2030ರಿಂದ ಬಿಸಿಗಾಳಿಯ ವ್ಯತಿರಿಕ್ತ ಪರಿಣಾಮ ಎದುರಿಸಲಿರುವ 16 ಕೋಟಿ ಭಾರತೀಯರು!

Update: 2022-12-01 16:48 GMT

ಹೊಸದಿಲ್ಲಿ: ಬುಧವಾರ ಬಿಡುಗಡೆಯಾಗಿರುವ ವಿಶ್ವಬ್ಯಾಂಕ್ ವರದಿಯ ಪ್ರಕಾರ, 2030ರಿಂದ 16 ಕೋಟಿಗಿಂತ ಹೆಚ್ಚು ಭಾರತೀಯರು ಬಿಸಿಗಾಳಿಯ ವ್ಯತಿರಿಕ್ತ ಪರಿಣಾಮಕ್ಕೆ ತುತ್ತಾಗಲಿದ್ದು, ಸುಮಾರು 3.4 ಕೋಟಿ ಮಂದಿ ಬಿಸಿಗೆ ಸಂಬಂಧಿಸಿದ ಉತ್ಪಾದನೆಯಲ್ಲಿ ಇಳಿಕೆ ಕಾಣುವುದರಿಂದ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ ಎಂದು scroll.in ವರದಿ ಮಾಡಿದೆ.

ವರದಿಯ ಪ್ರಕಾರ, ಬಿಸಿಗಾಳಿಯಿಂದ ಶೀತಲೀಕರಣ ಅಗತ್ಯತೆ ಹೆಚ್ಚಲಿದ್ದು, ಹವಾನಿಯಂತ್ರಕಗಳು ಹಾಗೂ ಮತ್ತಿತರ ಸಾಧನೆಗಳಿಗೆ ಬೇಡಿಕೆ ಹೆಚ್ಚಲಿದೆ. ಇದರಿಂದ ಭಾರತವು ಪರ್ಯಾಯ ಹಾಗೂ ವಿನೂತನ ಶೀತಲೀಕರಣ ವ್ಯವಸ್ಥೆಯತ್ತ ಮುಖ ಮಾಡುವಂತೆ ಮಾಡಲಿದೆ ಎಂದು ಹೇಳಿದೆ.

ಈ ವ್ಯತ್ಯಯವು 2040ರ ವೇಳೆಗೆ 1.6 ಟ್ರಿಲಿಯನ್ ಡಾಲರ್ (ರೂ. 129 ಲಕ್ಷ ಕೋಟಿ) ಬಂಡವಾಳ ಹೂಡಿಕೆಗೆ ಅವಕಾಶ ಒದಗಿಸಲಿದ್ದು, ಗಮನಾರ್ಹ ಪ್ರಮಾಣದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಇಳಿಕೆಯಾದರೂ, 37 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಹೇಳಿದೆ.

ವಿಶ್ವಬ್ಯಾಂಕ್‍ ಬಿಡುಗಡೆ ಮಾಡಿರುವ "ಭಾರತದಲ್ಲಿನ ಶೀತಲೀಕರಣ ವಲಯದಲ್ಲಿ ಹವಾಮಾನ ಬಂಡವಾಳ ಹೂಡಿಕೆಯ ಅವಕಾಶಗಳು” ವರದಿಯಲ್ಲಿ ಈ ಅಭಿಪ್ರಾಯಗಳನ್ನು ಮಂಡಿಸಲಾಗಿದೆ. ಕಟ್ಟಡ ನಿರ್ಮಾಣ, ಶೀತಲ ಸರಪಳಿ ಹಾಗೂ ಶೀತಲೀಕರಣ ಘಟಕಗಳಲ್ಲಿ ಬಂಡವಾಳ ಹೂಡಲು ರೂಪಿಸಲಾಗಿರುವ ಭಾರತ ಶೀತಲೀಕರಣ ಕಾರ್ಯಯೋಜನೆ, 2019ಗೆ ನೆರವು ನೀಡಲು ಈ ವರದಿ ಒಂದು ಮಾರ್ಗನಕ್ಷೆಯ ಪ್ರಸ್ತಾಪ ಮಾಡಿದೆ.

ಖಾಸಗಿ ಹಾಗೂ ಸರ್ಕಾರ ಹೂಡಿಕೆ ಮಾಡಿರುವ ನಿರ್ಮಾಣಗಳಲ್ಲಿ ಹವಾಮಾನ ಸಂವೇದಿ ಶೀತಲೀಕರಣ ತಾಂತ್ರಿಕತೆ ಹೊಂದಿರುವ ಸಾಧನಗಳನ್ನು ಅಳವಡಿಸುವುದರಿಂದ ದುರ್ಬಲರು ತಾಪಮಾನ ಏರಿಕೆಯ ದುಷ್ಪರಿಣಾಮಗಳಿಗೆ ಒಳಗಾಗದಂತೆ ತಡೆಯಬಹುದಾಗಿದೆ ಎಂದು ವರದಿಯಲ್ಲಿ ಸಲಹೆ ಮಾಡಲಾಗಿದೆ.

