ಬಿಜೆಪಿಯಿಂದ ಚುನಾಯಿತ ಸರಕಾರಗಳ ಕಗ್ಗೊಲೆ: ಆಪ್ ಕಿಡಿ

Update: 2022-08-29 17:42 GMT

ಬೆಂಗಳೂರು, ಆ.29: ಜನಸಾಮಾನ್ಯರ ರಕ್ತ ಮತ್ತು ಬೆವರಿನ ಬೆಲೆಯಲ್ಲಿ ಬರುವ ನಿಮ್ಮ ತೆರಿಗೆ ಹಣವನ್ನು ಬಿಜೆಪಿಯವರು ತಮ್ಮ ಕೋಟ್ಯಾಧಿಪತಿ ಗೆಳೆಯರ ಸಾಲ ತೀರಿಸಲು ಬಳಸುತ್ತಿದ್ದಾರೆ. ರಾಷ್ಟ್ರದ ಜನತೆಯ ಹಣದಿಂದ ಶಾಸಕರನ್ನು ಖರೀದಿಸುವ ಮೂಲಕ ಬಿಜೆಪಿ ಇಲ್ಲಿಯವರೆಗೆ ಹಲವು ರಾಜ್ಯಗಳಲ್ಲಿ ಚುನಾಯಿತ ಸರಕಾರಗಳನ್ನು ಉರುಳಿಸಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಕಿಡಿಗಾರಿದರು.

ಸೋಮವಾರ ನಗರದಲ್ಲಿರುವ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಅಸ್ಸಾಂ, ಮಧ್ಯಪ್ರದೇಶ, ಬಿಹಾರ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ಮೇಘಾಲಯದಲ್ಲಿ ಸರಕಾರಗಳು ಪತನಗೊಂಡಿದೆ. ಜನರು ದೊಡ್ಡ ನಿರೀಕ್ಷೆಯೊಂದಿಗೆ ಸರಕಾರವನ್ನು ಆಯ್ಕೆ ಮಾಡುತ್ತಾರೆ ಮತ್ತು ಬಿಜೆಪಿ ಹಣದ ಆಧಾರದ ಮೇಲೆ ಶಾಸಕರನ್ನು ಖರೀದಿಸುತ್ತದೆ ಮತ್ತು ಸರಕಾರವನ್ನು ಉರುಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ರಾಷ್ಟ್ರಕ್ಕೆ ಅತ್ಯಂತ ಅಪಾಯಕಾರಿ ಹಾಗೂ ಅರಾಜಕತೆಯತ್ತ ತೆಗೆದುಕೊಂಡು ವಾಲುತ್ತಿದೆ. ಬಿಜೆಪಿ, ಸರಕಾರವನ್ನು ಬೀಳಿಸಲು ಎಲ್ಲೆಡೆ ಒಂದೇ ಮಾದರಿಯನ್ನು ಹೊಂದಿದೆ. ಈ ಎಲ್ಲ ರಾಜ್ಯಗಳಲ್ಲಿ, ಸಿಬಿಐ, ಈ.ಡಿ. ದಾಳಿಗಳ ಭಯವನ್ನು ತೋರಿಸಿ ಬಿಜೆಪಿ ದೇಶಾದ್ಯಂತ 277 ಶಾಸಕರನ್ನು ಖರೀದಿಸಿದೆ. ಎಲ್ಲ ಶಾಸಕರಿಗೆ 20-20 ಕೋಟಿ ನೀಡಿದ್ದರೂ, ಇಲ್ಲಿಯವರೆಗೆ 5,500 ಕೋಟಿ ಹೂಡಿಕೆಯಾಗಿದೆ ಎಂದು ಅವರು ಆರೋಪಿಸಿದರು.

