ಎಫ್.ಕೆ.ಸಿ.ಸಿ.ಐ ಮಾರ್ಗದರ್ಶಕ ಸಂಸ್ಥೆಯಾಗಿ ರೂಪುಗೊಳ್ಳಬೇಕು: ಸಿಎಂ ಬೊಮ್ಮಾಯಿ
ಬೆಂಗಳೂರು: ಎಫ್.ಕೆ.ಸಿ.ಸಿ.ಐ ಮಾರ್ಗದರ್ಶಕ ಸಂಸ್ಥೆಯಾಗಿ ರೂಪುಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಉದ್ಘಾಟಿಸಿ ಸರ್.ಎಂ.ವಿ. ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕೋವಿಡ್ ನಂತರ ರಾಜ್ಯದಲ್ಲಿ ವ್ಯಾಪಾರ, ವ್ಯವಹಾರಗಳು ಸಾಮಾನ್ಯ ಸ್ಥಿತಿಗೆ ಮರಳಿದೆ. ಎಫ್.ಕೆ.ಸಿ.ಸಿ.ಐ ವ್ಯಾಪಾರದ ಸ್ನೇಹಿತ ಮತ್ತು ಮಾರ್ಗದರ್ಶಿ ಸಂಸ್ಥೆ. ವರ್ಷದಿಂದ ವರ್ಷಕ್ಕೆ ಸಂಸ್ಥೆಯು ಬೆಳೆಯುತ್ತಾ ಬಂದಿದೆ. ಜಿ.ಎಸ್.ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಎಫ್.ಕೆ.ಸಿ.ಸಿ.ಐ ಅಭಿವೃದ್ಧಿ ಯಾಗಬೇಕು. ಮನವಿಗಳನ್ನು ಕೊಡುವುದನ್ನು ನಿಲ್ಲಿಸಿ, ವರದಿಯನ್ನು ಹೊರತಂದು ಸಮಸ್ಯೆಗೆ ಪರಿಹಾರವನ್ನು ಒದಗಿಸಬೇಕು. ನಾಯಕತ್ವವನ್ನು ವಹಿಸಿಕೊಂಡು, ಮಾರ್ಗದರ್ಶನ ನೀಡುವ ಸ್ಥಾನದಲ್ಲಿರಬೇಕು. ನಾನು ನಿಮ್ಮಲ್ಲೇ ಒಬ್ಬನಾಗಿರುವುದಿಂದ ಈ ಸಲಹೆ ನೀಡುತ್ತಿದ್ದೇನೆ ಎಂದರು.
ನಿಮ್ಮ ಸಲಹೆಗಳಿಗೆ, ಬದಲಾವಣೆಗೆ ನಮ್ಮ ಬಾಗಿಲು ಸದಾ ತೆರೆದಿರುತ್ತದೆ. ಪರಿವರ್ತನೆಗೆ ನಾವು ಸದಾ ತೆರೆದುಕೊಳ್ಳಬೇಕು. ಪ್ರಗತಿಯ ಹಾದಿಯಲ್ಲಿ ನಾವು ಒಟ್ಟಿಗೆ ಸಾಗಬೇಕು. ಸುದೀರ್ಘ ಅನುಭವ ಹಾಗೂ ಯಶಸ್ವಿ ಉದ್ಯಮಗಳನ್ನು ಸಂಸ್ಥೆ ಹೊಂದಿದೆ ಎಂದು ತಿಳಿಸಿದರು.
ಬ್ರಿಗೇಡ್ ಗುಂಪಿನ ಜಯಶಂಕರ್ ಸಾಧಕರು. ಅವರು ಕಟ್ಟಡಗಳನ್ನು ಕಟ್ಟಿಲ್ಲ, ಮನೆಗಳನ್ನು ಕಟ್ಟಿದ್ದಾರೆ. ಬದಲಾವಣೆಗೆ ಅವರು ಹೊಂದಿಕೊಂಡಿರುವುದು ಅವರ ಕಟ್ಟಡಗಳಲ್ಲಿ ಕಾಣುತ್ತದೆ. ಬೆಂಗಳೂರನ್ನು ಕಷ್ಟಪಟ್ಟು ದುಡಿದವರು ಕಟ್ಟಿದ್ದಾರೆ. ಸಾವಿರಾರು ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿರುವ ಬ್ರಿಗೇಡ್ ಗುಂಪು ತನ್ನ ಬದ್ಧತೆಯಿಂದಾಗಿ ಅನೇಕ ಗ್ರಾಹಕರನ್ನು ಹೊಂದಿದೆ ಎಂದು ಅಭಿನಂದಿಸಿದರು.
ಸರ್ ವಿಶ್ವೇಶ್ವರಯ್ಯ ದೂರದೃಷ್ಟಿವುಳ್ಳ ದಾರ್ಶನಿಕರು, ಅವರು ಅಪರೂಪದ ವ್ಯಕ್ತಿ. ಕನ್ನಡ ನಾಡಿನ ಸೇವೆ ಮಾಡಿದ ಅವರು, ಶಕ್ತಿ ಕೇಂದ್ರದಲ್ಲಿದ್ದವರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಅಂಥವರ ಅಗತ್ಯ ಇಂದಿಗೂ ಇದೆ. ಆಡಳಿತವನ್ನು ಸಾರ್ವಜನಿಕ ಹಿತಾಸಕ್ತಿ ಹೊಂದಿ ಮುನ್ನಡೆಸುವಂಥವರು ಬೇಕಿದೆ. ಅವರು ನಮ್ಮೊಂದಿಗೆ ತಮ್ಮ ಸಾಧನೆ ಮತ್ತು ಕೆಲಸಗಳ ಮೂಲಕ ಜೀವಿಸುತ್ತಿದ್ದಾರೆ. ಭಾರತರತ್ನ ಪಡೆದ ಅತ್ಯಂತ ಯೋಗ್ಯ ವ್ಯಕ್ತಿಗಳಲ್ಲಿ ಅವರೊಬ್ಬರು ಎಂದರು.
ಕೋವಿಡ್ ನಂತರದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಲಸಿಕಾ ಕಾರ್ಯಕ್ರಮದಿಂದಾಗಿ ಆರೋಗ್ಯಕರ ಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ಪರಿಸ್ಥಿತಿ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬಿದೆ ಎಂದರು.