ಮೊದಲ ಬಾರಿಗೆ ಮಣಿಪಾಲ ಕೆಎಂಸಿಯಲ್ಲಿ ಅನ್ನನಾಳದ ರಂಧ್ರಕ್ಕೆ ಅಪರೂಪದ ಎಂಡೋಸ್ಕೋಪಿ ಸ್ಪಾಂಜ್ ಚಿಕಿತ್ಸೆ

Update: 2022-10-06 14:20 GMT

ಉಡುಪಿ, ಅ.6: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗವು ಮೊದಲ ಬಾರಿಗೆ ಅನ್ನನಾಳದ ರಂದ್ರಕ್ಕೆ  ಮತ್ತು ಅನಾಸ್ಟೊಮೊಟಿಕ್ ಸೋರಿಕೆ ಪ್ರಕ್ರಿಯೆಗೆ ಅಪರೂಪದ ಎಂಡೋಸ್ಕೋಪಿ ಸ್ಪಾಂಜ್ (ಎಂಡೋವಾಕ್) ಚಿಕಿತ್ಸೆಯನ್ನು ನಡೆಸಿ ಯಶಸ್ವಿಯಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಇದು ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆದ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ ಎಂದವರು ತಿಳಿಸಿದ್ದಾರೆ. ಅನಾಸ್ಟೊಮೊಸಿಸ್ ಶಸ್ತ್ರಚಿಕಿತ್ಸೆ ವಿಫಲವಾದಾಗ ಮತ್ತು ಶಸ್ತ್ರಚಿಕಿತ್ಸಾ ಸಂಪರ್ಕದಿಂದ ಮರುಸಂಪರ್ಕಿತ ದೇಹದ ಚಾನಲ್‌ನ ವಿಷಯಗಳು ಸೋರಿಕೆಯಾದಾಗ ಅನಾಸ್ಟೊಮೊಟಿಕ್ ಸೋರಿಕೆ ಸಂಭವಿಸುತ್ತದೆ. ಇದು ಕರುಳಿನ ಛೇದನದ ಶಸ್ತ್ರಚಿಕಿತ್ಸೆಯ ಅತ್ಯಂತ ಗಂಭೀರ ತೊಡಕುಗಳಲ್ಲಿ ಒಂದಾಗಿದೆ.

51 ವರ್ಷ ಪ್ರಾಯದ ವ್ಯಕ್ತಿಗೆ ಅನ್ನನಾಳದ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಶಸ್ತ್ರಚಿಕಿತ್ಸೆ ನಡೆಸಿ ನಂತರ ಕೀಮೋಥೆರಪಿ ಚಿಕಿತ್ಸೆ ನೀಡಲಾಯಿತು. ಒಂದು ವಾರದ ನಂತರ ಅವರಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿ ಕೊಂಡವು. ಇದನ್ನು ಸರಿಪಡಿಸಲು ವೈದ್ಯರು ಮತ್ತೊಂದು ಶಸ್ತ್ರಚಿಕಿತ್ಸೆಯ ಅವಶ್ಯಕತೆಯ ಬಗ್ಗೆ ಆಲೋಚಿಸಿದ್ದರು. ಆದರೆ ರೋಗಿಯ  ಸಾಮಾನ್ಯ ಸ್ಥಿತಿ ಇದಕ್ಕೆ ಪೂರಕವಾಗಿರಲಿಲ್ಲ. 

ಹೀಗಾಗಿ ಆಸ್ಪತ್ರೆಯ  ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ ಶಿರನ್ ಶೆಟ್ಟಿ ಮತ್ತು ಡಾ ಬಾಲಾಜಿ, ಸರ್ಜಿಕಲ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ  ಡಾ ನವೀನ ಕುಮಾರ್,  ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜೋಸೆಫ್ ಥಾಮಸ್ ಇರುವ ತಜ್ಞ ವೈದ್ಯರ ತಂಡವು ರೋಗಿಗೆ ಎಂಡೋಸ್ಪಾಂಜ್/ವ್ಯಾಕ್ಯೂಮ್ ಥೆರಪಿ ಎಂಬ ನವೀನ ಚಿಕಿತ್ಸೆ ನಡೆಸಲು ನಿರ್ಧರಿಸಿದರು. 

ಇಲ್ಲಿ ಎಂಡೋಸ್ಕೋಪಿಯ ಮೂಲಕ ಸ್ಪಾಂಜ್‌ನ್ನು ಮೆಡಿಯಾಸ್ಟಿನಮ್ ಕುಳಿಯಲ್ಲಿ ಇರಿಸಲಾಯಿತು. ಇದು ಸ್ವಾಭಾವಿಕವಾಗಿ ಯಾವುದೇ ಶಸ್ತ್ರಚಿಕಿತ್ಸೆ ಯಿಲ್ಲದೆ ದೋಷವನ್ನು ಮುಚ್ಚಲು ಸಹಾಯ ಮಾಡಿತು. ಇದರಿಂದ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ರೋಗಿ ಗುಣಮುಖನಾಗುವಂತಾಯಿತು ಎಂದು ಹೇಳಿಕೆ ತಿಳಿಸಿದೆ.

ಮೂರು ವಾರಗಳ ನಂತರ ರೋಗಿಯು ನೇರವಾಗಿ ಬಾಯಿಯ ಮೂಲಕ ಆಹಾರ ತೆಗೆದುಕೊಳ್ಳಲು ಸಾಧ್ಯವಾ ಯಿತು. ಇದು ದಕ್ಷಿಣ ಭಾರತದ ಈ ಭಾಗದಲ್ಲಿ ರೋಗಿಗೆ ಇಂಥ ಚಿಕಿತ್ಸೆಗೆ ನೀಡಿದ ಮೊದಲ ವಿನೂತನ ವಿಧಾನ ವಾಗಿದೆ ಮತ್ತು ಇದು ಕಡಿಮೆ ವೆಚ್ಚದ ಮತ್ತು ಸುರಕ್ಷಿತ ವಿಧಾನವಾಗಿದೆ  ಎಂದು ಡಾ.ಶಿರನ್ ಶೆಟ್ಟಿ ತಿಳಿಸಿದ್ದಾರೆ.

ಅಪರೂಪದ ಚಿಕಿತ್ಸಾ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ  ತಂಡವನ್ನು ಡಾ.ಅವಿನಾಶ ಶೆಟ್ಟಿ ಅಭಿನಂದಿಸಿ ದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಈ ರೀತಿಯ ಸಂಕೀರ್ಣ ಶಸ್ತ್ರಚಿಕಿತ್ಸೆಯು ತಜ್ಞ ವೈದ್ಯರ ತಂಡದಿಂದ ಸಾಧ್ಯ ವಾಗುತ್ತಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News