ಜಗತ್ತನ್ನು ಉಳಿಸಲು ಸಂಪತ್ತಿನ ಮರುಹಂಚಿಕೆ ತುರ್ತಾಗಿ ಆಗಬೇಕು

Update: 2022-11-22 04:52 GMT

ಥಾಮಸ್ ಪಿಕೆಟ್ಟಿ ಅಸಮಾನತೆಯನ್ನು ಅರ್ಥಶಾಸ್ತ್ರದ ಅಧ್ಯಯನದ ಮುನ್ನೆಲೆಗೆ ತಂದ ಅರ್ಥಶಾಸ್ತ್ರಜ್ಞ. ಅವರ ಪುಸ್ತಕಗಳು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಅದನ್ನು ಕುರಿತಂತೆ ಜಗತ್ತಿನಾದ್ಯಂತ ಅವರು ನಿರಂತರವಾಗಿ ಸಂಗ್ರಹಿಸುತ್ತಿರುವ ಅಂಕಿ ಅಂಶಗಳು ಮುಂದಿನ ಸಂಶೋಧನೆಗೆ ದೊಡ್ಡ ಆಕರ. ಅಸಮಾನತೆ ಇಂದಿನ ದೊಡ್ಡ ಪಿಡುಗು, ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬಲವಾಗಿ ವಾದಿಸುತ್ತಿದ್ದಾರೆ. ಅವರ ಬ್ಲಾಗ್‌ನಲ್ಲಿ ಇತ್ತೀಚೆಗೆ ಬರೆದ ಲೇಖನದಲ್ಲಿ, ಅಸಮಾನತೆಯ ಅಂತರವನ್ನು ಕಡಿಮೆ ಮಾಡದೆ ಹೋದರೆ ಪರಿಸರ ರಕ್ಷಣೆಯ ಕ್ರಮಗಳೂ ಬಡವರಿಗೆ ಅಪಾಯಕಾರಿಯಾಗಬಹುದು ಎಂದು ವಾದಿಸುತ್ತಾರೆ.


  

ನೇರವಾಗಿ ಹೇಳೋಣ: ಸಂಪತ್ತಿನ ಸರಿಯಾದ ಮರುಹಂಚಿಕೆ ಆಗದೆ ಜಾಗತಿಕ ತಾಪಮಾನದ ವಿರುದ್ಧ ಗಂಭೀರವಾದ ಹೋರಾಟ ಸಾಧ್ಯವಿಲ್ಲ. ಮರುಹಂಚಿಕೆ ಅನ್ನುವುದು ದೇಶದೊಳಗೆ ಆಗಬೇಕು ಹಾಗೂ ಅಂತರರಾಷ್ಟ್ರೀಯವಾಗಿಯೂ ಆಗಬೇಕು. ಇಲ್ಲ ಅನ್ನುವವರು ಸುಳ್ಳು ಹೇಳುತ್ತಿದ್ದಾರೆ. ಹಾಗೆಯೇ ಸಂಪತ್ತಿನ ಮರುಹಂಚಿಕೆ ಅವಶ್ಯಕ, ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅದು ತಾಂತ್ರಿಕ ಹಾಗೂ ರಾಜಕೀಯ ಕಾರಣದಿಂದಾಗಿ ಸಾಧ್ಯವಾಗೋದಿಲ್ಲ ಎಂದು ಹೇಳುತ್ತಾ ಇರುವವರು ಸುಳ್ಳು ಹೇಳುತ್ತಾ ಇದ್ದಾರೆ ಅಷ್ಟೆ. ಬ್ರೆಝಿಲಿನಲ್ಲಿ ಇತ್ತೀಚೆಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಲುಲ ಕೃಷಿಉದ್ದಿಮೆಗಳ ಮೇಲೆ ಸಾಧಿಸಿದ ಗೆಲುವು ಖಂಡಿತ ಒಂದಿಷ್ಟು ಭರವಸೆಯನ್ನು ಮೂಡಿಸುತ್ತದೆ. ಆದರೆ ಬಹುತೇಕ ಮತದಾರರಿಗೆ ಸಾಮಾಜಿಕ-ಪರಿಸರ ಕಾಳಜಿ ಹೊಂದಿರುವ ಎಡಪಂಥೀಯರ ಬಗ್ಗೆ ಅಂತಹ ವಿಶ್ವಾಸವಿಲ್ಲ ಅನ್ನುವುದು ವಾಸ್ತವ. ಅವರು ರಾಷ್ಟ್ರೀಯವಾದಿ, ವಲಸೆ ವಿರೋಧಿ ಬಲಪಂಥೀಯರನ್ನು ನಂಬುತ್ತಾರೆ. ಸ್ವೀಡನ್ ಹಾಗೂ ಇಟಲಿಯ ಚುನಾವಣೆ ಅದನ್ನು ತೋರಿಸಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಯಾಗಬೇಕು. ಹಾಗೆಯೇ ಸಂಪತ್ತಿನ ವಿತರಣೆಯೂ ಪರಿಣಾಮಕಾರಿಯಾಗಿ ಆಗಬೇಕು. ಇಲ್ಲದೇ ಹೋದರೆ ಸಾಮಾಜಿಕ-ಪರಿಸರಾತ್ಮಕ ಕಾರ್ಯಕ್ರಮಗಳಿಂದ ಮಧ್ಯಮ ವರ್ಗದವರಿಗೆ ಹಾಗೂ ಕಾರ್ಮಿಕರಿಗೆ ತೊಂದರೆಯಾಗುವ ಅಪಾಯ ಹೆಚ್ಚು. ಆದರೆ ಒಳ್ಳೆಯ ಸುದ್ದಿಯೆಂದರೆ ಕೆಲವೇ ಕೆಲವು ಅತಿ ಶ್ರೀಮಂತರ ಬಳಿ ಎಷ್ಟೊಂದು ಸಂಪತ್ತು ಸೇರಿಕೊಂಡಿದೆಯೆಂದರೆ ಹವಾಮಾನ ವೈಪರೀತ್ಯವನ್ನು ಸರಿಪಡಿಸುತ್ತಲೇ ಬಹುಸಂಖ್ಯಾತ ಸಾಮಾನ್ಯರ ಜೀವನ ಸ್ಥಿತಿಯನ್ನು ಸುಧಾರಿಸುವುದಕ್ಕೆ ಅವಕಾಶವಿದೆ.

