ರಾಹುಲ್ ಗಾಂಧಿ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-10-06 06:46 GMT

ಬೆಂಗಳೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಾಯಗೊಂಡಿರುವ ಆನೆ ಮರಿಗೆ ತುರ್ತು ವೈದ್ಯಕೀಯ ಆರೈಕೆ ಒದಗಿಸುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದರು.

ಈ ಕುರಿತು ಗುರುವಾರ ಪ್ರತಿಕ್ರಿಯಿಸಿರುವ  ಸಿಎಂ ಬೊಮ್ಮಾಯಿ, 'ನಾಗರಹೊಳೆ ಅಭಯಾರಣ್ಯದಲ್ಲಿ ಗಾಯಗೊಂಡಿರುವ ಆನೆ ಮರಿಯ ಕುರಿತು ರಾಹುಲ್ ಗಾಂಧಿ  ನನಗೆ ಪತ್ರ ಬರೆದು ತಿಳಿಸಿದ್ದಾರೆ. ಗಾಯಗೊಂಡ ಆನೆ ಮರಿಯ ಬಗ್ಗೆ ಜಿಲ್ಲಾ ಅಧಿಕಾರಿಯೊಂದಿಗೆ ಮಾತನಾಡಿದ್ದೇನೆ, ನಾವು ಎಲ್ಲಾ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತೇವೆ' ಎಂದು ತಿಳಿಸಿದರು.

ಇದನ್ನೂ ಓದಿ: ಗಾಯಗೊಂಡಿರುವ ಆನೆ ಮರಿಗೆ ವೈದ್ಯಕೀಯ ಆರೈಕೆ ಒದಗಿಸುವಂತೆ ಸಿಎಂ ಬೊಮ್ಮಾಯಿಗೆ ರಾಹುಲ್ ಮನವಿ

► ರಾಹುಲ್ ಗಾಂಧಿ ಅವರ ಪತ್ರ:  ನಾನು ಮತ್ತು ಕಾಂಗ್ರೆಸ್ ಅಧ್ಯಕ್ಷರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ವಲ್ಪ ಸಮಯ ಭೇಟಿ ನೀಡಿದ್ದೆವು, ಅಲ್ಲಿ ಗಾಯಗೊಂಡ ಆನೆಯೊಂದು ತನ್ನ ತಾಯಿಯೊಂದಿಗಿರುವ ನೋವಿನ ದೃಶ್ಯವನ್ನು ನೋಡಿದೆವು. ಪುಟ್ಟ ಆನೆ ಮರಿಗೆ ಬಾಲ ಹಾಗೂ ಸೊಂಡಿಲು ಬಳಿ ತೀವ್ರವಾಗಿ ಗಾಯವಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದೆ. ಪ್ರಕೃತಿಯು ತನ್ನದೇ ಆದ ಹಾದಿಯನ್ನು ತೆಗೆದುಕೊಳ್ಳಲು ಅನುಮತಿಸಬೇಕು ಎಂಬ ದೃಷ್ಟಿಕೋನವಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೂ, ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿ ಕೆಲವು ವಿನಾಯಿತಿಗಳನ್ನು ನೀಡಬೇಕಾಗುತ್ತದೆ. ಈ ಮರಿ ಆನೆಗೆ ನಿಸ್ಸಂದೇಹವಾಗಿ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ.

ಆದುದರಿಂದ, ನಾನು ರಾಜಕೀಯ ಗಡಿಗಳನ್ನು ದಾಟಿ, ಈ ಪುಟ್ಟ ಆನೆಯನ್ನು ಉಳಿಸಲು ನಿಮ್ಮ ಸಹಾನುಭೂತಿಯನ್ನು ಯಾಚಿಸುತ್ತಿದ್ದೇನೆ. ಈ ಮರಿ ಆನೆಗೆ ಸೂಕ್ತ ಚಿಕಿತ್ಸೆ ನೀಡಿದರೆ ಅದು ಬದುಕುಳಿಯುವ ವಿಶ್ವಾಸವಿದೆ. ಈ ಪುಟ್ಟ ಆನೆಯನ್ನು ಉಳಿಸಲು ನೀವು ಸಮಯೋಚಿತ ಸಹಾಯವನ್ನು ನೀಡುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ರಾಹುಲ್ ಗಾಂಧಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News