ಪಿ.ಎಫ್.ಐ ಸಂಘಟನೆ ವಿರುದ್ಧ ತನಿಖಾ ಸಂಸ್ಥೆ ದಾಳಿ : ಮುಸ್ಲಿಮ್ ಒಕ್ಕೂಟ ಖಂಡನೆ

Update: 2022-09-23 03:55 GMT
ಫೈಲ್‌ ಫೋಟೊ 

ಮಂಗಳೂರು: ರಾಷ್ಟ್ರ ಮಟ್ಟದ ಸಂಘಟನೆಗಳ ಕಚೇರಿಗಳ ಮೇಲೆ ದಾಳಿ ನಡೆಸಿ ಪದಾಧಿಕಾರಿಗಳನ್ನು ವಶಪಡಿಸಿದ, ಕೇಂದ್ರ ಸರಕಾರ ಪ್ರೇರಿತ ಎನ್.ಐ.ಎ ಕ್ರಮ ಖಂಡನೀಯ ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ತಿಳಿಸಿದ್ದಾರೆ.

ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂಘಟನೆಗಳ ಅಸ್ತಿತ್ವವನ್ನು ಇಲ್ಲದಾಗಿಸುವ ದಬ್ಬಾಳಿಕೆ ಕ್ರಮವಾಗಿದೆ. ರಾಜ್ಯ ಸರಕಾರದ ಅಧೀನದ ತನಿಖಾ ಸಂಸ್ಥೆಗಳು ತನಿಖೆ ಮಾಡಬೇಕಾದ ಪ್ರಕರಣಗಳನ್ನು ರಾಷ್ಟ್ರೀಯ ಮಟ್ಟದ ಸಂಸ್ಥೆಗೆ ವಹಿಸಿ ಕೊಟ್ಟು, ಪರೋಕ್ಷ ಲಾಭ ಪಡೆಯುವ ಉದ್ದೇಶವಾಗಿದೆ. ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ತನ್ನ ಮೂಗಿನ ನೇರಕ್ಕೆ ಬಳಸಿ ದ್ವೇಷ ಸಾಧಿಸುವ ಪ್ರಯತ್ನ ನಡೆಸುತ್ತಿದೆ. ಇದು ಪ್ರಜಾ ಪ್ರಭುತ್ವದ ಮಹಾ ಕಗ್ಗೊಲೆ ಆಗಿದೆ.

ತನಿಖಾ ಸಂಸ್ಥೆಗಳು ಪೂರಕವಾದ ಮತ್ತು ಸ್ಪಷ್ಟವಾದ ಪುರಾವೆಗಳನ್ನು ಪ್ರದರ್ಶಿಸದ ಹೊರತಾಗಿ ಇಂತಹ ಸಂಘಟನೆಗಳ ತನಿಖೆಗೆಗಳು ವಿಭಿನ್ನ ಸಂದೇಶ ರವಾನಿಸುತ್ತದೆ. ತನಿಖೆಗಳು ಪಕ್ಷಪಾತವಿಲ್ಲದ ಮತ್ತು ರಾಜಕೀಯ ಪ್ರೇರಣೆಯಿಂದ ಮುಕ್ತವಾಗಿರಬೇಕು. ದ್ವೇಷ, ಪ್ರಚೋದನೆ, ವಿದ್ವಂಸಕತೆ ಮತ್ತು ಹಿಂಸಾಚಾರದಲ್ಲಿ ಬಹಿರಂಗವಾಗಿ ತೊಡಗಿರುವ ಹಲವಾರು ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಕಾರಣ ತನಿಖಾ ಸಂಸ್ಥೆಗಳ ಈ ನಡೆ ಪ್ರಶ್ನಾರ್ಹವಾಗುತ್ತದೆ. ಆದ್ದರಿಂದ, ಈ ದಾಳಿಗಳು ಸಮಾಜಕ್ಕೆ ಅಹಿತಕರ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ.

ಜನರು, ಪ್ರತಿಪಕ್ಷಗಳು, ಅಲ್ಪಸಂಖ್ಯಾತರು ಅಥವಾ ಸಮಾಜದ ಯಾವುದೇ ಸಾಮಾಜಿಕ ವರ್ಗಕ್ಕೆ ಸೇರಿದವರಾಗಿದ್ದರೂ ಅನ್ಯಾಯದ ರೀತಿಯಲ್ಲಿ ಕಿರುಕುಳಕ್ಕೆ ಒಳಪಡಿಸುವ ಸರ್ವ ಕಾರ್ಯಾಚರಣೆ ದಾಳಿಗಳು ಮತ್ತು ಕ್ರಮಗಳನ್ನು ಒಕ್ಕೂಟ ಬಲವಾಗಿ ಖಂಡಿಸುತ್ತದೆ.

ಕೇಂದ್ರ ಸರಕಾರವನ್ನು ಆಳುವ ಬಿ.ಜೆ.ಪಿಗೆ ಅಭಿವೃದ್ಧಿ ಕಾರ್ಯಗಳು ಶೂನ್ಯವಾದ ಈ ಸಂದರ್ಭದಲ್ಲಿ ಸಂಘಟನೆಗಳನ್ನು ನಿಷೇಧ ಮಾಡುವ ಪ್ರಚಾರ ಪಡೆದು, ಭಿನ್ನ ಜನಾಂಗದ ಜನರನ್ನು ಭಾವನೆಗಳ ಮೂಲಕ ತೃಪ್ತಿ ಪಡಿಸುವ ಷಡ್ಯಂತ್ರದ ಭಾಗವಾಗಿ ಈ ದಾಳಿಗಳು ಬಳಕೆಯಾಗಿ, ಮುಂದಿನ ಅವಧಿಗೆ ಅಧಿಕಾರ ಪಡೆಯುವ ಪ್ರಯತ್ನ ನಡೆಸುತ್ತಿದೆ. ಇದು ಖಂಡನೀಯ ಎಂದು ಕೆ.ಅಶ್ರಫ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News