ಸಂಪತ್ತನ್ನು ಸರಿಯಾಗಿ ಮರುಹಂಚಿಕೆ ಮಾಡುವುದಕ್ಕೆ ಬೇಕಾದ ಸರಿಯಾದ ಮಾರ್ಗವನ್ನು ಕಂಡುಕೊಳ್ಳಬೇಕು ಅಷ್ಟೆ. ಅದಕ್ಕೆ ಪ್ರತಿಯೊಬ್ಬರೂ ತಮ್ಮ ಜೀವನಶೈಲಿಯನ್ನು ಪೂರ್ಣವಾಗಿ ಬದಲಿಸಿಕೊಳ್ಳಬೇಕಾಗುತ್ತದೆ. ಈ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಕಾರ್ಮಿಕರು ಹಾಗೂ ಮಧ್ಯಮವರ್ಗದವರಿಗೆ ಹಣಕಾಸಿನ ನೆರವನ್ನು ನೀಡುವುದಕ್ಕೆ ಸಾಧ್ಯವಿದೆ. ಅಷ್ಟಾಗಿ ಇಂಧನವನ್ನು ಬೇಡದ, ಈ ಭೂಮಿಯ ಉಳಿವಿಗೆ ಪೂರಕವಾದ ಸರಕು ಹಾಗೂ ಸೇವೆಗಳನ್ನು (ಶಿಕ್ಷಣ, ಆರೋಗ್ಯ, ಮನೆ, ಸಾರಿಗೆ ಇತ್ಯಾದಿ) ಅವರಿಗೆ ಒದಗಿಸುವುದಕ್ಕೆ ಸಾಧ್ಯ. ಆದರೆ ಇದಕ್ಕೆ ಅತಿ ಶ್ರೀಮಂತರ ಸಂಪತ್ತು ಹಾಗೂ ವರಮಾನದ ಮಟ್ಟದಲ್ಲಿ ತೀವ್ರವಾದ ಕಡಿತ ಆಗಬೇಕು. ಈ ಗ್ರಹವನ್ನು ಉಳಿಸುವುದಕ್ಕೆ ಬೇಕಾದ ರಾಜಕೀಯ ಬಹುಮತವನ್ನು ಕಟ್ಟುವುದಕ್ಕೆ ಇದೊಂದೇ ದಾರಿ.

