೨ರಲ್ಲಿ ಹಿಂದಿ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಮದನ್ ಮೋಹನ್ ಅವರನ್ನು ಸನ್ಮಾನಿಸಲು ಸತೀಶ್ ಭಾಟಿಯಾ ಏರ್ಪಡಿಸಿದ್ದ ಔತಣಕೂಟವೊಂದರಲ್ಲಿ, ಭೂಪಿಂದರ್ ಅವರ ಗಿಟಾರ್ ವಾದನವನ್ನು ಕೇಳಿದ ಮದನ್ ಮೋಹನ್, ಅವರನ್ನು ಮುಂಬೈಗೆ ಆಹ್ವಾನಿಸಿದ್ದರು. ಚೇತನ್ ಆನಂದ್ ನಿರ್ಮಿಸಿದ ‘ಹಖೀಕತ್’ ಚಿತ್ರದಲ್ಲಿ ಮುಹಮ್ಮದ್ ರಫಿ, ತಲತ್ ಮೆಹಮೂದ್, ಮನ್ನಾಡೇ ಅವರ ಜೊತೆಯಲ್ಲಿ ಹಾಡುವ ಭಾಗ್ಯ ಭೂಪಿಂದರ್‌ಗೆ ಒದಗಿದ್ದು ಮದನ್ ಮೋಹನ್ ಅವರಿಂದಲೇ. ‘ಹೋಕೆ ಮಜಬೂರ್ ಮುಝೆ ಉಸ್ನೆ ಬುಲಾಯಾ ಹೋಗಾ’ ಎಂಬ ಈ ಹಾಡು ಇಂದಿಗೂ ಸಂಗೀತ ಪ್ರಿಯರ ನಡುವೆ ಗುನುಗುನಿಸುತ್ತಲೇ ಇರುತ್ತದೆ.

ಖ್ಯಾತ ಸಂಗೀತ ನಿರ್ದೇಶಕ ನೌಷಾದ್, ಗಿಟಾರ್ ವಾದನದಲ್ಲಿ ಭೂಪಿಂದರ್‌ಗೆ ಸರಿಸಾಟಿಯಾದವರು ಇರಲು ಸಾಧ್ಯವೇ ಇಲ್ಲ ಎಂದೇ ಅಭಿಮಾನದಿಂದ ಹೇಳುತ್ತಿದ್ದರು. ‘ಕಾದಂಬರಿ’ ಚಿತ್ರದಲ್ಲಿ ಉಸ್ತಾದ್ ವಿಲಾಯತ್ ಖಾನ್ (ಇವರು ಸಂಗೀತ ನಿರ್ದೇಶನ ನೀಡಿದ ಏಕೈಕ ಚಿತ್ರ) ಸಂಗೀತ ನಿರ್ದೇಶನದಲ್ಲಿ ಭೂಪಿಂದರ್ ಹಾಡಿದ ‘ಅಂಬರ್ ಕಿ ಏಕ್ ಪಾಕ್ ಸುರಾಹಿ’ ಸಾರ್ವಕಾಲಿಕ ಶ್ರೇಷ್ಠ ಗಾಯನ ಎಂದೇ ನೌಷಾದ್ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಭೂಪಿಂದರ್ ಅವರ ಗಿಟಾರ್ ವಾದನಕ್ಕೆ ಮತ್ತೊಂದು ಗರಿ ಮೂಡಿದ್ದು ಮದನ್ ಮೋಹನ್ ನಿರ್ದೇಶನದ ‘ಹಸ್ತೇ ಜಖಂ’ ಚಿತ್ರದಲ್ಲಿನ ‘ತುಂ ಜೋ ಮಿಲ್‌ಗಯೇ ಹೋ...’ ಹಾಡಿನ ಮೂಲಕ. ತಲತ್, ರಫಿ, ಮುಕೇಶ್, ಕಿಶೋರ್, ಮನ್ನ್ನಾಡೆ ಇಂತಹ ದಿಗ್ಗಜರ ನಡುವೆ ಬಾಲಿವುಡ್‌ನಲ್ಲಿ ಗಾಯಕರಾಗಿ ತಮ್ಮದೇ ಆದ ಸ್ಥಾನಪಡೆಯಬೇಕಾದ ಸಂದರ್ಭದಲ್ಲಿ ಭೂಪಿಂದರ್ ತಮ್ಮ ಸ್ವರ ಮಾಧುರ್ಯ ಮತ್ತು ಶಾಸ್ತ್ರೀಯ ಧಾಟಿಯನ್ನು ಎಲ್ಲಿಯೂ ಬಿಟ್ಟುಕೊಡದೆ, ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನೂರಾರು ಮಧುರ ಗೀತೆಗಳನ್ನು ಸಂಗೀತ ಪ್ರೇಮಿಗಳಿಗೆ ಉಣಬಡಿಸಿ ದ್ದಾರೆ. ಆರ್.ಡಿ. ಬರ್ಮನ್ ಅವರಿಗೆ ಸಹಾಯಕರಾಗಿ, ಹಿನ್ನೆಲೆ ವಾದ್ಯವಾಗಿ ಗಿಟಾರ್‌ಗೆ ಒಂದು ಪ್ರತಿಷ್ಠಿತ ಸ್ಥಾನವನ್ನು ಕಲ್ಪಿಸುವಲ್ಲಿ ಭೂಪಿಂದರ್ ಕೊಡುಗೆ ಹೆಚ್ಚಿದೆ. ಆರ್. ಡಿ ಬರ್ಮನ್ ಗಿಟಾರ್ ವಾದ್ಯಕ್ಕೆ ಶಾಶ್ವತವಾದ ಒಂದು ಸ್ಥಾನ ಕಲ್ಪಿಸಿದ್ದರೆ, ಅದರ ಶ್ರೇಯ ಭೂಪಿಂದರ್‌ಗೆ ಸಲ್ಲಬೇಕು.

ಗಾಯನ ಸಾಮ್ರಾಜ್ಯದಲ್ಲಿ ತಮ್ಮದೇ ಆದ ಸ್ಥಾನ ಪಡೆಯಲು ಎಂದಿಗೂ ಸ್ಪರ್ಧಿಸದ ಭೂಪಿಂದರ್ ಸಂಗೀತದ ಶಾಸ್ತ್ರೀಯತೆ ಮತ್ತು ಮಾಧುರ್ಯದ ಗೆರೆಯನ್ನು ದಾಟಲೇ ಇಲ್ಲ ಎನ್ನುವುದು ವಿಶೇಷ. ಸಂಗೀತ ನಿರ್ದೇಶಕರು ಕೆಲವು ಸಂದರ್ಭಗಳಲ್ಲಿ ಹಾಡಿನಲ್ಲಿ ತಮ್ಮದೇ ಆದ ಹೊಸ ಸ್ವರಾನ್ವೇಷಣೆಯನ್ನು ತರಲು ಇಚ್ಛಿಸಿದರೂ, ಭೂಪಿಂದರ್ ಅಂತಹ ಹಾಡುಗಳನ್ನು ನಿರಾಕರಿಸಿದ್ದಿದೆ. ಗಾಯನದಲ್ಲಿ ಶಾಸ್ತ್ರೀಯ ರಾಗಸ್ಪರ್ಶ ಮತ್ತು ಸಾಹಿತ್ಯದಲ್ಲಿ ಕಾವ್ಯಸ್ಪರ್ಶ ಇಲ್ಲದೆ ಹಾಡಲು ನಿರಾಕರಿಸುತ್ತಿದ್ದ ಭೂಪಿಂದರ್ ಅವರ ಎಲ್ಲ ಹಾಡುಗಳಲ್ಲೂ ಈ ಛಾಪನ್ನು ಕಾಣಬಹುದು. ಕವಿ ಗುಲ್ಝಾರ್ ಅವರನ್ನು