ಅಟೆನ್‌ಬರೋ ಮರುಭೇಟಿ

Update: 2023-06-30 05:57 GMT

ಅವರ ಜೀವಿತಾವಧಿಯಲ್ಲಿ, ಗಾಂಧಿಯವರು ಬಹಳ ವಿವಾದಾತ್ಮಕ ವ್ಯಕ್ತಿಯಾಗಿದ್ದರು, ಅವರು ಕಟುವಾಗಿ ಮತ್ತು ತೀವ್ರವಾಗಿ ಖಂಡಿಸಲ್ಪಟ್ಟಂತೆಯೇ ವ್ಯಾಪಕವಾಗಿ ಮತ್ತು ಪ್ರಾಮಾಣಿಕವಾಗಿ ಮೆಚ್ಚುಗೆಗೂ ಒಳಗಾಗಿದ್ದರು. ಆದ್ದರಿಂದ ಅವರ ಮರಣದ ಮೂರೂವರೆ ದಶಕಗಳ ನಂತರ ಅವರ ಬಗ್ಗೆ ಮಾಡಿದ ದೊಡ್ಡ ಬಜೆಟ್‌ನ, ಹೆಚ್ಚು ಪ್ರಚಾರದ ಚಲನಚಿತ್ರವು ಹುರುಪಿನ ಮತ್ತು ವಿಭಿನ್ನ ಪ್ರತಿಕ್ರಿಯೆಗಳನ್ನು ಪಡೆದಿರುವುದರಲ್ಲಿ ಅಚ್ಚರಿಯೇನಿಲ್ಲ. ಚಲನಚಿತ್ರವು ಬಿಡುಗಡೆಯಾದಾಗಲೇ ಥಿಯೇಟರಿನಲ್ಲಿ ನಾನು ವೀಕ್ಷಿಸಿದೆ ಮತ್ತು ನಂತರ ಹಲವಾರು ಬಾರಿ, ಸಾಮಾನ್ಯವಾಗಿ ನಾನು ವರ್ಷಗಳಿಂದ ಪಾಠ ಮಾಡಿದ ಗಾಂಧಿ ಪರಂಪರೆ ಕುರಿತ ಕೋರ್ಸ್‌ನ ವಿದ್ಯಾರ್ಥಿಗಳೊಂದಿಗೆ ನೋಡಿದ್ದೇನೆ. ಈ ಚಿತ್ರವು ಗಾಂಧಿಯವರ ಸಂದೇಶವನ್ನು ಹೊಸ ಪೀಳಿಗೆಗೆ ಮತ್ತು ಭಾರತೀಯರರಿಗಿಂತ ಹೆಚ್ಚಾಗಿ ಇತರ ದೇಶದವರಿಗೆ ಮರಳಿ ಕಾಣಿಸಿತು. ಯೋಗ್ಯ ಉದ್ದೇಶವನ್ನು ಪೂರೈಸಿತು.


ರಿಚರ್ಡ್ ಅಟೆನ್‌ಬರೋ ಅವರ ಚಿತ್ರ ‘ಗಾಂಧಿ’ ಬಿಡುಗಡೆಯಾಗಿ ನಲವತ್ತು ವರ್ಷಗಳಾದವು. ಲಂಡನ್‌ನಿಂದ ಒಂದು ಗಂಟೆ ಪ್ರಯಾಣದ ರೈಲಿನ ಆರ್ಕೈವ್‌ನಲ್ಲಿ ಅಟೆನ್‌ಬರೋ ಕುರಿತ ಪತ್ರಿಕಾ ತುಣುಕುಗಳು ಸಿಗುತ್ತವೆ. ಇತ್ತೀಚಿನ ಭೇಟಿಯಲ್ಲಿ, ನಿರ್ದೇಶಕನ ಚಿತ್ರವಾದ, ಅತ್ಯಂತ ಮಹತ್ವದ (ಕೆಲವರು ಮೌಲ್ಯಯುತವೆಂದು ಮಾತ್ರ ಹೇಳಬಹುದು) ಅದರ ಕುರಿತ ಹಲವು ವಿಮರ್ಶಾ ಬರಹಗಳನ್ನು ಕಂಡೆ. ಯುವ ವಿಮರ್ಶಕಿ ತವ್ಲೀನ್ ಸಿಂಗ್ ‘ದಿ ಟೆಲಿಗ್ರಾಫ್’ನಲ್ಲಿ ಬರೆದ ಬರಹವೂ ಆ ಸಂಗ್ರಹದಲ್ಲಿದೆ. ಅವರು ಅಟೆನ್‌ಬರೋ ಚಿತ್ರದ ಬಗ್ಗೆ ‘ನನ್ನ ಜೀವನದಲ್ಲಿ ನಾನು ನೋಡಿದ ಮೂರು ಅಥವಾ ನಾಲ್ಕು ಶ್ರೇಷ್ಠ ಚಲನಚಿತ್ರಗಳಲ್ಲಿ ಒಂದಾಗಿದೆ ಮತ್ತು ಖಂಡಿತವಾಗಿಯೂ ಅತ್ಯಂತ ಕಾಡುವ ಚಿತ್ರಗಳಲ್ಲಿ ಒಂದು’ ಎಂದು ಹೇಳಿದ್ದಾರೆ.