ಅಂಕಿಅಂಶಗಳು ಸ್ಪಷ್ಟವಾಗಿವೆ. ಜಗತ್ತಿನ ಕೋಟ್ಯಧಿಪತಿಗಳು 2008ರ ಬಿಕ್ಕಟ್ಟಿನಲ್ಲಿ ಹಾಗೂ ಕೋವಿಡ್ ಸಂದರ್ಭದಲ್ಲಿ ಹಿಂದೆಂದೂ ಕಾಣದಷ್ಟು ಸಂಪತ್ತನ್ನು ಗೋರಿಕೊಂಡರು. ಜಾಗತಿಕ ಅಸಮಾನತೆಯ ವರದಿ-2022 ಹೇಳುವಂತೆ ಜಗತ್ತಿನ ಅತ್ಯಂತ ಶ್ರೀಮಂತ ಶೇ.0.1ರಷ್ಟು ಜನ ಈಗ 80 ಟ್ರಿಲಿಯನ್ ಯೂರೋ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಅವೆಲ್ಲಾ ಹಣಕಾಸು ಹಾಗೂ ರಿಯಲ್ ಎಸ್ಟೇಟ್ ಸ್ವತ್ತಿನ ರೂಪದಲ್ಲಿದೆ. ಅದು ಒಟ್ಟಾರೆ ಜಗತ್ತಿನ ಒಟ್ಟು ಸಂಪತ್ತಿನ ಶೇ. 19ಕ್ಕಿಂತ ಹೆಚ್ಚು. ಒಂದು ವರ್ಷದ ಜಾಗತಿಕ ಜಿಡಿಪಿಗೆ ಸಮ. ಜಗತ್ತಿನ ಅತ್ಯಂತ ಶ್ರೀಮಂತ ಶೇ.10 ಜನರನ್ನು ತೆಗೆದುಕೊಂಡರೆ ಅವರ ಬಳಿ ಜಗತ್ತಿನ ಒಟ್ಟು ಸಂಪತ್ತಿನ ಶೇ.77ರಷ್ಟಿದೆ. ಆದರೆ ಕೆಳಸ್ಥರದಲ್ಲಿರುವ ಶೇ. 50ರಷ್ಟು ಜನರನ್ನು ತೆಗೆದುಕೊಂಡರೆ ಅವರ ಬಳಿ ಇರುವುದು ಕೇವಲ ಶೇ. 2ರಷ್ಟು ಸಂಪತ್ತು. ಆರ್ಥಿಕ ಎಲೈಟುಗಳು ಯುರೋಪನ್ನು ಸಮಾನತೆಯ ಸ್ವರ್ಗ ಎಂದು ಬಣ್ಣಿಸುತ್ತಾರೆ. ಅಲ್ಲಿ ಶೇ. 61ರಷ್ಟು ಸಂಪತ್ತು ಅತ್ಯಂತ ಶ್ರೀಮಂತ ಶೇ. 10ರಷ್ಟು ಜನರ ಕೈಯಲ್ಲಿದೆ. ಶೇ. 50ರಷ್ಟು ಬಡಜನರ ಬಳಿ ಇರುವುದು ಕೇವಲ ಶೇ. 4ರಷ್ಟು ಮಾತ್ರ.

ಫ್ರಾನ್ಸಿನಲ್ಲಿ ಅತ್ಯಂತ ಶ್ರೀಮಂತ 500 ಜನರ ಸಂಪತ್ತು 2010ರಲ್ಲಿ 200 ಬಿಲಿಯನ್ ಇದ್ದುದು 2022ರ ವೇಳೆಗೆ 1,000 ಬಿಲಿಯನ್ ಆಗಿದೆ. ಅಂದರೆ ಜಿಡಿಪಿಯ ಶೇ. 10ರಷ್ಟು ಇದ್ದುದು ಶೇ. 50ರಷ್ಟಾಗಿದೆ. ಅಂದರೆ 800 ಬಿಲಿಯನ್‌ನಷ್ಟು ಜಾಸ್ತಿಯಾಗಿದೆ. ಆದರೆ ಅವರು ಕಟ್ಟಿರುವ ಒಟ್ಟು ಆದಾಯ ತೆರಿಗೆ ಅದರ ಶೇ. 5ರಷ್ಟೂ ಆಗುವುದಿಲ್ಲ. ಅಮೆರಿಕದಲ್ಲೂ ಈ ಸಂಖ್ಯೆ ಸುಮಾರಿಗೆ ಅಷ್ಟೆ ಇದೆ. ಪ್ರೊ ಪಬ್ಲಿಕ್ ವರದಿ ಇದನ್ನು ಸ್ಪಷ್ಟಪಡಿಸಿದೆ.