ಇಂಧನ ಬಳಕೆಯನ್ನು ಶೇ. 20-30ರಷ್ಟು ತಗ್ಗಿಸಲು ಜಿಲ್ಲಾ ಶೀತಲೀಕರಣ ತಾಂತ್ರಿಕತೆಯ ಮೂಲಕ ಕೇಂದ್ರೀಯ ಘಟಕದಲ್ಲಿ ತಂಪಾದ ನೀರನ್ನು ಉತ್ಪಾದಿಸಿ, ಅದನ್ನು ಒಳ ಶಾಖನಿರೋಧಕ ಕೊಳವೆಗಳ ಮೂಲಕ ಬಹುಮಹಡಿ ಕಟ್ಟಡಗಳಿಗೆ ಪೂರೈಸುವ ನೀತಿಯನ್ನು ಅಳವಡಿಸಿಕೊಳ್ಳಬೇಕು. ಇದು ಅತ್ಯಂತ ಮಿತವ್ಯಯಕಾರಿ ವ್ಯವಸ್ಥೆಯಾಗಲಿದೆ ಎಂದು ಹೇಳಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದಾದ್ಯಂತ ತಂಪು ಚಾವಣಿ ನಿರ್ಮಿಸುವಂತಹ ಪಟ್ಟಣ ಶೀತಲ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ರೂಪಿಸಬೇಕಿದೆ ಎಂದೂ ವರದಿ ಸಲಹೆ ಮಾಡಿದೆ.

ಅತಿಯಾದ ತಾಪದಿಂದ ಆಹಾರ ಮತ್ತು ಔಷಧ ಸಾಗಾಟದ ಸಂದರ್ಭದಲ್ಲಿ ಆಗುವ ನಷ್ಟವನ್ನು ತಪ್ಪಿಸಲು ಶೀತಲ ಸರಪಳಿ ಜಾಲದ ನಡುವೆ ಅಂತರ ಸೃಷ್ಟಿಸಬೇಕು ಎಂದೂ ವರದಿ ಶಿಫಾರಸು ಮಾಡಿದೆ. ಪೂರ್ವ ಶೀತಲೀಕರಣ ಮತ್ತು ಶೀತಲೀಕೃತ ಸಾಗಾಟದಿಂದ ಶೇ. 76ರಷ್ಟು ಆಹಾರ ನಷ್ಟವನ್ನು ತಗ್ಗಿಸಬಹುದು ಹಾಗೂ ಶೇ. 16ರಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಮಿತವ್ಯಯ ಕ್ರಮಗಳ ಸುಧಾರಣೆಯಿಂದ ಕೂಡಾ ತರಬೇತಿ ಪಡೆದ ತಂತ್ರಜ್ಞರಿಗೆ 2 ಲಕ್ಷ ಉದ್ಯೋಗಗಳನ್ನು ಮುಂದಿನ ಎರಡು ದಶಕಗಳಲ್ಲಿ ಸೃಷ್ಟಿಸಬಹುದಾಗಿದ್ದು, ಇದರಿಂದ ಶೀತಲ ಘಟಕಗಳ ಬೇಡಿಕೆಯನ್ನು ಶೇ. 31ರಷ್ಟು ತಗ್ಗಿಸಬಹುದಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

“ಭಾರತದ ಶೀತಲೀಕರಣ ಕಾರ್ಯತಂತ್ರವು ಜೀವ ಮತ್ತು ಜೀವನವನ್ನು ಉಳಿಸಲು ನೆರವು ನೀಡಲಿದ್ದು, ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲಿದೆ. ಇದೇ ಸಂದರ್ಭದಲ್ಲಿ ಭಾರತವು ಹಸಿರು ಶೀತಲೀಕರಣ ಉತ್ಪಾದನೆಯಲ್ಲಿ ಜಾಗತಿಕ ಪ್ರದೇಶವಾಗಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲಿದೆ” ಎಂದು ಭಾರತದಲ್ಲಿನ ವಿಶ್ವಬ್ಯಾಂಕ್‌ನ ದೇಶೀಯ ನಿರ್ದೇಶಕ ಆಗಸ್ಟ್ ಟಾಮೊ ಕೊವಾಮೆ ಅಭಿಪ್ರಾಯ ಪಟ್ಟಿದ್ದಾರೆ.

Similar News