ಬ್ರಿಟಿಷ್ ನಿರ್ದೇಶಕನ ಈ ಚಿತ್ರವು ಭಾರತ ಸರಕಾರದಿಂದ ಹಣ ಪಡೆದಿದೆ ಎಂಬ ಅಂಶದ ಬಗ್ಗೆ ಪರಕೀಯರ ನಡುವೆ ಕೆಲವು ಗೊಣಗಾಟವಿತ್ತು. ಆದರೆ ‘ಗಾಂಧಿ’ ಚಿತ್ರವನ್ನು ನೋಡಿದ ನಂತರ ಅಂಥ ಭಾವನೆ ಬದಲಾಗುತ್ತದೆ ಎಂದು ತವ್ಲೀನ್ ಅಭಿಪ್ರಾಯಪಡುತ್ತಾರೆ. ‘ಹಣವು ಹೆಚ್ಚು ಖರ್ಚಾಗಿದೆ ಎನ್ನುವುದಕ್ಕಿಂತ ಕಡೇಪಕ್ಷ ಸಮರ್ಪಕವಾಗಿ ಖರ್ಚಾಗಿದೆ ಎಂದು ನಾನು ನಂಬುತ್ತೇನೆ. ಅಟೆನ್‌ಬರೋ ಅವರು ಗಾಂಧಿಯ ಮೇಲೆ ಸಾಧ್ಯವಾಗಬಹುದಾದ ಅತ್ಯುತ್ತಮ ಚಲನಚಿತ್ರವನ್ನು ಮಾಡಿದ್ದಾರೆ. ಭಾರತವು ಅವರಿಗೆ ಋಣಿಯಾಗಿರಬೇಕು’ ಎಂದು ಬರೆದಿದ್ದಾರೆ ಆಕೆ.

ಮತ್ತೊಬ್ಬ ಅದೇ ತಲೆಮಾರಿನ ವಿಮರ್ಶಕಿ ಅಷ್ಟೇನೂ ಉತ್ಸಾಹ ತೋರಿಸಿಲ್ಲ. ಅವರು ‘ಸಂಡೇ ಅಬ್ಸರ್ವರ್’ನಲ್ಲಿ ಬರೆದಿರುವ ಅಮೃತಾ ಅಬ್ರಹಾಂ. ಅವರು ಬೆನ್ ಕಿಂಗ್‌ಸ್ಲ್ಲೇ ನಟನೆಯನ್ನು ಮೆಚ್ಚಿಕೊಳ್ಳುತ್ತಲೇ, ಗಾಂಧಿಯನ್ನು ಹೊರತುಪಡಿಸಿ ಇತರ ಭಾರತೀಯ ಪಾತ್ರಗಳನ್ನು ‘ಪರ್ಯಾಯ ಕಲ್ಪನೆಗಳು ಅಥವಾ ತಂತ್ರಗಳ ಗಂಭೀರ ಪಾತ್ರಗಳಾಗಿ ಪರಿಗಣಿಸದೆ, ಚಿತ್ರದ ಓಟದ ಸಲುವಾಗಿ ಜೋಡಿಸಿದ ಸಣ್ಣ ತುಣುಕುಗಳಂತೆ ಭಾವಿಸಲಾಗಿದೆ’ ಎಂದು ಟೀಕಿಸಿದ್ದಾರೆ. ‘ಗಾಂಧಿ ಮತ್ತು ಇತರ ನಾಯಕರ ನಡುವಿನ ಎಲ್ಲಾ ಮುಖಾಮುಖಿಗಳಲ್ಲಿ ಕಾಣಿಸುವ ಉದ್ವಿಗ್ನತೆಯ ಕೊರತೆಯ ಪರಿಣಾಮವಾಗಿ ನೀವು ಈ ಇತರ ಪಾತ್ರಗಳೊಂದಿಗೆ ಹಿಡಿತ ಸಾಧಿಸಲು ಸಾಧ್ಯವಾಗದೆ, ಗಾಂಧಿ ಮತ್ತು ಅವರ ಚೈತನ್ಯವು ಗ್ರಹಿಕೆಗೆ ಸಿಗದಂತಾಗುತ್ತದೆ’ ಎಂದು ಅಬ್ರಹಾಂ ಬರೆದಿದ್ದಾರೆ.

