ದೇರಳಕಟ್ಟೆ: ನಿಟ್ಟೆ ವಿವಿಯಲ್ಲಿ ಕನ್ನಡ ರಾಜ್ಯೋತ್ಸವ
ಕೊಣಾಜೆ: ಕನ್ನಡ ಭಾಷೆಯು ಪ್ರಾಂತ್ಯಕ್ಕೆ ಅನುಸಾರವಾಗಿ ವೈವಿಧ್ಯತೆಯನ್ನು ಹೊಂದಿರುವ ಭಾಷೆಯಾಗಿದೆ. ಕನ್ನಡ ನಾಡು ನುಡಿಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಾಹಿತಿ, ರಂಗನಟ ಕದ್ರಿ ನವನೀತ್ ಶೆಟ್ಟಿ ಅವರು ಹೇಳಿದರು.
ಅವರು ಮಂಗಳವಾರ ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾಲಯ (ಪರಿಗಣಿತ) ದ ಗ್ಲಾಸ್ ಹೌಸ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಎಲ್ಲಾ ಭಾಷಿಗರಿದ್ದರೂ ಕನ್ನಡ ಭಾಷೆಗೆ ಹೆಚ್ಚಿನ ಮಹತ್ವದೆ ಇದೆ. ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಭಾಷೆಯ ಜೊತೆಗೆ ನಮ್ಮ ಕರುನಾಡು, ತುಳುನಾಡಿನ ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ಆಗಬೇಕಿದೆ. ಕನ್ನಡದ ಅಸ್ಮಿತೆ, ಭಾರತೀಯತೆ, ನಮ್ಮ ಮಾತೃಭಾಷೆಯ ಸಂರಕ್ಷಣೆಯೊಂದಿಗೆ ಮುನ್ನಡೆಯೋಣ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಕುಲಪತಿಗಳಾದ ಪ್ರೊ.ಸತೀಶ್ ಕುಮಾರ್ ಭಂಡಾರಿ ಅವರು ವಹಿಸಿ ಮಾತನಾಡಿ, ನಿಟ್ಟೆ ವಿವಿಯು ಕನ್ನಡದ ಅಭಿವೃದ್ಧಿಗಾಗಿ ಅನೇಕ ಕನ್ನಡ ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೆ ತಂದಿದೆ. ಕನ್ನಡ ಕಲಿಯುವ ಕಾರ್ಯಕ್ರಮದ ಜೊತೆಗೆ , ಕನ್ನಡದ ಸರ್ಟಿಫಿಕೆಟ್ ಕೋರ್ಸ್ ಆರಂಭಿಸಲಾಗಿದೆ, ಅನುವಾದದ ಕೆಲಸಗಳು ನಡೆಯುತ್ತಿದೆ ಎಂದ ಅವರು, ಕನ್ನಡದ ಬಗ್ಗೆ ಕೀಳರಿಮೆಯನ್ನು ದೂರಗೊಳಿಸಿ ಗೌರವಿಸುವ ಕಾರ್ಯ ಆಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ನಿಟ್ಟೆ ವಿವಿಯ ಪ್ರೊ.ಕೃಷ್ಣ ನಾಯಕ್, ವೈದ್ಯಕೀಯ ಅಧೀಕ್ಷರಾದ ಡಾ. ಸುಮಲತಾ ಶೆಟ್ಟಿ, ಡೆಂಟಲ್ ಕಾಲೇಜು ಡೀನ್ ಡಾ.ಮಿತ್ರಾ ಹೆಗ್ಡೆ, ಡಾ. ಶ್ರೀಪಾದ ಮೆಹಂದಲೇ, ಪ್ರೊ.ಆನಂದ ಬಂಗೇರ, ಕನ್ನಡ ವಿಭಾಗದ ಡಾ.ಸಾಯಿಗೀತ, ಪ್ರೊ.ಪ್ರವೀಣ್ ಶೆಟ್ಟಿ, ರಾಜೇಶ್, ಡಾ.ಸತೀಶ್ ರಾವ್, ಅನಿಲ್, ಹೇಮಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕುಲಸಚಿವರಾದ ಡಾ. ಹರ್ಷ ಹಾಲಹಳ್ಳಿ ಸ್ಬಾಗತಿಸಿದರು. ಡಾ.ಶಶಿಕುಮಾರ್ ಶೆಟ್ಟಿ ವಂದಿಸಿದರು. ಕೆ.ಕೆ. ಯಶೋಧ ಕಾರ್ಯಕ್ರಮ ನಿರೂಪಿಸಿದರು.