ಭಿನ್ನಾಭಿಪ್ರಾಯ ಮರೆತು ಒಟ್ಟಿಗೆ ಕಾಣಿಸಿಕೊಂಡ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್

Update: 2022-11-30 05:06 GMT

ಹೊಸದಿಲ್ಲಿ: ಭಿನ್ನಾಭಿಪ್ರಾಯದ ಮೂಲಕ ಸುದ್ದಿಯಾಗಿದ್ದ ರಾಜಸ್ಥಾನದ ಕಾಂಗ್ರೆಸ್ ಪ್ರಮುಖ ನಾಯಕರಾದ   ಅಶೋಕ್ ಗೆಹ್ಲೋಟ್ ಹಾಗೂ  ಸಚಿನ್ ಪೈಲಟ್ Ashok Gehlot and Sachin Pilot ಮಂಗಳವಾರ ಒಟ್ಟಿಗೆ ಕಾಣಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ ಪರಸ್ಪರ ಅಕ್ಕಪಕ್ಕದಲ್ಲಿ ನಿಂತು ಸುದ್ದಿಗಾರರೊಂದಿಗೆ ಮಾತನಾಡಿದ ಈ ನಾಯಕರು ಡಿಸೆಂಬರ್ 4 ರಂದು ರಾಜಸ್ಥಾನಕ್ಕೆ ಪ್ರವೇಶಿಸುವ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಲಿದೆ ಎಂದು ಒತ್ತಿ ಹೇಳಿದರು.

"ಪಕ್ಷವು ನಮಗೆ ಸರ್ವಶ್ರೇಷ್ಠವಾಗಿದೆ. ಪಕ್ಷವು ಮುನ್ನುಗ್ಗಬೇಕು ಮತ್ತು ಅದರ ವೈಭವವನ್ನು ಮರಳಿ ಪಡೆಯಬೇಕೆಂದು ನಾವು ಬಯಸುತ್ತೇವೆ" ಎಂದು ಮುಖ್ಯಮಂತ್ರಿ ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದರು.

"ದೇಶದಲ್ಲಿ ಉದ್ವಿಗ್ನ ವಾತಾವರಣವಿದೆ ಹಾಗೂ  ಇದು ದೊಡ್ಡ ಸವಾಲಾಗಿದೆ. ಆದರೆ ಯಾತ್ರೆಯ ಯಶಸ್ಸು ರಾಹುಲ್ ಗಾಂಧಿ ಎತ್ತಿದ ಸಮಸ್ಯೆಗಳನ್ನು ಜನರು ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಎಂಬುದನ್ನು ತೋರಿಸುತ್ತದೆ’’ ಎಂದರು.

ರಾಹುಲ್ ಗಾಂಧಿ ಅವರೊಂದಿಗಿನ ಭಾರತ್ ಜೋಡೋ ಯಾತ್ರೆಯನ್ನು "ರಾಜಸ್ಥಾನದಲ್ಲಿ ಗರಿಷ್ಠ ಉತ್ಸಾಹ ಹಾಗೂ   ಶಕ್ತಿಯಿಂದ ಸ್ವಾಗತಿಸಲಾಗುವುದು" ಎಂದು ಸಚಿನ್ ಪೈಲಟ್ ಹೇಳಿದ್ದಾರೆ.

ರಾಹುಲ್ ಗಾಂಧಿಯವರು ತಮ್ಮ 12 ದಿನಗಳ ರಾಜ್ಯ ಪ್ರವಾಸವನ್ನು ಆರಂಭಿಸುವ ಮುನ್ನವೇ ರಾಜಸ್ಥಾನದಲ್ಲಿ ಪಕ್ಷದ ಇಬ್ಬರು ಉನ್ನತ ನಾಯಕರ ನಡುವೆ ಭಿನ್ನಾಭಿಪ್ರಾಯ ತಾರಕಕ್ಕೇರಿತ್ತು.  ಹೀಗಾಗಿ  ಕಾಂಗ್ರೆಸ್‌ಗೆ ಗೆಹ್ಲೋಟ್-ಪೈಲಟ್ ಒಟ್ಟಿಗೆ ಕಾಣಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

NDTVಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಗೆಹ್ಲೋಟ್ ಅವರು ಪೈಲಟ್ ವಿರುದ್ದ ವಾಗ್ದಾಳಿ ನಡೆಸಿದ್ದರು. "ಗದ್ದರ್ (ವಿಶ್ವಾಸದ್ರೋಹಿ) ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಹೈಕಮಾಂಡ್ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ... 10 ಶಾಸಕರನ್ನು ಹೊಂದಿರದ ವ್ಯಕ್ತಿ ಬಂಡಾಯ ಸಾರಿದ್ದ. ಪೈಲಟ್  ಪಕ್ಷಕ್ಕೆ ದ್ರೋಹ ಮಾಡಿದ್ದಾರೆ’’ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಪೈಲಟ್, ಕಾಂಗ್ರೆಸ್  ಒಗ್ಗಟ್ಟು ಪ್ರದರ್ಶಿಸಿಸಬೇಕಾದ ಅಗತ್ಯವಿರುವ ಸಮಯದಲ್ಲಿ ಹಿರಿಯ ನಾಯಕರೊಬ್ಬರು ಇಂತಹ ಪದಗಳನ್ನು ಬಳಸುವುದು "ಅವರಿಗೆ ಶೋಭೆ ತರುವುದಿಲ್ಲ" ಎಂದು ಹೇಳಿದ್ದರು.

Similar News