ಮಂಗಳೂರು | ನ.27ರಂದು ಎಂ.ಸಿ.ಸಿ ಬ್ಯಾಂಕ್ ಶತಮಾನೋತ್ತರ ದಶಮಾನೋತ್ಸವ ಸಮಾರಂಭ

Update: 2022-11-24 09:25 GMT

ಮಂಗಳೂರು,ನ.24: ಕರಾವಳಿಯ ಮುಂಚೂಣಿಯ ಸಹಕಾರಿ ಲಿಮಿಟೆಡ್ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಎಂ.ಸಿ.ಸಿ. ಬ್ಯಾಂಕ್‌ ನ.27ರಂದು ರವಿವಾರ ನಗರದ ಮಿಲಾಗ್ರಿಸ್‌ ಕಾಲೇಜು ಮೈದಾನದಲ್ಲಿ ಶತಮಾನೋತ್ತರ ದಶಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎಂಸಿಸಿ ಬ್ಯಾಂಕ್ (MCC BANK LTD) ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ 16 ಶಾಖೆಗಳನ್ನು ಹೊಂದಿದೆ. ಕಳೆದ ಮಾರ್ಚ್ 2022 ರಂದು ದಾಖಲೆಯ 1.60% ಎನ್.ಪಿ.ಪಿ. ಹಾಗೂ 8.27 ಕೋಟಿ ರೂ. ಲಾಭವನ್ನು ದಾಖಲಿಸಿದೆ ಎಂದರು.

ಈ ಸಮಾರಂಭಕ್ಕೆ ಮಂಗಳೂರು ಮತ್ತು ಉಡುಪಿ ಉಭಯ ಧರ್ಮಪ್ರಾಂತ್ಯಗಳ ಧರ್ಮಾಧ್ಯಕ್ಷರುಗಳಾದ ಡಾ. ಪೀಟರ್ ಪಾವ್ ಸಲ್ದಾನ ಮತ್ತು ಡಾ. ಜೆರಾಲ್ಡ್ ಐಸಾಕ್ ಲೋಬೊ, ಸ್ಥಳೀಯ ಶಾಸಕರಾದ  ವೇದವ್ಯಾಸ ಕಾಮತ್ ಮತ್ತು ಅನಿವಾಸಿ ಭಾರತೀಯ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಉಪಸ್ಥಿತರಿರುವರು. ಸಮಾರಂಭವು ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊರವರ ಅಧ್ಯಕ್ಷತೆಯಲ್ಲಿ ಜರಗಲಿರುವುದು. ಕಾರ್ಯಕ್ರಮ ನ.27ರ ಸಂಜೆ 5.45 ಕ್ಕೆ ಆರಂಭಗೊಂಡು, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಹಭೋಜನದೊಂದಿಗೆ ಸಮಾಪ್ತವಾಗುವುದು. ಈ ಉತ್ಸವದ ಸಂದರ್ಭದಲ್ಲಿ ಸಮಾಜದ ಅಶಕ್ತ ವರ್ಗದವರ ಚಿಕಿತ್ಸೆಗೆ, ಉನ್ನತ ಶಿಕ್ಷಣಕ್ಕೆ, ವಸತಿ ಮತ್ತು ಹೆಣ್ಣುಮಕ್ಕಳ ಮದುವೆಯ ವೆಚ್ಚಕ್ಕೆ ಸಹಾಯಹಸ್ತ ನೀಡಲಾಗುವುದು. ಆಶಕ್ತರಿಗೆ ನೀಡುವ ದೇಣಿಗೆಯ ಕಾರ್ಯಕ್ರಮವು ಶನಿವಾರ, ನವೆಂಬರ್ 26ರಂದು ಮಧ್ಯಾಹ್ನ 3.30ಕ್ಕೆ ಬ್ಯಾಂಕಿನ ಹಂಪಸ್‌ ಕಟ್ಟೆಯ ಪ್ರಧಾನ ಕಛೇರಿಯ ಪಿ.ಎಫ್.ಎಕ್ಸ್ ಸಲ್ದನ್ಹಾ ಸ್ಮಾರಕ ಸಭಾಂಗಣದಲ್ಲಿ ಗಣ್ಯರ ಸಮಕ್ಷಮ ನಡೆಯಲಿರುವುದು ಎಂದು ಅನಿಲ್ ಲೋಬೊ ತಿಳಿಸಿದ್ದಾರೆ.

