ಬೆಂಗಳೂರು: ಮೂರು ಅಂತಸ್ತಿನ ಕಟ್ಟಡ ಕುಸಿತ
ಬೆಂಗಳೂರು, ಆ.6: ಕಳೆದ ನಾಲ್ಕೈದು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆ ಬೀಳುತ್ತಿರುವ ಹಿನ್ನೆಲೆ ಮೂರು ಅಂತಸ್ತಿನ ಕಟ್ಟಡ ದಿಢೀರ್ ಕುಸಿದಿರುವ ಘಟನೆ ಇಲ್ಲಿನ ಕೆ.ಆರ್ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಅವೆನ್ಯೂ ರಸ್ತೆಯ ಬೆಳ್ಳಿ ಬಸವ ದೇವಸ್ಥಾನ ಬಳಿಯ ಭಂಡಾರಿ ಎಂಬುವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡ ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ನೆಲಕ್ಕೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಈ ಅವಘಡ ಸಂಭವಿಸಿದ್ದು, ಪ್ಲಾಸ್ಟಿಕ್ ಮತ್ತು ಗಿಫ್ಟ್ ಮಳಿಗೆಗಳ ಕಟ್ಟಡ ಇದಾಗಿದೆ. ಘಟನೆ ಹಿನ್ನೆಲೆ ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಸಿಟಿ ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಮಳಿಗೆ ಮಾಲಕ ಅಖಿಲ್, ಈ ಕಟ್ಟಡ ಮೂವರು ಅಣ್ಣ ತಮ್ಮಂದಿರಿಗೆ ಸೇರಿದ್ದಾಗಿದೆ. ಮೇಲಿನ ಎರಡು ಅಂತಸ್ತಿನಲ್ಲಿ ಯಾರು ವಾಸವಾಗಿರಲಿಲ್ಲ. ಮಳೆ ಬಂದಾಗ ನೀರು ಸೋರುತಿತ್ತು.ಮೇಲಿನ ಕಟ್ಟಡ ಕಳೆದ ಇಪ್ಪತ್ತು ವರ್ಷಗಳಿಂದ ಖಾಲಿ ಇದೆ. ಬೆಳಗ್ಗೆ ಮೂರೂವರೇ ಸುಮಾರಿಗೆ ಈ ಘಟನೆ ನಡೆದಿದೆ ಎಂದರು.