ಸಾರ್ವಜನಿಕ ಗಣೇಶೋತ್ಸವ; ನಿರಾಕ್ಷೇಪಣಾ ಪತ್ರ ಕಡ್ಡಾಯ: ಬೆಸ್ಕಾಂ ನಿಯಮಾವಳಿ ಜಾರಿಗೆ

Update: 2022-08-30 07:46 GMT

ಬೆಂಗಳೂರು, ಆ. 29: ಸಾರ್ವಜನಿಕ ಗಣೇಶೋತ್ಸವಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಬಿಬಿಎಂಪಿಯಿಂದ ನಿರಾಕ್ಷೇಪಣಾ ಪತ್ರ ಕಡ್ಡಾಯವಾಗಿದ್ದು, ವಿದ್ಯುತ್ ಸಂಪರ್ಕಕ್ಕೆ ಬೆಸ್ಕಾಂ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತಂದಿದೆ. 

ಸೋಮವಾರ ಬೆಂಗಳೂರು ನಗರ ಪೊಲೀಸ್ ಮತ್ತು ಬಿಬಿಎಂಪಿ ಜಂಟಿಯಾಗಿ ಆಯೋಜಿಸಿದ್ದ ಗಣೇಶೋತ್ಸವ ಸಾರ್ವಜನಿಕ ಶಾಂತಿ ಸೌಹಾರ್ದ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮತ್ತು ನಿರ್ದೇಶಕ ತಾಂತ್ರಿಕ ಡಿ.ನಾಗಾರ್ಜುನ ಭಾಗವಹಿಸಿ, ಸಾರ್ವಜನಿಕ ಗಣೇಶೋತ್ಸವ ವೇಳೆ ನೀಡುವ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ರೂಪಿಸಿರುವ ನಿಯಾಮವಳಿಗಳನ್ನು ಸಭೆಯ ಗಮನಕ್ಕೆ ತಂದರು. 

‘ಗಣೇಶೋತ್ಸವ ಸಮಾರಂಭದ ಆಯೋಜಕರು/ಸಂಘಟಕರು ಸಂಬಂಧಪಟ್ಟ ಬಿಬಿಎಂಪಿಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಬೆಸ್ಕಾಂನ ಸಂಬಂಧಪಟ್ಟ ಉಪ ವಿಭಾಗದಲ್ಲಿ ಸಲ್ಲಿಸಲು ಸೂಚಿಸಲಾಗಿದೆ. ಸಂಬಂಧಪಟ್ಟ ಉಪವಿಭಾಗದಲ್ಲಿ ನೀಡಲಾದ ವಿದ್ಯುತ್ ಮಂಜೂರಾತಿ ಪತ್ರದ ಅನುಸಾರ ಅಗತ್ಯ ಶುಲ್ಕವನ್ನು ಬೆಸ್ಕಾಂಗೆ ಪಾವತಿಸಲು ಆಯೋಜಕರಿಗೆ ನಿರ್ದೇಶನ ನೀಡಿದೆ.

‘ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಮುನ್ನ ಬೆಸ್ಕಾಂ ಕ್ಷೇತ್ರಾಧಿಕಾರಿಗಳಿಗೆ ಸಮಾರಂಭದ ಸ್ಥಳ ಪರಿಶೀಲನೆ ಮತ್ತು ತಪಾಸಣೆ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಭೂಗತ ಕೇಬಲ್‍ನ್ನು ಉಪಯೋಗಿಸಿಕೊಂಡು ಓವರ್ ಹೆಡ್ ಮಾರ್ಗದಲ್ಲಿ ಎಳೆದು ವಿದ್ಯುತ್ ಸಂಪರ್ಕ ಪಡೆಯಬೇಕು. ಅಲ್ಲದೆ ಓವರ್ ಹೆಡ್ ಮಾರ್ಗದ ಸುರಕ್ಷತೆಯ ಹಿತದೃಷ್ಟಿಯಿಂದ ಯಾವುದೇ ರೀತಿಯ ಜಾಯಿಂಟ್ ಇಲ್ಲದೆ, ವಿದ್ಯುತ್ ಸೊರಿಕೆಯಾಗದೇ ಇರುವುದನ್ನು ಸಂಘಟಕರು ಖಚಿತಪಡಿಸಿಕೊಳ್ಳಬೇಕು. 

‘ವಿದ್ಯುತ್ ಸಂಪರ್ಕವನ್ನು ಪಡೆಯುವ ಸಂದರ್ಭದಲ್ಲಿ ನೋಂದಾಯಿತ ವಿದ್ಯುತ್ ಗುತ್ತಿಗೆದಾರರಿಂದ ವೈರಿಂಗ್ ಮತ್ತು ಎಲ್‍ಸಿಬಿ/ಇಎಲ್‍ಸಿಬಿ ಸಾಧನವನ್ನು ಅಳವಡಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಸುತ್ತಮುತ್ತ ಯಾವುದೇ ಇಎಚ್‍ಟಿ/ಎಚ್‍ಟಿ/ಎಲ್‍ಟಿ ವಿದ್ಯುತ್ ಮಾರ್ಗಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವುದು, ಉತ್ಸವಗಳು ನಡೆಯುವ ಸಂದರ್ಭದಲ್ಲಿ 100ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಜನಸಾಂದ್ರತೆ ಸೇರುವ ಸಾಧ್ಯತೆ ಇದ್ದಲ್ಲಿ ಕಡ್ಡಾಯವಾಗಿ ಸಂಬಂಧಪಟ್ಟ ವಿದ್ಯುತ್ ಪರಿವೀಕ್ಷಕರಿಂದ ಅನುಮತಿ ಪತ್ರವನ್ನು ಪಡೆದುಕೊಳ್ಳಬೇಕು ಮತ್ತು ಅಗ್ನಿಶಾಮಕ ಸಾಧನವನ್ನು ಅಳವಡಿಸಿಕೊಳ್ಳಬೇಕು.

