ಬೆಂಗಳೂರು | ಪ್ರವಾಸಕ್ಕೆ ಕರೆದೊಯ್ದು ಪತ್ನಿಯ ಕೊಲೆ: ಆರೋಪಿ ಪತಿಯ ಬಂಧನ

Update: 2022-08-17 13:33 GMT

ಬೆಂಗಳೂರು, ಆ.17: ಪ್ರವಾಸಕ್ಕೆ ಪತ್ನಿಯನ್ನು ಕರೆದೊಯ್ದ ಕಾರಿನಲ್ಲೇ ಸ್ನೇಹಿತನ ಜೊತೆ ಸೇರಿ ಕೊಲೆಗೈದಿರುವ ಆರೋಪದಡಿ ಪತಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೃಥ್ವಿರಾಜ್(30) ಬಂಧಿತ ಆರೋಪಿ. ತಲೆಮರೆಸಿಕೊಂಡಿರುವ ಈತನ ಸ್ನೇಹಿತ, ಬಿಹಾರ ಮೂಲದ ಸಮೀರ್ ಕುಮಾರ್ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಏನಿದು ಪ್ರಕರಣ?: ಬಿಕಾಂ ಪದವೀಧರೆ ಜ್ಯೋತಿಕುಮಾರಿ ಎಂಬಾಕೆ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಆ ಸಂದರ್ಭದಲ್ಲೇ ಪೃಥ್ವಿರಾಜ್‍ನನ್ನು ಪ್ರೀತಿಸಿ 2021ನೆ ನವೆಂಬರ್‍ನಲ್ಲಿ ವಿವಾಹವಾಗಿದ್ದರು. ಆದರೆ, ಇತ್ತೀಚೆಗೆ ವೈಷಮ್ಯ ಉಂಟಾಗಿದೆ. ಹಾಗಾಗಿ, ಪತ್ನಿಯನ್ನು ಕೊಲೆ ಮಾಡಲು ನಿರ್ಧರಿಸಿದ ಪೃಥ್ವಿರಾಜ್ ಹಲವು ಯೋಜನೆಗಳನ್ನು ಹಾಕಿಕೊಂಡು ಆಕೆಯ ಮನವೊಲಿಸಿ ಆ.1ರಂದು ಝೂಮ್ ಕಾರನ್ನು ಬಾಡಿಗೆಗೆ ಪಡೆದುಕೊಂಡು ಪತ್ನಿ ಹಾಗೂ ಸ್ನೇಹಿತನನ್ನು ಉಡುಪಿ ಬಳಿಯ ಮಲ್ಪೆ ಬೀಚ್‍ಗೆ ಹೋಗಿದ್ದಾನೆ.

ಬಳಿಕ ಅಲ್ಲಿನ ಹೊಟೇಲ್‍ವೊಂದರಲ್ಲಿ ಕೊಠಡಿ ಪಡೆದುಕೊಂಡಿದ್ದು, ಮರುದಿನ ಆ.2ರಂದು ಮಲ್ಪೆಯಿಂದ ಬೆಂಗಳೂರಿಗೆ ವಾಪಸ್ ಬರುವಾಗ ಮಾರ್ಗ ಮಧ್ಯದ ಶಿರಾಡಿಘಾಟ್‍ನ (ShiradiGhat) ರಾಜಘಟ್ಟದ ಬಳಿ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಜ್ಯೋತಿಕುಮಾರಿಯ ವೇಲ್‍ನಿಂದ ಕುತ್ತಿಗೆ ಬಿಗಿದು ಸ್ನೇಹಿತನ ನೆರವಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎನ್ನಲಾಗಿದೆ.

ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಅರಣ್ಯ ಪ್ರದೇಶದಲ್ಲಿ ಬಿಸಾಕಿ, ಸಾಕ್ಷ್ಯ ನಾಶಪಡಿಸಿ ವಾಪಸ್ ಬೆಂಗಳೂರಿಗೆ ಬಂದು, ಪತ್ನಿ ಕಾಣೆಯಾಗಿದ್ದಾಳೆ ಎಂದು ಮಡಿವಾಳ ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಪೃಥ್ವಿರಾಜ್ ಮೇಲೆಯೇ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಿದಾಗ, ಪ್ರವಾಸಕ್ಕೆ ಕರೆದೊಯ್ದು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News