ತಮ್ಮ ಮಾರ್ಗದರ್ಶಕರೆಂದೇ ಭಾವಿಸುವ ಭೂಪಿಂದರ್ ಗುಲ್ಝಾರ್ ಅವರ ಕವಿತೆಗಳ ಗುಚ್ಛನ್ನೂ ‘ಕುಚ್ ಇಂತಿಝಾರ್ ಹೈ’ ಹೆಸರಿನ ಆಲ್ಬಂ ಮೂಲಕ ಪ್ರಸ್ತುತಪಡಿಸಿದ್ದಾರೆ. ಆದರೆ ಸಂಗೀತ ಆಲ್ಬಂಗಳಲ್ಲಿ ವೀಡಿಯೊ ಮಿಶ್ರಣ ಮಾಡುವಾಗ ಕಂಪೆನಿಗಳು ಅಸಂಬದ್ಧವಾದ ರೀತಿಯಲ್ಲಿ ಚಿತ್ರಗಳನ್ನು ಅಳವಡಿಸುವುದಕ್ಕೂ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದ ಭೂಪಿಂದರ್, ಇದರಿಂದ ಹಾಡಿನಲ್ಲಿರುವ ಸಾಹಿತ್ಯ ಮತ್ತು ಕಾವ್ಯಾಭಿವ್ಯಕ್ತಿಗೆ ಕುಂದುಬರುತ್ತದೆ ಎಂದು ಹೇಳುತ್ತಿದ್ದರು. ಒಂದು ಹಂತದ ನಂತರ ಆಲ್ಬಂಗಳಿಗೆ ಹಾಡುವುದನ್ನೇ ನಿಲ್ಲಿಸಿಬಿಟ್ಟಿದ್ದರು.

ಭೂಪಿಂದರ್ ಅವರ ಕೆಲವು ಬಾಲಿವುಡ್ ಗೀತೆಗಳೇ ಅವರ ಈ ಶಿಸ್ತುಬದ್ಧ ಗಾಯನಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ‘ಪರಿಚಯ್’ ಚಿತ್ರದ ‘ಬೀತಿ ನಾ ಬಿತಾಯಿ ರೈನಾ’ (ಆರ್.ಡಿ. ಬರ್ಮನ್), ‘ಮೌಸಮ್’ ಚಿತ್ರದ ‘ದಿಲ್ ಢೂಂಡ್ತಾ ಹೈ’ (ಮದನ್ ಮೋಹನ್), ‘ಕಿನಾರಾ’ ಚಿತ್ರದ ‘ನಾಮ್ ಗುಮ್ ಜಾಯೇಗಾ’ (ಆರ್.ಡಿ. ಬರ್ಮನ್), ‘ಘರೋಂಡಾ’ ಚಿತ್ರದ ‘ಏಕ್ ಅಖೇಲಾ ಇಸ್ ಶಹರ್ ಮೇ’ ‘ದೋ ದಿವಾನೆ ಶಹರ್ ಮೇ’ (ಜೈದೇವ್), ‘ಮಾಸೂಮ್’ ಚಿತ್ರದ ‘ಹುಝೂರ್ ಇಸ್ ಕದರ್ ಭೀ ನ ಇತ್ರಾ ಕೆ ಚಲಿಯೇ’ (ಆರ್.ಡಿ. ಬರ್ಮನ್), ‘ಏತ್‌ಬಾರ್’ ಚಿತ್ರದ ‘ಕಿಸೀ ನಝರ್ ಕೊ ತೆರಾ ಇಂತಿಝಾರ್ ಆಜ್ ಭಿ ಹೈ’ ಮತ್ತು ‘ಆವಾಝ್ ದೀ ಹೈ ಆಜ್ ಏಕ್ ನಜರ್ ನೆ’ (ಬಪ್ಪಿಲಹರಿ), ‘ಸಿತಾರಾ’ ಚಿತ್ರದ ‘ಥೋಡಿ ಸಿ ಝಮೀನ್ ಥೋಡಾ ಆಸ್‌ಮಾನ್’ (ಆರ್.