ಉಪ್ಪಿನಂಗಡಿ: ಬೈಕ್‍ಗಳ ಮುಖಾಮುಖಿ ಢಿಕ್ಕಿ; ಸವಾರರಿಗೆ ಗಾಯ

Update: 2022-11-11 15:42 GMT

ಉಪ್ಪಿನಂಗಡಿ: ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕೊಂದು ಇನ್ನೊಂದು ಬೈಕ್‍ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡು ಪುತ್ತೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ಕಡವಿನಬಾಗಿಲು ಎಂಬಲ್ಲಿ ನ.11ರಂದು ಬೆಳಗ್ಗೆ ನಡೆದಿದೆ.

ಈ ಬಗ್ಗೆ ಗಾಯಗೊಂಡ ಬೈಕ್ ಸವಾರ ಇಳಂತಿಲ ಗ್ರಾಮದ ಜೋಗಿಬೆಟ್ಟು ನಿವಾಸಿ ದಾವೂದ್ ಎಂಬವರು ಪುತ್ತೂರು ಸಂಚಾರಿ ಠಾಣೆಗೆ ದೂರು ನೀಡಿದ್ದು, ತಾನು ಬೆಳಗ್ಗೆ ಜೋಗಿಬೆಟ್ಟು ಕಡೆಯಿಂದ ಉಪ್ಪಿನಂಗಡಿ ಕಡೆಗೆ ತನ್ನ ಬೈಕನ್ನು ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭ ಉಪ್ಪಿನಂಗಡಿಯಿಂದ ಗುರುವಾಯನಕೆರೆ ಕಡೆಗೆ ಪವನ್ ಕುಮಾರ್ ಎಂಬವರು ಅಜಾಗರುಕತೆ ಹಾಗೂ ನಿರ್ಲಕ್ಷ್ಯದಿಂದ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬೈಕನ್ನು ಚಲಾಯಿಸಿಕೊಂಡು ಬಂದು ತನ್ನ ಬೈಕ್‍ಗೆ ಢಿಕ್ಕಿ ಹೊಡೆದಿದ್ದಾರೆ. ಅಪಘಾತದಿಂದಾಗಿ ರಸ್ತೆಗೆಸೆಯಲ್ಪಟ್ಟ ನನಗೆ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

ದಾವೂದ್ ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ಪವನ್ ಕುಮಾರ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

Similar News