ಗಾಂಧಿಯ ಮೇಲೆ ಅತಿಯಾಗಿ ಕೇಂದ್ರೀಕರಿಸುವ ಮೂಲಕ, ಚಿತ್ರವು ಬಹುಮುಖಿ ಸ್ವಾತಂತ್ರ್ಯ ಚಳವಳಿಯ ಆಮೂಲಾಗ್ರ ಸರಳೀಕೃತ ಆವೃತ್ತಿಯನ್ನು ಮಾತ್ರ ಪ್ರಸ್ತುತಪಡಿಸಿದೆ. ಅಥವಾ ಮುಖ್ಯ ಪಾತ್ರದ ನೈತಿಕ ದೃಷ್ಟಿಗೆ ಅದು ನ್ಯಾಯವನ್ನು ಒದಗಿಸಿಲ್ಲ. ಅಬ್ರಹಾಂ ಹೇಳುವಂತೆ: ‘ಮೂರು ಗಂಟೆಗಳ ಚಲನಚಿತ್ರದಲ್ಲಿ ಗಾಂಧಿಯವರ ಸ್ವದೇಶಿ, ಭೌತಿಕ ವಸ್ತುಗಳ ತ್ಯಜಿಸುವಿಕೆ, ನೈತಿಕ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಸಾಂಕೇತಿಕ ಕ್ರಿಯೆಯ ಬಳಕೆ, ನಾಗರಿಕ ಅಸಹಕಾರ ಮತ್ತು ಅಹಿಂಸಾತ್ಮಕ ಆದರೆ ಸಕ್ರಿಯ ಪ್ರತಿಕ್ರಿಯೆಗಳು ಈ ಎಲ್ಲ ಪ್ರಮುಖ ವಿಚಾರಗಳನ್ನು ಕಡ್ಡಾಯವಾಗಿ ಹೇಳಲೇಬೇಕೆಂದುಕೊಂಡಂತಿದೆ. ಆದರೆ ಗಾಂಧೀವಾದವೊಂದರಿಂದಲೇ ವೈಯಕ್ತಿಕ ಮತ್ತು ರಾಜಕೀಯ ಪರಿಣಾಮಗಳನ್ನು ಏಕೀಕರಿಸುವ ಕೇಂದ್ರದೃಷ್ಟಿ, ವೈಯಕ್ತಿಕ ಆತ್ಮಸಾಕ್ಷಿಯನ್ನು ಹಿಂದೂ ನಂಬಿಕೆಯ ಸ್ಪರ್ಶಮಣಿಯಾಗಿ ಮಾಡುತ್ತದೆ. ಇದು ಸಾಂದರ್ಭಿಕ ಪ್ರತ್ಯೇಕತೆಯಾಗಿದೆ ಮತ್ತು ಆಲೋಚನೆಗಳು ಸಂಪೂರ್ಣ ದೃಷ್ಟಿಯಲ್ಲಿ ಒಟ್ಟಿಗೆ ಬರುವುದಿಲ್ಲ.’