ಡಿ. ಬರ್ಮನ್), ‘ಬಝಾರ್’ ಚಿತ್ರದ ‘ಕರೋಗೆ ಯಾದ್ ತೊ ಹರ್ ಬಾತ್ ಯಾದ್ ಆಯೇಗಿ’ (ಖಯ್ಯಾಂ), ‘ಆಹಿಸ್ತಾ ಆಹಿಸ್ತಾ’ ಚಿತ್ರದ ‘ಕಭೀ ಕಿಸೀ ಕೊ ಮುಕಮ್ಮಲ್ ಜಹಾನ್ ನಹೀಂ ಮಿಲ್ತಾ’ (ಖಯ್ಯಾಂ), ‘ದೂರಿಯಾ’ ಚಿತ್ರದ ‘ಝಿಂದಗಿ, ಝಿಂದಗಿ ಮೇರೆ ಘರ್ ಆನಾ’ (ಜೈದೇವ್). ಈ ಹಾಡುಗಳು ಇಂದಿಗೂ ಸಂಗೀತ ಪ್ರಿಯರಿಗೆ ರುಚಿಸುವುದಷ್ಟೇ ಅಲ್ಲದೆ, ಈ ಹಾಡುಗಳಲ್ಲಿರುವ ಧ್ವನಿಯ ಆಳ, ಮಾಧುರ್ಯ, ಸಾಹಿತ್ಯಕ ಗುಣ ಮತ್ತು ಗಾಂಭೀರ್ಯ ಇವು ಸಾರ್ವಕಾಲಿಕವಾಗಿ ಸಂಗೀತ ಪ್ರಿಯರ ಮನ್ನಣೆ ಗಳಿಸುವಂತಿವೆ.

೧೯೮೦ರಲ್ಲಿ ಬಾಂಗ್ಲಾದೇಶದ ಗಾಯಕಿ ಮಿತಾಲಿ ಮುಖರ್ಜಿಯನ್ನು ವಿವಾಹವಾದ ನಂತರ ಚಲನಚಿತ್ರಗಳಿಗೆ ಹಾಡುವುದನ್ನು ಬಹುತೇಕವಾಗಿ ನಿಲ್ಲಿಸಿದ ಭೂಪಿಂದರ್ ಹಲವು ಸಂಗೀತ ಗುಚ್ಛಗಳನ್ನು ತಮ್ಮ ಆಲ್ಬಂಗಳ ಮೂಲಕ ಪರಿಚಯಿಸಿದ್ದಾರೆ. ಈ ಹಂತದಲ್ಲಿ ಬಾಲಿವುಡ್ ಹಾಡುಗಳು ಚಿತ್ರದ ಮೂಲ ಕತೆಯಿಂದ ವಿಮುಖವಾಗಿ, ಅಪ್ರಸ್ತುತವಾಗತೊಡಗಿದ್ದನ್ನು ಸ್ಮರಿಸುತ್ತಿದ್ದ ಭೂಪಿಂದರ್, ೧೯೮೦ರ ನಂತರ ಸಿನೆಮಾ ಹಾಡುಗಳು ಚಿತ್ರದ ಮತ್ತೊಂದು ಭಾಗವಾಗಿತ್ತೇ ಹೊರತು, ಸತ್ವಯುತವಾಗಿರಲಿಲ್ಲ ಎಂದು ವಿಷಾದಿಸುತ್ತಿದ್ದರು. ರಾಮ್‌ಗೋಪಾಲ್ ವರ್ಮಾ ಅವರ ‘ಸತ್ಯ’ ಚಿತ್ರದ ನಂತರ ಭೂಪಿಂದರ್ ಸಿನೆಮಾ ಹಾಡುಗಳನ್ನು ಹಾಡಲಿಲ್ಲ. ಆದರೆ ಪತ್ನಿ ಮಿತಾಲಿ ಅವರ ಜೊತೆಗೂಡಿ ಅನೇಕ ಆಲ್ಬಂಗಳನ್ನು ನೀಡಿದ್ದಾರೆ. ತಮ್ಮ ಗಾಯನಶೈಲಿಗೆ ತಕ್ಕಂತೆ ಹಿಂದಿ ಚಿತ್ರದ ಹಾಡುಗಳು ಇಲ್ಲದಿರುವುದೇ ತಾವು ಹಿಂಜರಿಯಲು ಕಾರಣ ಎಂದು ಹೇಳುವ ಭೂಪಿಂದರ್, ಬಾಲಿವುಡ್ ಗೀತೆಗಳ ಹಿನ್ನೆಲೆಯಲ್ಲಿ ಕೇಳಿಬರುವ ಗಿಟಾರ್ ತಂತಿಯ ಸ್ವರದಿಂದಲೇ ಚಿತ್ರರಸಿಕರನ್ನು ರಂಜಿಸಿರುವುದನ್ನು ಮರೆಯು ವಂತಿಲ್ಲ. ‘ಯಾದೋಂಕಿ ಬಾರಾತ್’ ಚಿತ್ರದ ‘ಚುರಾಲಿಯಾ ಹೈ ತುಮ್ ನೆ ಜೊ ದಿಲ್ ಕೋ’ ಹಾಡಿನ ಆರಂಭದ ಗಿಟಾರ್ ಸ್ವರ ಇತರ ಭಾಷೆಯ ಹಲವು ಹಾಡುಗಳಿಗೆ ಸ್ಫೂರ್ತಿ ನೀಡಿದೆ. ಹಾಗೆಯೇ ‘ಶೋಲೆ’ ಚಿತ್ರದ ‘ಮೆಹಬೂಬಾ ಮೆಹಬೂಬಾ’ ಹಾಡಿನ ಆರಂಭಿಕ ಗಿಟಾರ್ ವಾದನ.

೧೯೮೦-೯೦ರ ದಶಕದಲ್ಲಿ ಪಂಕಜ್ ಉದಾಸ್, ಮನ್ಹರ್ ಉದಾಸ್, ಜಗಜೀತ್ ಸಿಂಗ್, ಚಿತ್ರಾ ಸಿಂಗ್ ಮುಂತಾದ ಗಝಲ್ ದಿಗ್ಗಜರ ನಡುವೆಯೇ ತಮ್ಮ ವಿಶಿಷ್ಟ ಗಾಯನ ಶೈಲಿಯಿಂದ ಛಾಪು ಮೂಡಿಸಿದ ಭೂಪಿಂದರ್ ಶಾಸ್ತ್ರೀಯ ಧಾಟಿಯಲ್ಲೇ ತಮ್ಮ ಸಂಗೀತದ ಆಲ್ಬಂಗಳನ್ನು ರೂಪಿಸುತ್ತಿದ್ದರು. ಸಂಗೀತದಲ್ಲಿ ಭಾರತೀಯತೆ ಮತ್ತು ಭಾರತದ ಶಾಸ್ತ್ರೀಯ ಸಂಗೀತದ ಛಾಪನ್ನು ಉಳಿಸಿಕೊಂಡೇ, ಆರ್.ಡಿ. ಬರ್ಮನ್ ಅವರೊಡನೆ ಪಾಶ್ಚಿಮಾತ್ಯ ಸಂಗೀತಕ್ಕೆ ತಕ್ಕಂತೆ ಗಿಟಾರ್ ನುಡಿಸುತ್ತಿದ್ದ ಭೂಪಿಂದರ್ ತಮ್ಮ ಬೆಳವಣಿಗೆಯಲ್ಲಿ ಆರ್.ಡಿ. ಬರ್ಮನ್ ಅವರ ಕೊಡುಗೆ ಇರುವುದನ್ನೂ ಹೆಮ್ಮೆಯಿಂದ ಸ್ಮರಿಸುತ್ತಾರೆ. ಪತ್ನಿ ಮಿತಾಲಿ ಸಿಂಗ್ ಜೊತೆಗೂಡಿ ಆರ್ಝೂ, ಚಾಂದ್‌ನಿ ರಾತ್, ಗುಲ್‌ಮೊಹರ್, ಗಝಲ್ ಕೆ ಫೂಲ್, ಏಕ್ ಆರ್ಝೂ, ಆನಂದ್ ಲೋಕ್ ಮೇ ಮುಂತಾದ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದ ಭೂಪಿಂದರ್ ಗುಲ್ಝಾರ್ ಅವರೊಡನೆ ಸುರ್ಮಯೀ ರಾತ್ ಎಂಬ ಆಲ್ಪಂ ಕೂಡ ನೀಡಿದ್ದಾರೆ. ಸಿನೆಮಾ ಹಾಡುಗಾರಿಕೆಯನ್ನು ನಿಲ್ಲಿಸಿದರೂ ಮೂರು ದಶಕಗಳ ಕಾಲ ಗಝಲ್ ಗಾಯನದ ಮೂಲಕ ಸಂಗೀತ ಪ್ರಿಯರ ಹೃದಯ ಸಾಮ್ರಾಜ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ ಗಳಿಸಿದ ಭೂಪಿಂದರ್ ತಮ್ಮ ೮೨ನೆಯ ವಯಸ್ಸಿನಲ್ಲಿ ಕೊಲೋನ್ ಕ್ಯಾನ್ಸರ್‌ನಿಂದ ಬಳಲಿ, ಕೋವಿಡ್ ಸೋಂಕಿತರಾಗಿ, ಕೊನೆಯದಾಗಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಭೂಪಿಂದರ್ ಸಿಂಗ್ ಅವರ ಹೃದಯ ಬಡಿತ ಸ್ಥಗಿತಗೊಂಡಿದೆ. ಆದರೆ ಅವರ ಗಿಟಾರ್ ತಂತಿಯ ಮಧುರ ಧ್ವನಿ ಸಂಗೀತ ಪ್ರಿಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದೆ. ಅವರ ಕಂಠ ಮಾಧುರ್ಯ ಶ್ರೋತೃಗಳ ಎದೆಯಲ್ಲಿ ಆಳವಾಗಿ ನಾಟಿ ಖಾಯಂ ಆಗಿ ಉಳಿದಿರುತ್ತದೆ. ಅವರದೇ ಒಂದು ಹಾಡಿನಲ್ಲಿ ‘‘ನಾಮ್ ಗುಮ್ ಜಾಯೇಗಾ, ಚೆಹರಾ ಏ ಬದಲ್ ಜಾಯೇಗಾ, ಮೇರಿ ಆವಾಝ್ ಹೀ ಪೆಹಚಾನ್ ಹೈ’’ ಎಂದು ಹೇಳುವಂತೆ ಭೂಪಿಂದರ್ ಅವರ ಹೆಸರು ಕಾಲ ಕಳೆದಂತೆ ವಿಸ್ಮತಿಗೆ ಜಾರಿದರೂ ಅವರ ಮುಖಚಹರೆ ಮರೆತುಹೋದರೂ, ಅವರ ಮಧುರ ಧ್ವನಿ ಗುನುಗುನಿಸುತ್ತಲೇ ಇರುತ್ತದೆ, ಶಾಶ್ವತವಾಗಿ.

ಅಭೂತಪೂರ್ವ ಗಾಯಕ, ಕಲಾವಿದ, ಗಝಲ್ ಸಾಮ್ರಾಟ್ ಭೂಪಿಂದರ್‌ಗೆ ಅಂತಿಮ ನಮನಗಳು.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News