ಪಡುಬಿದ್ರೆ: ಮಹಿಳೆ ಮೃತ್ಯು; ಪತಿಯ ವಿರುದ್ಧ ಪ್ರಕರಣ ದಾಖಲು

Update: 2022-09-07 18:33 GMT

ಪಡುಬಿದ್ರೆ : ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ಪತ್ನಿಯ ಹೆಸರಿನಲ್ಲಿ‌ ಬ್ಯಾಂಕ್‌ ನಿಂದ ಸಾಲ ಪಡೆದು ಬಳಿಕ ಕಿರುಕುಳ ನೀಡಿ ಆಕೆಗೆ ವಿಷ ನೀಡಿ ಪತಿಯೇ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದ್ದು, ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೈಯ್ಯಾರ್ ರಸ್ತೆ ನಿವಾಸಿ ವಿದ್ಯಾ (29) ಮೃತರು ಎಂದು ಗುರುತಿಸಲಾಗಿದೆ.

ಈಕೆ ಬಡಾ ಗ್ರಾಮದ ಮುಳ್ಳುಗುಡ್ಡೆಯ ಯತಿನ್ ರಾಜ್ ಎಂಬಾತನನ್ನು ಐದು ವರ್ಷಗಳ ಹಿಂದೆ ಮದುವೆಯಾಗಿ ಗಂಡನ ಮನೆಯಲ್ಲಿ ವಾಸವಿದ್ದರು.

ಪತಿ ಮನೆಯಲ್ಲಿ ಯತಿನ್ ರಾಜ್, ಮಾವ  ರಾಘು, ಅತ್ತೆ ಗೀತಾ ಮತ್ತು ಮೈದುನ ಯಕ್ಷಿತ್ ಎಂಬವರು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ.

ಯತಿನ್ ರಾಜ್  ವಿದ್ಯಾರಿಂದ  ಹಲವು ಬ್ಯಾಂಕ್, ಸೊಸೈಟಿ, ಸಂಘ, ಸಂಸ್ಥೆಗಳಿಂದ ಸಾಲ ತೆಗೆಸಿ ಅದನ್ನು ಖರ್ಚು ಮಾಡಿದ್ದು ಅಲ್ಲದೆ ವಿದ್ಯಾರ ತಂದೆ ಮದುವೆ ಸಂದರ್ಭದಲ್ಲಿ ನೀಡಿದ ಚಿನ್ನವನ್ನು ಮಾರಾಟ ಮಾಡಿ, ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ದೂರಲಾಗಿದೆ.

ಸೆ.1ರಂದು ರಾತ್ರಿ ವಿದ್ಯಾ ವಿಷ ಸೇವಿಸಿರುವುದಾಗಿ ಪಕ್ಕದ ಮನೆಯವರಿಗೆ ತಿಳಿಸಿದ್ದು, ನಂತರ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾ ಬುಧವಾರ ಮೃತಪಟ್ಟಿದ್ದಾರೆ.

ವಿದ್ಯಾ ಸಾವಿಗೆ ಆಕೆಯ ಗಂಡ, ಅತ್ತೆ, ಮಾವ, ಮೈದುನ ಕಾರಣ ಎಂದು ವಿದ್ಯಾರ ಪೋಷಕರು ದೂರು ನೀಡಿದ್ದು, ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News