ಅಟೆನ್‌ಬರೋ ಕುರಿತ ಈ ಬರಹಗಳಲ್ಲಿ ಇತರ ಕೆಲವು ಗಂಭೀರ ವಿಮರ್ಶೆಗಳಿವೆ. ಅವುಗಳಲ್ಲಿ ನ್ಯೂಯಾರ್ಕ್ ಸಾಪ್ತಾಹಿಕ ‘ವಿಲೇಜ್ ವಾಯ್ಸಾ’ನಲ್ಲಿ ಆಂಡ್ರ್ಯೂ ಸಾರಿಸ್ ಅವರ ಬರಹ ಮಾತ್ರ ಉಳಿದೆಲ್ಲವುಗಳಿಗಿಂತ ಹೆಚ್ಚು ಕಟುವಾಗಿದೆ. ಅದನ್ನೊಂದು ಬಾಲಿಶ ಮಾರುಕಟ್ಟೆ ತಂತ್ರಗಳ ಕೊಸರಾಟದಂಥ ನಿರ್ಮಾಣವೆಂದು ಸಾರಿಸ್ ಟೀಕಿಸಿದ್ದಾರೆ. ಅವರ ಪ್ರಕಾರ, ಅದು ಕೇವಲ ವಿಲಕ್ಷಣತೆಯ ಮೇಲಿನ ವಿಮರ್ಶಾತ್ಮಕ ಮತ್ತು ವಾಣಿಜ್ಯಿಕ ಗೆಲುವು ಮಾತ್ರ. ‘ಗಾಂಧಿ’ ಚಿತ್ರವು ಯಾರೋ ಒಬ್ಬರ ಬಗ್ಗೆ, ಯಾವುದೋ ಒಂದರ ಬಗ್ಗೆ ಮಾತ್ರವಲ್ಲ; ವಾಸ್ತವವಾಗಿ, ಭಾರತೀಯ ಸ್ವಾತಂತ್ರ್ಯ, ಅಹಿಂಸೆ, ವರ್ಚಸ್ಸು, ಜನಾಂಗೀಯ ಮತ್ತು ಧಾರ್ಮಿಕ ಪೂರ್ವಾಗ್ರಹ, ವಸಾಹತುಶಾಹಿ, ಸಾಮ್ರಾಜ್ಯಶಾಹಿ, ಶೋಷಣೆ ಇವೆಲ್ಲದರ ಇಡೀ ಮೊತ್ತದ ಬಗೆಗಿನದು. ವಾಸ್ತವವಾಗಿ, ಚಿತ್ರದ ಸಂಭಾವ್ಯ ವಿಷಯವು ಎಷ್ಟು ವಿಸ್ತಾರವಾಗಿದೆಯೆಂದರೆ, ಈ 188 ನಿಮಿಷಗಳ ನಿರ್ಮಾಣವು ಸ್ಥೂಲ ಮತ್ತು ಹಿಂದೆ ಬಿದ್ದಂತೆ ತೋರುತ್ತದೆ. ನಿರ್ದೇಶಕ ಅಟೆನ್‌ಬರೋ ಮತ್ತು ಅವರ ಚಿತ್ರಕಥೆಗಾರ ಜಾನ್ ಬ್ರೈಲಿ ಅವರು ಕೆಲವು ದೃಶ್ಯಗಳನ್ನು ಮತ್ತು ಕೆಲವು ಘಟನೆಗಳನ್ನು ಅನಂತ ಮತ್ತು ಶಾಶ್ವತತೆಯ ಸಾಧ್ಯತೆಗಳಿಂದ ಆಯ್ಕೆ ಮಾಡುವ ಒತ್ತಾಯಕ್ಕೆ ಒಳಗಾಗಿದ್ದಾರೆ.

ಚಲನಚಿತ್ರವು ಕಲಕುವಂಥ ಕ್ಷಣಗಳನ್ನೊಳಗೊಂಡಿದೆ ಎಂದು ಭಾವಿಸುವಾಗ, ಅಮೆರಿಕನ್ ವಿಮರ್ಶಕ ತನ್ನ ಬಹುಪಾಲು ನಕಾರಾತ್ಮಕ ವಿಮರ್ಶೆಯನ್ನು ಕೊನೆಗೊಳಿಸಿರುವುದು ಹೀಗೆ: ‘ಅಟೆನ್‌ಬರೋ ಅವರ ಗಾಂಧಿಯ ಪರಿಕಲ್ಪನೆಯಲ್ಲಿನ ದೊಡ್ಡ ದೋಷವೆಂದರೆ ಸಂಕೀರ್ಣ ಇತಿಹಾಸವನ್ನು ಸಾಂಕೇತಿಕತೆಗೆ (ಒಳ್ಳೆಯ, ಕೆಚ್ಚೆದೆಯ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ತೆಗೆದುಕೊಳ್ಳುವ ಮತ್ತು ಅಂತಿಮವಾಗಿ ಸೋಲಿಸುವ, ಅಸಹ್ಯ ಮತ್ತು ಕ್ರೂರ ಬ್ರಿಟಿಷ್ ಸಾಮ್ರಾಜ್ಯಶಾಹಿಗಳು)ಅಧೀನಗೊಳಿಸುವುದು.’

