ಜನರಲ್ಲಿ ಹೊಸ ಚಿಂತನೆಗಳ ಮೂಲಕ ಪಡುಬಿದ್ರಿ ಸೊಸೈಟಿ ಮಾದರಿ: ಡಾ.ರಾಜೇಂದ್ರ ಕುಮಾರ್

ಪಡುಬಿದ್ರೆ ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ ಸಹಕಾರ ಸಪ್ತಾಹಕ್ಕೆ ಚಾಲನೆ

Update: 2022-11-14 17:18 GMT

ಪಡುಬಿದ್ರೆ: ಜನರಲ್ಲಿ ಉತ್ಸಾಹ ತುಂಬಲು ದೃಷ್ಟಿಕೋನದಿಂದ ಹೊಸ ಹೊಸ ಚಿಂತನೆಗಳ ಮೂಲಕ ಇತರ ಸೊಸೈಟಿಗಿಂತ ಪಡುಬಿದ್ರಿ ಸೊಸೈಟಿಯು ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅಧ್ಯಕ್ಷ ಡಾ. ಎಮ್. ಎನ್. ರಾಜೇಂದ್ರ ಕುಮಾರ್ ಶ್ಲಾಘಿಸಿದರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಆಶ್ರಯದಲ್ಲಿ ಸಹಕಾರ ಸಂಗಮ ವೈ.ಲಕ್ಷ್ಮಣ್ ಸಭಾಂಗಣದಲ್ಲಿ ಸೋಮವಾರ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಸದಾ ಸಕಾರಾತ್ಮಕ ಬದಲಾವಣೆಯೊಂದಿಗೆ ಶಿಸ್ತುಬದ್ಧವಾಗಿ ಜನಪರವಾಗಿ ಕಾರ್ಯನಿರ್ವಹಿಸುವ ಪಡುಬಿದ್ರಿ ಸೊಸೈಟಿಯು ಆದಷ್ಟು ಶೀಘ್ರ 150 ಕೋಟಿ ಠೇವಣಾತಿ ಸಂಗ್ರಹಿಸುವ ಮೂಲಕ ಮತ್ತೊಂದು ಪ್ರಶಸ್ತಿಗೆ ಭಾಜನವಾಗಲಿ ಎಂದು ಶುಭಹಾರೈಸಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ರೈತರಿಗೆ ಪ್ರಾಶಸ್ತ್ಯ ನೀಡಿ, ಸಹಕಾರ ಸಪ್ತಾಹವನ್ನು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಸೊಸೈಟಿ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರ ಪರಿಷತ್‍ಗೆ ಪ್ರಾತನಿದ್ಯ ನೀಡಬೇಕು ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಒತ್ತಾಯಿಸಿದರು.

ಸಪ್ತಾಹ ಅಂಗವಾಗಿ ರೈತರ ಸಮಾವೇಶ ಹಾಗೂ ರೈತರಿಂದ ಡಾ.ಎಮ್. ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಐ. ದೇವಿಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಿರೀಶ್ ಪಲಿಮಾರ್, ಎ. ರಾಮಚಂದ್ರ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.

ಸಹಾಯ ಧನ ವಿತರಣೆ: ಸೊಸೈಟಿ ವ್ಯಾಪ್ತಿಯ ರೈತರಿಗೆ ಕೃಷಿ ಸಹಾಯಧನ, ಪಡುಬಿದ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢ ವಿಭಾಗ, ಪಲಿಮಾರು ಶಾಲೆಗೆ, ವೈಟ್‍ಲಿಪ್ಟರ್ ಯಶಸ್ವಿನಿ ವಿ ಭಂಡಾರಿಗೆ ಸಹಾಯಧನ, ಅವರಾಲು ಅಂಗನವಾಡಿಗೆ 25 ಕುರ್ಚಿಕ್ಕೆ ವಿತರಣೆ ಹಾಗೂ ಶೀತಲೀಕರಣ ಶವ ಪೆಟ್ಟಿಗೆ ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರಿಸಲಾಯಿತು. ಉಡುಪಿ ಜಿಲ್ಲಾ ಕೃಷಿಕ ಸಂಘ ಅಧ್ಯಕ್ಷ  ರಾಮಕೃಷ್ಣ ಬಂಟಕಲ್ ದಿಕ್ಸೂಚಿ ಭಾಷಣ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ವೈ ಸುಧೀರ್ ಕುಮಾರ್, 69" ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ರಾಷ್ಟ್ರದಾದ್ಯಂತ ನವೆಂಬರ್ 14 ರಿಂದ 20 ರವರೆಗೆ ಸಪ್ತಾಹದ 7 ದಿನಗಳಲ್ಲೂ ವಿವಿಧ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ. ಇದು  ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ನಡೆಯುತಿದ್ದು, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯು ಮೂಲಕ ಸಹಕಾರ ಸಪ್ತಾಹವನ್ನು ವಿಶಿಷ್ಟ ರೀತಿಯಲ್ಲಿ ನಡೆಯಲಿದೆ.

ಎಸ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀ ನಾರಾಯಣ ಜಿ. ಎನ್. ಕುಂದಾಪುರ ಉಪವಿಭಾಗ ಸಹಾಯಕ ಉಪನಿಬಂಧಕಿ ಲಾವಣ್ಯ ಕೆ. ಆರ್., ಉಪಸ್ಥಿತರಿದ್ದರು. ಸುಧೀರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜೇಶ್  ನಿರೂಪಿಸಿದರು. ಸೊಸೈಟಿ ಉಪಾಧ್ಯಕ್ಷ ಗುರುರಾಜ ಪೂಜಾರಿ ವಂದಿಸಿದರು. 

Similar News