ನಾಡು, ನುಡಿ ರಕ್ಷಣೆಯಲ್ಲಿ ಕನ್ನಡ ಪರ ಸಂಘಟನೆಗಳ ಪಾತ್ರ ಅರ್ಥಪೂರ್ಣ: ಸಚಿವ ಕೆ.ಗೋಪಾಲಯ್ಯ

Update: 2022-11-25 07:00 GMT

ಬೆಂಗಳೂರು, ನ.25: ನಾಡು,ನುಡಿ ರಕ್ಷಣೆಗಾಗಿ ಹೋರಾಟ ಮಾಡುತ್ತಿರುವ ಕನ್ನಡ ಪರ ಸಂಘಟನೆಗಳ ಶ್ರಮ ಅರ್ಥಪೂರ್ಣವಾದುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಜಯಾನಂದ ನಗರದಲ್ಲಿಂದು ವೀರ ಮದಕರಿ ನಾಯಕ ಕನ್ನಡ ಸಂಘದಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಅಣ್ಣಮ್ಮ ದೇವಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡದ ಉಳಿವಿಗೆ ಸಂಘಟನೆಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿವೆ. ಸಮಾಜದಲ್ಲಿ ಕನ್ನಡಪರ ಧ್ವನಿ ಎತ್ತಲು ಮುಂದಾಗಿವೆ. ಹೀಗಾಗಿ, ಕನ್ನಡಕ್ಕಾಗಿ ಹೋರಾಟ ಮಾಡುವ ಕನ್ನಡಪರ ಸಂಘಟನೆಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು ಸಮಾಜದ ಕೆಲಸ ಕೂಡ ಆಗಿದೆ. ಈ ಸಂಘಟನೆಗಳು ಕನ್ನಡ ಭಾಷೆ, ಸಂಸ್ಕೃತಿ ಪರವಾಗಿ ಇನ್ನೂ ಹೆಚ್ಚು ಹೆಚ್ಚು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಅಭಿಮಾನ ಎಲ್ಲರಲ್ಲೂ ಮೂಡಬೇಕು. ಆಗ ನಮ್ಮ ಕನ್ನಡ ಭಾಷೆ, ಸಂಸ್ಕಾರ ಬೆಳೆಸುತ್ತದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಕನ್ನಡಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಪ್ರಥಮವಾಗಿ ಹೋರಾಟ ಶುರುವಾಗುವುದು ರಾಜಧಾನಿಯಲ್ಲಿ ಈ ಸಂಘಟನೆ ನಾಡು, ನುಡಿಗೆ ಹೆಚ್ಚು ಒತ್ತು ನೀಡಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಮಹದೇವ್.ವಾರ್ಡ್ ಅಧ್ಯಕ್ಷ ಡಾ.ನಾಗೇಂದ್ರ ಸಂಘಟನೆಯ ಅಧ್ಯಕ್ಷ ರಾಜು, ರಘು, ಚಿಕ್ಕಣ್ಣ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು

Similar News