ನೂರಕ್ಕಿಂತ ಕಡಿಮೆ ಜನ ಸಾಂದ್ರತೆ ಇದ್ದಲ್ಲಿ ಹೆಚ್ಚು ಜನ ಸಾಂದ್ರತೆ ಸೇರಲು ಸ್ಥಳಾವಕಾಶವಿಲ್ಲ ಎಂದು ಅಯೋಜಕರು ಬೆಸ್ಕಾಂಗೆ ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಹಾಗೆಯೇ ವಿದ್ಯುತ್ ಸಂಬಂಧಿಸಿದ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಕಾರ್ಯಕ್ರಮ ಆಯೋಜಕರೇ ಜವಾಬ್ದಾರರೆಂದು ನಿಯಮಾವಳಿಯಲ್ಲಿ ಸ್ಪಷ್ಟಪಡಿಸಲಾಗಿದೆ. 

ಸುರಕ್ಷತಾ ಮುನ್ನೆಚ್ಚರಿಕೆ: ‘ಗಣೇಶೋತ್ಸವದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂದರ್ಭಗಳಲ್ಲಿ ವಿದ್ಯುತ್ ಉಪಕರಣಗಳು ಹಾಗೂ ವಿದ್ಯುತ್ ತಂತಿಗಳಿಂದ ದೂರವಿರಬೇಕು. ಯಾವುದಾದರು ವಿದ್ಯುತ್ ಮಾರ್ಗವು ತುಂಡಾಗಿದ್ದರೆ ಅಥವಾ ಹಾನಿಗೀಡಾಗಿದ್ದರೆ ತಕ್ಷಣ ಬೆಸ್ಕಾಂ ಸಹಾಯವಾಣಿ 1912ಗೆ ಕರೆಮಾಡಿ ತಿಳಿಸಬೇಕು. ಯಾವುದೇ ವಿದ್ಯುತ್ ಉಪಕರಣಗಳನ್ನು ಒದ್ದೆ ಇರುವ ಕೈಗಳಲ್ಲಿ ಮುಟ್ಟಬಾರದು ಹಾಗೂ ಮಕ್ಕಳನ್ನು ವಿದ್ಯುತ್ ಉಪಕರಣಗಳು ಇರುವ ಜಾಗದಿಂದ ದೂರವಿರಿಸಬೇಕು. ವಿದ್ಯುತ್ ಕಂಬಗಳಿಗೆ, ಪರಿವರ್ತಕ ಕೇಂದ್ರಗಳಿಗೆ ಸಾರ್ವಜನಿಕ ಪ್ರಕಟಣೆಯ ಬ್ಯಾನರ್ ಮತ್ತು ಫಲಕಗಳನ್ನು ಕಟ್ಟಬಾರದು. ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ವಿದ್ಯುತ್ ತಂತಿಗಳ ಮೇಲಿರುವ ಮರಗಳು ಮತ್ತು ಕೊಂಬೆಗಳನ್ನು ತೆಗೆಯಬಾರದು. ವಿದ್ಯುತ್ ಸ್ವಿಚ್‍ಗಳು ಮತ್ತು ಅಲಂಕಾರಿಕಾ ವಿದ್ಯುತ್ ಬಲ್ಬ್‍ಗಳು ಮತ್ತು ಲೈಟ್‍ಗಳು ದುರಸ್ಥಿಯಾದ ಸಂದರ್ಭದಲ್ಲಿ ಸಾರ್ವಜನಿಕರು ಅದನ್ನು ದುರಸ್ಥಿಮಾಡದೇ ಪರಿಣಿತ ಎಲೆಕ್ಟ್ರಿಷಿಯನ್ ಮುಖಾಂತರ ಸರಿಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.

‘ಗಣೇಶೋತ್ಸವದ ವೇಳೆ ಯಾವುದೇ ರೀತಿಯ ಅನಧಿಕೃತ ಅಥವಾ ಅಕ್ರಮ ಮಂಜೂರಾದ ವಿದ್ಯುತ್ ನಿಗದಿತ ಪ್ರಮಾಣಕ್ಕಿಂತ ಹೆಚ್ಚವರಿಯಾಗಿ ವಿದ್ಯುತ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಬೀದಿಗಳಲ್ಲಿ ಗಣೇಶ ವಿಗ್ರಹವನ್ನು ಮೆರವಣಿಗೆ ಮಾಡುವ ರಸ್ತೆಯ ನಕ್ಷೆ ಮತ್ತು ದಿನಾಂಕ ಮೊದಲೆ ಕಾರ್ಯಕ್ರಮದ ಆಯೋಜಕರು ನಿಗದಿಪಡಿಸಿಕೊಂಡು, ಸಂಬಂಧಪಟ್ಟ ಬೆಸ್ಕಾಂ ಉಪವಿಭಾಗದ ಅಧಿಕಾರಿಗಳಿಗೆ ನೀಡಬೇಕು'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News