ದಿಲ್ಲಿಯಲ್ಲಿಯೂ ಬಿಜೆಪಿ ಆಮ್ ಆದ್ಮಿ ಪಕ್ಷದ ಪ್ರತಿಯೊಬ್ಬ ಶಾಸಕರಿಗೆ 20-20 ಕೋಟಿ ರೂಪಾಯಿಗಳನ್ನು ನೀಡಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿರಬೇಕು. ಬಿಜೆಪಿಗೆ 40 ಶಾಸಕರು ಬೇಕು, ಹಾಗಾದರೆ ನಾವು ಬಿಜೆಪಿಯನ್ನು ಕೇಳಲು ಬಯಸುತ್ತೇವೆ, ಅವರು 800 ಕೋಟಿಗಳನ್ನು ಎಲ್ಲಿ ಇಡುತ್ತಿದ್ದಾರೆ? ಅಷ್ಟಕ್ಕೂ ಬಿಜೆಪಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತೆ? ಎಂದು ನಾಗಣ್ಣ ಪ್ರಶ್ನಿಸಿದರು.

ನಾವು ದಿಲ್ಲಿಯ 800 ಕೋಟಿಗಳನ್ನು ಸೇರಿಸಿದರೆ, ಇಲ್ಲಿಯವರೆಗೆ ಬಿಜೆಪಿ ಶಾಸಕರನ್ನು ಖರೀದಿಸಲು 6300 ಕೋಟಿ ಖರ್ಚು ಮಾಡಿದೆ. ಬಿಜೆಪಿಗೆ ಇಷ್ಟು ಹಣ ಎಲ್ಲಿಂದ ಬರುತ್ತದೆ? ಇದು ಯಾರ ಹಣ? ಇಂದು ದೇಶದಲ್ಲಿ ಹಣದುಬ್ಬರವನ್ನು ಎಷ್ಟರಮಟ್ಟಿಗೆ ಹೆಚ್ಚಿಸಿದ್ದಾರೆ ಎಂದರೆ ಪ್ರತಿಯೊಬ್ಬ ವ್ಯಕ್ತಿಯೂ ಹಣದುಬ್ಬರದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಅವರು ಹೇಳಿದರು.

2014 ರಲ್ಲಿ ಡೀಸೆಲ್ ಬೆಲೆ 54 ರೂ., ಇಂದು 90 ರೂ. ಹಿಂದೆ ಸಿಎನ್‍ಜಿ 35 ರೂ.ಗೆ ಲಭ್ಯವಿತ್ತು, ಇಂದು 75 ರೂ.ಗೆ ತಲುಪಿದೆ. ಸಿಲಿಂಡರ್ ಮಾದರಿಯ ಅಡುಗೆ ಅನಿಲ 410 ರೂ.ಗೆ ಲಭ್ಯವಿದ್ದವು, ಇಂದು ಅದು ರೂ.1053 ಆಗಿದೆ. ಖಾದ್ಯ ತೈಲ 70 ರೂ.ಗೆ ಲಭ್ಯವಿತ್ತು, ಇಂದು 170 ರೂ.ಆಗಿದೆ. ಅದೇ ರೀತಿ ಪ್ರತಿ ಆಹಾರ ಮತ್ತು ಪಾನೀಯ ವಸ್ತುಗಳ ಬೆಲೆ ಹೆಚ್ಚಾಗಿದೆ ಮತ್ತು ಎಲ್ಲದರ ಬೆಲೆ ಎರಡು ಮೂರು ಪಟ್ಟು ಹೆಚ್ಚಾಗಿದೆ. ಇಷ್ಟು ಹಣದುಬ್ಬರ, ಮೇಲಿಂದ ಮೇಲೆ ಹೆಚ್ಚಿದ ಜಿಎಸ್‍ಟಿ, ಈ ಹಣ ಎಲ್ಲಿಗೆ ಹೋಗುತ್ತಿದೆ? ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದು ನಾಗಣ್ಣ ತಿಳಿಸಿದರು.

