ದಸರಾದಲ್ಲಿ ರಾಷ್ಟ್ರಪತಿ ಜೊತೆ ಸಚಿವ ಸೋಮಶೇಖರ್ ವೇದಿಕೆ ಹಂಚಿಕೊಳ್ಳುವುದಕ್ಕೆ ವಿರೋಧ: ರಾಜ್ಯಪಾಲರಿಗೆ ಆಪ್ ಮನವಿ

Update: 2022-09-24 14:04 GMT

ಬೆಂಗಳೂರು, ಸೆ.24: ‘ಕೋನದಾಸಪುರದ ವಸತಿ ಯೋಜನೆಯಲ್ಲಿ ಅಕ್ರಮ ಎಸಗಿದ ಕಳಂಕ ಹೊತ್ತಿರುವ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮೈಸೂರಿನ ದಸರಾ ಉತ್ಸವದಲ್ಲಿ ರಾಷ್ಟ್ರಪತಿಯವರ ಜೊತೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಬಾರದು' ಎಂದು ಕೋರಿ ಆಮ್ ಆದ್ಮಿ ಪಾರ್ಟಿಯ ವಕ್ತಾರ ಕೆ.ಮಥಾಯಿ ನೇತೃತ್ವದ ನಿಯೋಗವು ಶನಿವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಮಥಾಯಿ, ‘ಮೈಸೂರಿನ ದಸರಾ ಉತ್ಸವಕ್ಕೆ ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಬಹಳ ಮಹತ್ವವಿದೆ. ನಾಡಿಗೆ ಅಪಾರ ಕೊಡುಗೆ ನೀಡಿ ರಾಜರು, ನಾಯಕರು ಹಾಗೂ ಗಣ್ಯ ವ್ಯಕ್ತಿಗಳು ದಸರಾದಲ್ಲಿ ಭಾಗವಹಿಸಿದ್ದಾರೆ. ಈ ವರ್ಷ ರಾಷ್ಟ್ರಪತಿ ಸೇರಿ ಅನೇಕ ಗಣ್ಯರು ದಸರಾ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಕೋನದಾಸಪುರದಲ್ಲಿ ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣ ಅಕ್ರಮಕ್ಕೆ ಸಂಬಂಧಿಸಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧಎಫ್‍ಐಆರ್ ದಾಖಲಾಗಿದ್ದು, ಅವರು ದಸರಾ ಉತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳಂಕ ತರಬಾರದು' ಎಂದು ಕೋರಿದರು.

 ಸಚಿವ ಸೋಮಶೇಖರ್ 

‘ಕಳಂಕಿತ ಸಚಿವ ಎಸ್.ಟಿ.ಸೋಮಶೇಖರ್ ದಸರಾ ಉತ್ಸವದಲ್ಲಿ ರಾಷ್ಟ್ರಪತಿ ಜೊತೆ ವೇದಿಕೆ ಹಂಚಿಕೊಳ್ಳುವುದನ್ನು ತಡೆಹಿಡಿಯಬೇಕೆಂದು ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ನಾಡಹಬ್ಬದ ಘನತೆ ಉಳಿಸಲು ಅವರು ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ಭ್ರಷ್ಟ ಸಚಿವರು ಸರಕಾರದ ಉನ್ನತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ರಾಜ್ಯಪಾಲರು ಅವಕಾಶ ನೀಡದಿದ್ದರೆ, ಎಲ್ಲ ಭ್ರಷ್ಟ ಜನಪ್ರತಿನಿಧಿಗಳಿಗೂ ಇದೊಂದು ಎಚ್ಚರಿಕೆಯ ಗಂಟೆಯಾಗುತ್ತದೆ' ಎಂದು ಕೆ.ಮಥಾಯಿ ಹೇಳಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಎಎಪಿ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಮಾತನಾಡಿ, ‘ಕೋನದಾಸಪುರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 567 ಕೋಟಿ ರೂ.ವೆಚ್ಚದಲ್ಲಿ ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಕಚೇರಿಯಲ್ಲಿ ಸಾಕ್ಷಿ ಸಹಿತ ದೂರು ದಾಖಲಾಗಿದೆ. 29.5 ಕೋಟಿ ರೂ.ಲಂಚ ಪಡೆದಿರುವ ಆರೋಪದಲ್ಲಿ ಎಸ್.ಟಿ.ಸೋಮಶೇಖರ್, ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಸೇರಿದಂತೆ ಒಟ್ಟು ಒಂಬತ್ತು ಮಂದಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇಂತಹ ಗಂಭೀರ ಆರೋಪ ಹೊತ್ತಿರುವ ಸೋಮಶೇಖರ್ ಸಚಿವ ಸ್ಥಾನದಲ್ಲಿ ಮುಂದುವರಿದಿರುವುದೇ ತಪ್ಪು. ಅದರಲ್ಲೂ ಅವರು ರಾಷ್ಟ್ರಪತಿಯವರ ಜೊತೆ ವೇದಿಕೆ ಹಂಚುಕೊಳ್ಳುವುದು ಇನ್ನೂ ದೊಡ್ಡ ತಪ್ಪು ಎಂದು ಹೇಳಿದರು. ನಿಯೋಗದಲ್ಲಿ ಮುಖಂಡರಾದ ಚನ್ನಪ್ಪಗೌಡ ನೆಲ್ಲೂರು, ವಿಶ್ವನಾಥ್, ವೇಣುಗೋಪಾಲ್, ಮಹೇಶ್ ಬಾಬು ಸೇರಿದಂತೆ ಇನ್ನಿತರರು ಹಾಜರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News