ಶತಮಾನೋತ್ತರ ದಶಮಾನೋತ್ಸವದ ಸಂದರ್ಭದಲ್ಲಿ 7.60% ಬಡ್ಡಿದರದಲ್ಲಿ ವಿಶೇಷ ನಿರಖು ಠೇವಣಿ ಯೋಜನೆಯನ್ನು ಪರಿಚಯಿಸಿದ್ದು, ಸೀಮಿತ ಯೋಜನೆಯ ಲಾಭವನ್ನು ಗ್ರಾಹಕರು ಪಡೆದುಕೊಳ್ಳಬೇಕು. ಇತರ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳಿಗೆ ಇರುವಂತೆ ಎಂಸಿಸಿ ಬ್ಯಾಂಕಿನಲ್ಲಿ ಗ್ರಾಹಕರ ಐದು ಲಕ್ಷದವರೆಗಿನ ಠೇವಣಿಗೆ  ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ, ಕಾರ್ಪೊರೇಶನ್ (ಡಿಜೆ) ಇದರಿಂದ ಸೌಲಭ್ಯವಿರುವುದರಿಂದ ಗ್ರಾಹಕರು ನಿಶ್ಚಿಂತೆಯಿಂದ ಎಂಸಿಸಿ ಬ್ಯಾಂಕಿನಲ್ಲಿ ಠೇವಣಿ ವ್ಯವಹಾರ ಮಾಡಬಹುದು. ವಿದ್ಯಾ ಭವಿಷ್ಯ ವಿದ್ಯಾರ್ಥಿ ಉಳಿತಾಯ ಖಾತೆಗೆ ಎಂಸಿಸಿ ಬ್ಯಾಂಕಿನಲ್ಲಿ ಶೇ. 5 ಬಡ್ಡಿಯನ್ನು ನೀಡಲಾಗುತ್ತದೆ, ಇದರ ಜೊತೆಗೆ ಎಂಸಿಸಿ ಬ್ಯಾಂಕಿನಲ್ಲಿ ಸ್ಪರ್ಧಾತ್ಮಕ ದರದಲ್ಲಿ ಚಿನ್ನಾಭರಣ ಸಾಲ, ಶಿಕ್ಷಣ ಸಾಲ, ವಾಹನ ಸಾಲ, ಲಾಕರ್ ಸೌಲಭ್ಯಗಳು ಲಭ್ಯವಿವೆ ಎಂದು ಅನಿಲ್ ಲೋಬೊ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ  ಉಪಾಧ್ಯಕ್ಷ ರಾದ,ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರೂ ಡಿ ಸೋಜ, ಮಾರ್ಸೆಲ್ ಎಮ್. ಡಿಸೋಜ, ಜೋಸೆಫ್ ಅನಿಲ್‌ ಪತ್ತಾವೊ, ಹೆರಾಲ್ಡ್ ಮೊಂತೇರೊ,ಎಲ್.ರೋಯ್ ಕೆ.ಕ್ರಾಸ್ಟೊ,ಜೆ.ಪಿ.ರೋಡ್ರಿಗಸ್,ಸಿ.ಜಿ.ಪಿಂಟೊ, ಡೇವಿಡ್ ಡಿಸೋಜ ,ಸುಶಾಂತ್ ಸಲ್ದಾನ, ರೋಶನ್ ಡಿಸೋಜ, ಡಾ. ಜೆರಾಲ್ಡ್ ಪಿಂಟೊ , ಐರಿನ್ ರೆಬೆಲ್ಲೊ ಡಾ. ಫ್ರೀಡಾ ಡಿಸೋಜ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರೂಜ್ , ಅಲ್ವಿನ್ ಪಿ. ಮೊಂತೇರೊ, ಮಹಾಪ್ರಬಂಧಕರಾದ ಸುನಿಲ್‌ ಮಿನೇಜಸ್ ಮೊದಲಾದವರು ಉಪಸ್ಥಿತರಿದ್ದರು.

Similar News