ಈ ಹೆಚ್ಚುವರಿ ಸಂಪತ್ತಿನ ಮೇಲೆ ಒಮ್ಮೆ ಶೇ. 50ರಷ್ಟು ತೆರಿಗೆ ಹಾಕಿದರೆ ಫ್ರೆಂಚ್ ಸರಕಾರ 400 ಬಿಲಿಯನ್ ಯೂರೋ ಸಂಗ್ರಹಿಸಬಹುದು. ಸಾಮಾನ್ಯ ಜನ ಕಷ್ಟಪಟ್ಟು ಉಳಿಸಿದ ಹಣದ ಮೇಲೆ ಪ್ರತಿವರ್ಷ ಬೀಳುತ್ತಿರುವ ಶೇ. 10ರಷ್ಟು ಹಣದುಬ್ಬರದ ತೆರಿಗೆಗೆ ಹೋಲಿಸಿದರೆ ಇದು ಹೆಚ್ಚಲ್ಲ. ಆದರೆ ಈ ಹಣದಿಂದ ಹೆಚ್ಚೇನನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ ಅನ್ನುವವರನ್ನು ಬಿಟ್ಟುಬಿಡೋಣ. ಯಾಕೆಂದರೆ ಸರಕಾರ ಇತ್ತೀಚೆಗಷ್ಟೇ ಎರಡು ಯೋಜನೆಗಳನ್ನು ಅಷ್ಟೊಂದು ದುಡ್ಡು ಭರಿಸುವುದಕ್ಕೆ ಸಾಧ್ಯವಿಲ್ಲ ಅನ್ನುವ ಕಾರಣಕ್ಕೆ ಕೇಂದ್ರ ಸಂಸತ್ತಿನಲ್ಲಿ ತಿರಸ್ಕರಿಸಿತು. ಮೊದಲನೆಯದು ಕಟ್ಟಡಗಳಲ್ಲಿ ತಾಪಮಾನವನ್ನು ಕಾಪಾಡಿಕೊಳ್ಳುವ ಮೂಲಕ ಇಂಧನ ಉಳಿಸುವ ಯೋಜನೆ (12 ಬಿಲಿಯನ್ ಯೂರೊ), ಮತ್ತು ಎರಡನೆಯದು ರೈಲು ದಾರಿಗಳ ನಿರ್ಮಾಣ (3 ಬಿಲಿಯನ್ ಯೂರೊ). ಈ ಯೋಜನೆಗಳಿಗೆ ಖರ್ಚು ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿತು.