ಕೆಲವು ವಿಮರ್ಶಾತ್ಮಕ ಬ್ರಿಟಿಷ್ ಟಿಪ್ಪಣಿಗಳೂ ಇದ್ದವು. ‘ನ್ಯೂ ಮ್ಯೂಸಿಕಲ್ ಎಕ್ಸ್‌ಪ್ರೆಸ್’ನಲ್ಲಿ ಬರೆಯುತ್ತಾ, ರಿಚರ್ಡ್ ಕುಕ್, ಕೆಲವರ ಉತ್ತಮ ನಟನೆಯ ಹೊರತಾಗಿಯೂ, ಚಲನಚಿತ್ರವು ‘ಅಂತಿಮವಾಗಿ ಐತಿಹಾಸಿಕ ಮನುಷ್ಯಾಕೃತಿಗಳ ಮೆರವಣಿಗೆಯಂತೆ ಆಗುತ್ತದೆ’ ಎಂದು ಹೇಳಿದ್ದಾರೆ. ‘ದೇಶದ ಸ್ವಾತಂತ್ರ್ಯದ ಕುರಿತಾದ ಅವರ ನಂತರದ ಹೋರಾಟಗಳನ್ನು ಬಣ್ಣಿಸುವ ಭರದಲ್ಲಿ ಗಾಂಧಿಯವರ ಆಂತರಿಕ ಹೋರಾಟಗಳ ಬಗ್ಗೆ ಇದು ಹೇಳಿರುವುದು ಅತ್ಯಲ್ಪ ಎಂಬುದು ವಿಷಾದಕರ. ಗಾಂಧಿ ಮತ್ತು ಅವರ ಪತ್ನಿಯ ನಡುವಿನ ಸಂಭಾವ್ಯ ಆಕರ್ಷಕ ಸಂಬಂಧವನ್ನು ಹಠಕ್ಕೆ ಬಿದ್ದಂತೆ ಸರಳಗೊಳಿಸಲಾಗಿದೆ.’ ಕುಕ್ ಅವರ ವಿಮರ್ಶೆಯ ಕೊನೆಯ ವಾಕ್ಯ ಹೀಗಿದೆ: ‘ನಾನು ಸತ್ಯಜಿತ್ ರೇ ಅವರ ಗಾಂಧಿಯನ್ನು ನೋಡಲು ಆಸಕ್ತಿ ಹೊಂದಿದ್ದೇನೆ; ಈ ಮಾದರಿಯಲ್ಲಿ ನನಗೆ ನಂಬಿಕೆಯಿಲ್ಲ.’

ಸಹಜವಾಗಿಯೇ, ರಿಚರ್ಡ್ ಅಟೆನ್‌ಬರೋ ಸಕಾರಾತ್ಮಕ ವಿಮರ್ಶೆಗಳ ತುಣುಕುಗಳನ್ನು ಸಹ ಇಟ್ಟುಕೊಂಡಿದ್ದಾರೆ. ಈ ಸಂಗ್ರಹ ಏಶ್ಯವೀಕ್‌ನಲ್ಲಿ ಪ್ರಕಟವಾದ ಶ್ರೀಲಂಕಾದ ಪತ್ರಕರ್ತ ಟಾರ್ಜಿ ವಿಟ್ಟಾಚಿಯವರ ಭಾವಪೂರ್ಣ ವಿಮರ್ಶೆಯನ್ನೂ ಒಳಗೊಂಡಿದೆ. ನ್ಯೂಯಾರ್ಕ್‌ನಲ್ಲಿ ಪ್ರದರ್ಶನಾ ಪೂರ್ವವೀಕ್ಷಣೆಗೆ ವಿಶೇಷ ಆಹ್ವಾನಿತರಾಗಿದ್ದ ನಲವತ್ತೊಂಬತ್ತು ಅತಿಥಿಗಳಲ್ಲಿ ವಿಟ್ಟಾಚಿ ಒಬ್ಬರಾಗಿದ್ದರು. ಅವರು ಅಟೆನ್‌ಬರೋ ಅವರ ಗಾಂಧಿಯನ್ನು ವಿವರಿಸಲು ಚಿತ್ರಮಂದಿರದಿಂದ ಹೊರಬಂದರು: ‘ನಾನು ಚಿತ್ರರಂಗದ 50 ವರ್ಷಗಳ ಗೀಳಿನಲ್ಲಿ ನೋಡಿದ ಅತ್ಯಂತ ರೋಮಾಂಚಕಾರಿ ಚಿತ್ರ. ನಾವು ಪ್ರದರ್ಶನ ಕೋಣೆಯಿಂದ ಸಂಭ್ರಮದಿಂದ, ಒಂದು ರೀತಿಯ ಆಧ್ಯಾತ್ಮಿಕ ಔದಾರ್ಯದ ಸ್ಪರ್ಶಾನುಭವದೊಂದಿಗೆ, ನಿಜವಾದ ಶಕ್ತಿಯು ಬಂದೂಕಿನ ನಳಿಕೆಯಿಂದ ಹೊರಬರುವುದಿಲ್ಲ ಎಂಬ ತಿಳಿವಿನಲ್ಲಿಯ ಆಶ್ಚರ್ಯದ ಭಾವನೆಯೊಂದಿಗೆ ಹೊರಬಂದೆವು’

ಈ ಖಾಸಗಿ ಪ್ರದರ್ಶನವನ್ನು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಸಮೀಪದಲ್ಲಿ ನಡೆಸಲಾಯಿತು. ವಿಟ್ಟಾಚಿ ಬರೆದಂತೆ, ಅಲ್ಲಿ ಸೂಪರ್ ಪವರ್‌ಗಳು ‘‘ನೀವು ಮೊದಲು ನಿಲ್ಲಿಸಿ’’ ಎಂಬ ಬೀದಿಕಾಳಗದ ಆಟವನ್ನು ಆಡುತ್ತಿದ್ದರು; ಏತನ್ಮಧ್ಯೆ, ಅವರು ಸಾರ್ವಜನಿಕವಾಗಿ ಶಾಂತಿಯ ಪದಗುಚ್ಛಗಳನ್ನು ಉದುರಿಸುತ್ತಿದ್ದರೂ ಖಾಸಗಿಯಾಗಿ ಹೆಚ್ಚಿನ ಮಿಲಿಟರಿ ನೆರವಿನ ಮಾತುಕತೆ ನಡೆಸುತ್ತಿದ್ದರು. ‘ವಿಶ್ವಸಂಸ್ಥೆಯಲ್ಲಿನ ಈ ಚರ್ಚೆಗಳು’ ಮಹಾತ್ಮಾ ಗಾಂಧಿ ಎಂದಿಗೂ ಬದುಕಿಲ್ಲ ಎಂಬಂತೆ, ಯುದ್ಧಕ್ಕೆ ತಯಾರಿ ಮಾಡುವುದು ಶಾಂತಿಯ ಮಾರ್ಗವಲ್ಲ ಎಂಬ ನಿಲುವಿನ ಅವರ ಕೆಲಸವು ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತಾಗಿಲ್ಲ ಎಂಬಂತೆ, ಅವರು ಒಂದೇ ಒಂದು ಬಂದೂಕನ್ನು ಆಶ್ರಯಿಸದೆ ಇದ್ದುದರಿಂದ ಇತಿಹಾಸದಲ್ಲಿ ಪ್ರಬಲವಾದ ಸಾಮ್ರಾಜ್ಯವನ್ನು ನಾಶಪಡಿಸಲಿಲ್ಲ ಎಂಬಂತೆ, ಹಿಂಸಾಚಾರವು ಮತ್ತಷ್ಟು ಹೆಚ್ಚು ಹಿಂಸಾಚಾರವನ್ನು ಉಂಟುಮಾಡುತ್ತದೆ ಎಂದು ನಾವು ಕಲಿತಿಲ್ಲ ಎಂಬಂತೆ ಇದ್ದವು.

ಇದು ಘರ್ಷಣೆ ಮತ್ತು ಯುದ್ಧದಿಂದ ಆವೃತವಾದ ಜಗತ್ತು; ಆದಾಗ್ಯೂ, ಟಾರ್ಜಿ ವಿಟ್ಟಾಚಿ ಟೀಕಿಸಿದಂತೆ, ‘ಇದು ಅತ್ಯಂತ ವ್ಯಂಗ್ಯವಾಗಿ ಗಾಂಧಿ ಚಲನಚಿತ್ರವನ್ನು ತುಂಬಾ ಸಮಯೋಚಿತವಾಗಿಸುತ್ತದೆ ಮತ್ತು ಅದರ ಚಿತ್ರಕತೆ, ನಿರ್ದೇಶನ, ನಟನೆ ಮತ್ತು ಕ್ಯಾಮರಾ ಕೆಲಸದಲ್ಲಿ ಸ್ಪಷ್ಟವಾಗಿ ಕಂಡುಬರುವ ಪಾಂಡಿತ್ಯದ ಕೌಶಲ್ಯಗಳ ಹೊರತಾಗಿ, ತುಂಬಾ ಗಾಢವಾಗಿ ಮತ್ತು ಮರೆಯಲಾಗದಂತೆ ಕಾಡುತ್ತದೆ. ಚಿತ್ರದೊಂದಿಗೆ ಸಂಪರ್ಕಕ್ಕೆ ಬರುವ ಯಾರಾದರೂ-ಅದನ್ನು ನಿರ್ಮಿಸಿದವರು ಮತ್ತು ಅದನ್ನು ನೋಡುವವರು - ಮತ್ತೆ ಅದೇ ರೀತಿ ಆಗುವುದು ಅಸಾಧ್ಯವೆಂದು ತೋರುತ್ತದೆ ...’

ಅವರ ಜೀವಿತಾವಧಿಯಲ್ಲಿ, ಗಾಂಧಿಯವರು ಬಹಳ ವಿವಾದಾತ್ಮಕ ವ್ಯಕ್ತಿಯಾಗಿದ್ದರು, ಅವರು ಕಟುವಾಗಿ ಮತ್ತು ತೀವ್ರವಾಗಿ ಖಂಡಿಸಲ್ಪಟ್ಟಂತೆಯೇ ವ್ಯಾಪಕವಾಗಿ ಮತ್ತು ಪ್ರಾಮಾಣಿಕವಾಗಿ ಮೆಚ್ಚುಗೆಗೂ ಒಳಗಾಗಿದ್ದರು. ಆದ್ದರಿಂದ ಅವರ ಮರಣದ ಮೂರೂವರೆ ದಶಕಗಳ ನಂತರ ಅವರ ಬಗ್ಗೆ ಮಾಡಿದ ದೊಡ್ಡ ಬಜೆಟ್‌ನ, ಹೆಚ್ಚು ಪ್ರಚಾರದ ಚಲನಚಿತ್ರವು ಅಂತಹ ಹುರುಪಿನ ಮತ್ತು ವಿಭಿನ್ನ ಪ್ರತಿಕ್ರಿಯೆಗಳನ್ನು ಪಡೆದಿರುವುದರಲ್ಲಿ ಅಚ್ಚರಿಯೇನಿಲ್ಲ. ಚಲನಚಿತ್ರವು ಬಿಡುಗಡೆಯಾದಾಗಲೇ ಥಿಯೇಟರಿನಲ್ಲಿ ನಾನು ವೀಕ್ಷಿಸಿದೆ ಮತ್ತು ನಂತರ ಹಲವಾರು ಬಾರಿ, ಸಾಮಾನ್ಯವಾಗಿ ನಾನು ವರ್ಷಗಳಿಂದ ಪಾಠ ಮಾಡಿದ ಗಾಂಧಿ ಪರಂಪರೆ ಕುರಿತ ಕೋರ್ಸ್‌ನ ವಿದ್ಯಾರ್ಥಿಗಳೊಂದಿಗೆ ನೋಡಿದ್ದೇನೆ. ಈ ಚಿತ್ರವು ಗಾಂಧಿಯವರ ಸಂದೇಶವನ್ನು ಹೊಸ ಪೀಳಿಗೆಗೆ ಮತ್ತು ಭಾರತೀಯರಿಗಿಂತ ಹೆಚ್ಚಾಗಿ ಇತರ ದೇಶದವರಿಗೆ ಮರಳಿ ಕಾಣಿಸಿತು. ಯೋಗ್ಯ ಉದ್ದೇಶವನ್ನು ಪೂರೈಸಿತು. ಬೆನ್ ಕಿಂಗ್‌ಸ್ಲ್ಲೇ ಪ್ರಧಾನ ಪಾತ್ರದಲ್ಲಿ ಅದ್ಭುತವಾಗಿದ್ದರು. ಕೋಮು ಸೌಹಾರ್ದಕ್ಕಾಗಿ ಗಾಂಧಿಯವರ ಕೊನೆಯ, ವೀರೋಚಿತ ಉಪವಾಸಗಳ ಚಿತ್ರಣವನ್ನು ಸೂಕ್ಷ್ಮವಾಗಿ ಮತ್ತು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಮತ್ತೊಂದೆಡೆ, ಇತರ ಹೆಚ್ಚಿನ ಪಾತ್ರಗಳನ್ನು ಕಡಿಮೆ ತಪ್ಪುಗಳೊಂದಿಗೆ ನಿರ್ವಹಿಸಲಾಗಿದೆ, ಆದರೆ ಗಾಂಧಿಯವರ ಕೆಲವು ಗಮನಾರ್ಹ ಸಮಕಾಲೀನರು ಮತ್ತು ಪ್ರತಿಸ್ಪರ್ಧಿಗಳಾದ ಬಿ.ಆರ್. ಅಂಬೇಡ್ಕರ್ ಮತ್ತು ಸುಭಾಸ್ ಚಂದ್ರ ಬೋಸ್ ಅವರು ಚಿತ್ರದಲ್ಲಿ ಕಾಣಿಸಿಕೊಂಡಿಲ್ಲದಿರುವುದು ನಿಗೂಢ. ಅಥವಾ, ಅಮೃತಾ ಅಬ್ರಹಾಂ ಸೂಚಿಸಿದಂತೆ, ಗಾಂಧಿಯವರ ರಾಜಕೀಯದ ನೈತಿಕ ಶಕ್ತಿಯು ತೃಪ್ತಿಕರ ಶೈಲಿಯಲ್ಲಿ ವ್ಯಕ್ತಗೊಂಡಿದೆ.