ನೀವು ಕಷ್ಟಪಟ್ಟು ದುಡಿದ ಹಣವನ್ನು ಬಿಜೆಪಿ ತನ್ನ ಕೋಟ್ಯಾಧಿಪತಿಗಳ ಸಾಲ ಮನ್ನಾ ಮಾಡಲು ಅಥವಾ ಶಾಸಕರನ್ನು ಖರೀದಿಸಲು ಬಳಸುತ್ತಿದೆ. ಮಹಾರಾಷ್ಟ್ರದಲ್ಲಿ ಸರಕಾರ ಬೀಳಬೇಕಾದರೆ, ಮಜ್ಜಿಗೆ, ಮೊಸರು, ಗೋಧಿ ಮತ್ತು ಅಕ್ಕಿ ಮೇಲೆ ಜಿಎಸ್ಟಿ ವಿಧಿಸಲಾಯಿತು, ಅದೇ ರೀತಿಯಲ್ಲಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸುತ್ತಾರೆ, ಹಣದುಬ್ಬರವನ್ನು ಹೆಚ್ಚಿಸುತ್ತಾರೆ, ಕೋಟ್ಯಾಧಿಪತಿ ಸ್ನೇಹಿತರ ಸಾಲವನ್ನು ಮನ್ನಾ ಮಾಡುತ್ತಾರೆ. ಬಿಜೆಪಿ ಬಡವರ ಹಣ ಹೀರುತ್ತದೆ. ಮೋದಿಯವರ ಅಧಿಕಾರವನ್ನು ಪೂರೈಸಲು ಎಲ್ಲಾ ಹಣವನ್ನು ಖರ್ಚು ಮಾಡಲಾಗುತ್ತಿದೆ ಎಂದು ನಾಗಣ್ಣ ಆತಂಕ ವ್ಯಕ್ತಪಡಿಸಿದರು.

ಇತ್ತೀಚೆಗೆ, ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ,ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಜನರ ಸಹಕಾರವನ್ನು ಕೋರಿದರು. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ಐದು ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿಗೆ ಹೇಳಿದ್ದಾರೆ ಮತ್ತು ಅವರು ನಿಜವಾಗಿಯೂ ಭ್ರಷ್ಟಾಚಾರದ ವಿರುದ್ಧವಾಗಿದ್ದರೆ, ತನಿಖೆ ಮಾಡುವ ಮೂಲಕ ಇದನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ ಎಂದು ನಾಗಣ್ಣ ತಿಳಿಸಿದರು.

ಗುಜರಾತ್‍ನ ಯುವಕರು ಪರೀಕ್ಷಾ ಪತ್ರಿಕೆ ಸೋರಿಕೆಯಿಂದ ತೊಂದರೆಗೀಡಾಗಿದ್ದಾರೆ, ಪ್ರತಿ ಪತ್ರಿಕೆಯೂ ಸೋರಿಕೆಯಾಗಿದೆ. ಗುಜರಾತ್‍ನಲ್ಲಿ 27 ವರ್ಷಗಳಿಂದ ಬಿಜೆಪಿ ಸರಕಾರವಿದೆ. ಮೋದಿ, ನಿಮಗೆ ಧೈರ್ಯವಿದ್ದರೆ, ಗುಜರಾತ್ ಚುನಾವಣೆಗೆ ಮುನ್ನ, ತಪ್ಪಿತಸ್ಥರನ್ನು ಜೈಲಿಗೆ ಹಾಕಿ. ಇಲ್ಲಿಯವರೆಗೆ, ಗುಜರಾತ್‍ನಲ್ಲಿ 22 ಸಾವಿರ ಕೋಟಿ ರೂ.ಮೌಲ್ಯದ ಡ್ರಗ್ಸ್ ಮೋದಿ ಯವರ ಸ್ನೇಹಿತನ ಖಾಸಗಿ ಬಂದರಿನಿಂದ ಸಿಕ್ಕಿಬಿದ್ದಿದೆ. ಮೋದಿಗೆ ಧೈರ್ಯವಿದ್ದರೆ ಗುಜರಾತ್ ಚುನಾವಣೆಗೂ ಮುನ್ನ ಸಿಬಿಐ ಅಥವಾ ಈ.ಡಿ. ತನಿಖೆ ನಡೆಸಿ ತೋರಿಸಿ ಎಂದು ಅವರು ಸವಾಲು ಹಾಕಿದರು.