ಸರಕಾರಕ್ಕೆ ಎಣಿಸುವುದಕ್ಕೆ ಬರುತ್ತದೆಯೇ ಎಂದು ಕೇಳಬೇಕಾಗುತ್ತದೆ ಅಥವಾ ಅದು ಈ ಭೂಮಿ ಹಾಗೂ ಜನತೆಯ ಹಿತಾಸಕ್ತಿಗಿಂತ ಕೆಲವೇ ಜನರ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದೆಯೇ ಎನ್ನುವ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ. ಏಕೆಂದರೆ ಇಂದು ಮರುವಿನ್ಯಾಸಗೊಂಡ ಮನೆಗಳು ಹಾಗೂ ಸಮಯಕ್ಕೆ ಸರಿಯಾಗಿ ಬರುವ ಟ್ರೈನ್ ಜನರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. 500 ಬೃಹತ್ ಉದ್ದಿಮೆಗಳ ಮೇಲೆ ವಿಶೇಷವಾದ ತೆರಿಗೆ ಹಾಕುವುದರ ಜೊತೆಗೆ, ಇಡೀ ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸಬೇಕಾಗಿದೆ. ಜಗತ್ತಿನ ಎಲ್ಲಾ ದೇಶಗಳಂತೆ ಫ್ರಾನ್ಸಿನಲ್ಲಿಯೂ ಇದು ಆಗಬೇಕಾಗಿದೆ. 20ನೇ ಶತಮಾನದಲ್ಲಿ ಪ್ರಗತಿಪರ ತೆರಿಗೆ ಅಂದರೆ ಆದಾಯ ಹೆಚ್ಚಿದಂತೆ ಹೆಚ್ಚಿನ ತೆರಿಗೆಯನ್ನು ವಿಧಿಸುವ ಕ್ರಮ ತೀರಾ ಯಶಸ್ವಿಯಾದ ಕಾರ್ಯಕ್ರಮವಾಗಿತ್ತು. ರೂಸ್‌ವೆಲ್ಟ್ ಕಾಲದಲ್ಲಿ ಶೇ. 80ರಿಂದ 90ರವರೆಗೆ ತೆರಿಗೆ ಹಾಕಲಾಗಿತ್ತು. 1930ರಿಂದ 1980ರವರೆಗಿನ 50 ವರ್ಷಗಳ ಅವಧಿಯಲ್ಲಿ ಅಮೆರಿಕದಲ್ಲಿ ಗರಿಷ್ಠ ಮಟ್ಟದ ಅಭಿವೃದ್ಧಿ, ಆವಿಷ್ಕಾರ ಸಾಧ್ಯವಾಗಿತ್ತು. ಅದಕ್ಕೆ ಕಾರಣ ಸರಳ. ಸಮೃದ್ಧಿ ಅನ್ನುವುದು ಮುಖ್ಯವಾಗಿ ಶಿಕ್ಷಣವನ್ನು ಅವಲಂಬಿಸಿರುತ್ತದೆ. ಆಗ ಶಿಕ್ಷಣದ ವಿಷಯದಲ್ಲಿ ಅಮೆರಿಕ ಜಗತ್ತಿನಲ್ಲಿ ತುಂಬಾ ಮುಂದಿತ್ತು. ಪ್ರಗತಿ ಬೇಕೆಂದರೆ ಅಸಮಾನತೆಯನ್ನೂ ಒಪ್ಪಿಕೊಳ್ಳಬೇಕಾಗುತ್ತದೆ ಅನ್ನುವುದು ಸರಿಯಾದ ವಾದವಲ್ಲ.

ಈಗ 21ನೇ ಶತಮಾನದಲ್ಲಿ ಕೇವಲ ಆದಾಯಕ್ಕೆ ಮಾತ್ರವಲ್ಲ ಸಂಪತ್ತಿಗೂ ಪ್ರಗತಿಪರ ತೆರಿಗೆಯನ್ನು ವಿಧಿಸಬೇಕಾಗುತ್ತದೆ. ಶತಕೋಟಿ ಶ್ರೀಮಂತರ ಮೇಲೆ ಶೇ. 80ರಿಂದ 90ರವರೆಗೆ ತೆರಿಗೆ ಹಾಕಬೇಕು. ಅತ್ಯಂತ ಶ್ರೀಮಂತ ಶೇ. 10ರಷ್ಟು ಜನರನ್ನು ತೆರಿಗೆ ಪಟ್ಟಿಯಲ್ಲಿ ಸೇರಿಸಬೇಕು. ಹಾಗೆ ಸಂಗ್ರಹಿಸಿದ ಹಣದಲ್ಲಿ ಗಣನೀಯ ಭಾಗವನ್ನು ಬಡದೇಶಗಳಿಗೆ ನೇರವಾಗಿ ಕೊಡಬಹುದು. ಅದನ್ನು ನಿರ್ಧರಿಸುವಾಗ ಅವರ ಜನಸಂಖ್ಯೆಯನ್ನು, ಹವಾಮಾನ ವೈಪರೀತ್ಯದಿಂದ ಅವರಿಗಾದ ತೊಂದರೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ದಕ್ಷಿಣದ ದೇಶಗಳು ತಾವು ನೀಡಿದ ಭರವಸೆಗಳನ್ನು ಪೂರೈಸಲೆಂದು ಪ್ರತಿವರ್ಷ ಕಾಯುತ್ತಾ ಕೂರುವ ಅವಶ್ಯಕತೆಯಿಲ್ಲ. ನಮ್ಮ ಭವಿಷ್ಯದ ಜಗತ್ತಿನ ಬಗ್ಗೆ ಈಗಲಾದರೂ ಯೋಚಿಸಬೇಕಾಗಿದೆ. ಇಲ್ಲದೇ ಹೋದರೆ ಮುಂಬರುವ ದಿನಗಳು ಕೆಟ್ಟ ಸ್ವಪ್ನದಂತಿರುತ್ತವೆ.

Similar News