ಬೈಕಂಪಾಡಿ, ಹಳೆಯಂಗಡಿ ಪೇಟೆಯಲ್ಲಿ ಗೋಡ್ಸೆ, ಸಾವರ್ಕರ್ ಬ್ಯಾನರ್: ತೆರವುಗೊಳಿಸಿದ ಪೊಲೀಸರು
ಸುರತ್ಕಲ್: ಇಲ್ಲಿನ ಬೈಕಂಪಾಡಿ(Baikampady) ಮತ್ತು ಹಳೆಯಂಗಡಿ ಪೇಟೆಯಲ್ಲಿ ಮಹಾತ್ಮಗಾಂಧಿ ಹಂತಕ ನಾತೂರಾಮ್ ಗೋಡ್ಸೆ(Nathuram Godse) ಮತ್ತು ಸಾವರ್ಕರ್(Savarkar) ಭಾವಚಿತ್ರ ಇರುವ ಬ್ಯಾನರ್ ಅಳವಡಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಶ್ರಿ ಕೃಷ್ಣ ಜನ್ಮಾಷ್ಟಮಿಗೆ ಶುಭಕೋರಿ ಅಖಿಲ ಭಾರತ ಹಿಂದೂ ಮಹಾ ಸಭಾದ ಹೆಸರಿನಲ್ಲಿ ಅದರ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರ ಹೆಸರಿನಲ್ಲಿ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಂಪಾಡಿ ಹಾಗೂ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಪೇಟೆಯಲ್ಲಿ ಬೃಹತ್ ಬ್ಯಾನರ್ ಅಳವಡಿಸಲಾಗಿತ್ತು.
ಈ ಕುರಿತು ಕೆಲವು ಕಾಂಗ್ರೆಸ್ ಮತ್ತು ಎಸ್ ಡಿಪಿಐ ಮುಖಂಡರು ಹಾಗೂ ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ದೂರವಾಣಿಯ ಮೂಲಕ ವಿಚಾರಿಸಿದ್ದಾರೆ. ನಂತರ ಪೊಲೀಸರು ಎರಡೂ ಕಡೆಗಳಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಂಜಾರರ ಧಾರ್ಮಿಕ ಕ್ಷೇತ್ರದಲ್ಲಿ RSS ಶಿಬಿರ: ಮುಖಂಡರ ತೀವ್ರ ಖಂಡನೆ