ಗುಜರಾತಿನಲ್ಲಿ ನಕಲಿ ಮದ್ಯ ಸೇವಿಸಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, ಈ ದಂಧೆ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ನಡೆಯುತ್ತಿದೆ, ಮೋದಿ, ನಿಮಗೆ ಧೈರ್ಯವಿದ್ದರೆ, ಗುಜರಾತ್ ಚುನಾವಣೆಗೂ ಮುನ್ನ ಸಿಬಿಐ ಅಥವಾ ಈ.ಡಿ. ತನಿಖೆ ನಡೆಸಿ ತೋರಿಸಿ. ಪ್ರಧಾನಿ ಬುಂದೇಲ್‍ಖಂಡ್‍ನಲ್ಲಿ ಎಕ್ಸ್‍ಪ್ರೆಸ್‍ವೇಯನ್ನು ಉದ್ಘಾಟಿಸಲು ಹೋಗಿದ್ದರು ಮತ್ತು ಉದ್ಘಾಟನೆಯ ಐದನೇ ದಿನ ಅದು ಕುಸಿದಿದೆ. ಸಿಬಿಐ ತನಿಖೆ ನಡೆಯಲಿಲ್ಲ, ಇದಕ್ಕೆ ವಿರುದ್ಧವಾಗಿ, ಅವರಿಗೆ ಹೆಚ್ಚಿನ ಗುತ್ತಿಗೆಗಳನ್ನು ನೀಡಲಾಯಿತು. ಮೋದಿ, ಗುಜರಾತ್ ಚುನಾವಣೆಗೆ ಮುನ್ನ ಸಿಬಿಐ ಅಥವಾ ಈ.ಡಿ. ತನಿಖೆಗೆ ಒಳಪಡಿಸುವ ಮೂಲಕ ನಿಮ್ಮ ಶಕ್ತಿಯನ್ನು ತೋರಿಸಿ ಎಂದು ನಾಗಣ್ಣ ಸವಾಲು ಹಾಕಿದರು.

ದೊಡ್ಡ ಕೈಗಾರಿಕೋದ್ಯಮಿಗಳ 10.72 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ. ಇವರೇ ಕೋಟ್ಯಾಧಿಪತಿ ಗೆಳೆಯರು, ಬಿಜೆಪಿಯವರು ಚೆಕ್ ರೂಪದಲ್ಲಿ ದೇಣಿಗೆ ಪಡೆದಿದ್ದಾರೆ. ಇದಕ್ಕಿಂತ ದೊಡ್ಡ ಭ್ರಷ್ಟಾಚಾರ ಇರಬಹುದೇ? ನೀವು ಕೈಗಾರಿಕೋದ್ಯಮಿಗಳ ಸಾಲವನ್ನು ಮನ್ನಾ ಮಾಡುತ್ತೀರಿ ಮತ್ತು ಪ್ರತಿಯಾಗಿ ಅವರು ನಿಮ್ಮ ಪಕ್ಷದ ನಿಧಿಗೆ ದೇಣಿಗೆ ನೀಡುತ್ತಾರೆ, ಮೋದಿ, ನಿಮಗೆ ಧೈರ್ಯವಿದ್ದರೆ, ಗುಜರಾತ್ ಚುನಾವಣೆಯ ಮೊದಲು ಸಿಬಿಐ ಅಥವಾ ಈ.ಡಿ. ತನಿಖೆಯನ್ನು ಪಡೆಯುವ ಮೂಲಕ ಅವರನ್ನು ತೋರಿಸಿ ಎಂದು ನಾಗಣ್ಣ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News