ಕುಪ್ಪೆಪದವು: ಬೀಡಿ ಕೆಲಸಗಾರರ ಸಂಘದ ಸಭೆ
Update: 2022-07-24 21:31 IST
ಮಂಗಳೂರು: ಕುಪ್ಪೆಪದವು ಪ್ರದೇಶ ಬೀಡಿ ಕೆಲಸಗಾರರ ಸಂಘ (ಸಿಐಟಿಯು)ದ ೩೨ನೇ ವಾರ್ಷಿಕ ಮಹಾಸಭೆಯು ಕುಪ್ಪೆಪದವು ಗ್ರಾಪಂ ಸಭಾಭವನದಲ್ಲಿ ರವಿವಾರ ನಡೆಯಿತು.
ಸಂಘದ ಅಧ್ಯಕ್ಷ ಎನ್.ಎ. ಹಸನಬ್ಬ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬೀಡಿ ಫೆಡರೇಶನ್ನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ ದ.ಕ. ಜಿಲ್ಲೆಯ ಬೀಡಿ ಕಾರ್ಮಿಕರು ಹಲವು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅಂದಾಜು 2 ಲಕ್ಷ ಬೀಡಿ ಕೆಲಸಗಾರರಿದ್ದು, ಈ ಉದ್ಯಮ ನಿಷೇಧ ಅಂಚಿನಲ್ಲಿದೆ. ಚುನಾಯಿತ ಪ್ರತಿನಿಧಿಗಳು ಬೀಡಿ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೀಡಿ ಸಂಘದ ಮುಖಂಡ ಸದಾಶಿವ ದಾಸ್, ಭವಾನಿ, ಬೇಬಿ ನಾಯ್ಕ್, ವೇದಾವತಿ ಇರುವೈಲು, ಹೇಮಲತಾ ಮುಚ್ಚೂರು, ವಾರಿಜಾ, ವಸಂತಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.