ಹೃದಯಾಘಾತ: ಮಂಗಳೂರು ವಿಮಾನ ನಿಲ್ದಾಣದಲ್ಲಿ ವ್ಯಕ್ತಿ ಮೃತ್ಯು
ಸುರತ್ಕಲ್, ಅ.3: ದುಬೈನಿಂದ ಹಿಂದಿರುಗುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ನಡೆದಿದೆ.
ಮೃತಪಟ್ಟವರನ್ನು ಮುಕ್ಕ ನಿವಾಸಿ ಮುಹಮ್ಮದ್ (65) ಎಂದು ತಿಳಿದಿ ಬಂದಿದೆ.
ಮುಹಮ್ಮದ್ ಅವರ ಪತ್ನಿ ದುಬೈನಲ್ಲಿರುವ ಮಗಳ ಬಳಿ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಲು ಗುರುವಾರ ದುಬೈಗೆ ತೆರಳಿ ರವಿವಾರ ಹಿಂದಿರುಗುತ್ತಿದ್ದರು ಎಂದು ತಿಳಿದು ಬಂದಿದೆ.
ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರು ಎಮಿಗ್ರೇಶನ್ ವಿಭಾಗದಲ್ಲಿ ನಿರ್ಗಮನದ ಮೊಹರು ಹಾಕಲು ಅಧಿಕಾರಿಗಳಿಗೆ ಪಾಸ್ ಪೋರ್ಟ್ ನೀಡಿ ನಿಂತಿದ್ದ ವೇಳೆ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣ ವಿಮಾನ ನಿಲ್ದಾಣದ ಆ್ಯಂಬುಲೆನ್ಸ್ ಮೂಲಕ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮುಹಮ್ಮದ್ ಅವರು ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದರು ಎಂದು ಅವರ ಸಹೋದರಿಯ ಪತಿ ಶರೀಫ್ ಅವರು ಮಾಹಿತಿ ನೀಡಿದ್ದಾರೆ.