ಚಿತ್ರಕ್ಕೆ ಭಾರತ ಸರಕಾರದ ಹಣಕಾಸು ಕುರಿತು ಒಪ್ಪಿದ್ದ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಪ್ರತಿಕ್ರಿಯೆಯ ಕುರಿತು ಮಾತನಾಡುವ ಮೂಲಕ ನಾನು ಇದನ್ನು (ಅದು ಇದ್ದಂತೆ) ‘ವಿಮರ್ಶೆಗಳ ವಿಮರ್ಶೆ’ಯನ್ನು ಕೊನೆಗೊಳಿಸಲು ಬಯಸುತ್ತೇನೆ. ವಿನೋದ್ ಮೆಹ್ತಾ ಅವರೊಂದಿಗಿನ ಸಂದರ್ಶನದಲ್ಲಿ, ಅಟೆನ್‌ಬರೋ ಅವರು ಪ್ರಧಾನ ಮಂತ್ರಿಯವರಿಗೆ ಚಲನಚಿತ್ರವನ್ನು ತೋರಿಸಿದಾಗ ಅವರು ಕೇವಲ ಎರಡು ವಿಚಾರಗಳನ್ನು ವ್ಯಕ್ತಪಡಿಸಿದ್ದರು ಎಂದು ಹೇಳಿಕೊಂಡಿದ್ದರು: ‘ನೀವು ಬಾಪು ಅವರ ಜೀವನವನ್ನು ಮೂರು ಗಂಟೆಗಳ ಅವಧಿಗೆ ಸಂಕುಚಿತಗೊಳಿಸಲು ಪ್ರಯತ್ನಿಸುತ್ತಿದ್ದೀರಿ. ಇದರ ಬಗ್ಗೆ ಚಿತ್ರದ ಪ್ರಾರಂಭದಲ್ಲಿ ನೀವು ಪ್ರಸ್ತಾಪಿಸಬೇಕು. ಅವರು ಹೇಳಿದ್ದ ಇನ್ನೊಂದು ವಿಚಾರ, ಬಾ ಅವರ ಸಂಭಾಷಣೆ, ಈಗಿನ ಕಾಲದಂತಿದೆ. 90 ವರ್ಷಗಳ ಹಿಂದೆ ಮಹಿಳೆಯರು ತಮ್ಮ ಗಂಡಂದಿರೊಂದಿಗೆ ಬಹಳ ಔಪಚಾರಿಕವಾಗಿ ಮಾತನಾಡುತ್ತಿದ್ದರು ಎಂಬುದಾಗಿತ್ತು. ಇದನ್ನು ಮತ್ತೊಮ್ಮೆ ನೋಡಬೇಕೆಂದು ಅವರು ಸೂಚಿಸಿದ್ದರು. ನಾನು ಅವರ ಎರಡೂ ಸಲಹೆಗಳನ್ನು ಅನುಸರಿಸಿದೆ.’

ಚಿತ್ರದ ಬಗ್ಗೆ ಇಂದಿರಾ ಗಾಂಧಿಯವರದ್ದೇ ಆದ ಅಭಿಪ್ರಾಯವಿದೆ. 1982ರ ಡಿಸೆಂಬರ್ 2ರಂದು ಪ್ರಧಾನಿಯವರು ತಮ್ಮ ಅಮೆರಿಕನ್ ಸ್ನೇಹಿತ ಡೊರೊಥಿ ನಾರ್ಮನ್‌ಗೆ ಪತ್ರ ಬರೆದರು: ‘ಗಾಂಧಿ ಚಿತ್ರವು ಬಹಳ ಅದ್ದೂರಿಯಾಗಿ ತೆರೆಕಂಡಿದೆ. ಇದು ಪರಿಣಾಮಕಾರಿಯಾಗಿದೆ. ಗಾಂಧೀಜಿಯವರು ಏನನ್ನು ಪ್ರತಿಪಾದಿಸಿದರು ಎಂಬುದನ್ನು ಜಗತ್ತೇ ತಿಳಿದುಕೊಳ್ಳುವುದು ಒಳ್ಳೆಯದು. ಆ ಕಾಲದ ಮೂಲಕ ಬದುಕಿದವರಿಗೆ ಚಲನಚಿತ್ರವು ಅದ್ಭುತ, ಭವ್ಯ ಮತ್ತು ಶಕ್ತಿಯುತವಾಗಿದೆಯಾದರೂ, ಭಾರತ ಎಂಬ ಚೈತನ್ಯದ ಕೆಲವು ಅಗತ್ಯ ಗುಣಗಳನ್ನು ಹೊಂದಿಲ್ಲ. ದುರಂತವೆಂದರೆ, ಆ ಭವ್ಯವಾದ ಜನಾಂದೋಲನದ ಹಿರಿಮೆ ಮತ್ತು ಅದರ ನೇತೃತ್ವ ವಹಿಸಿದ ಮಹನೀಯರು ಮತ್ತು ಮಹಿಳೆಯರಿಂದ(ಬಹುತೇಕ ಪ್ರತೀ ಜಿಲ್ಲೆಯಲ್ಲೂ ಅದರ ನಾಯಕರು ಮತ್ತು ನಾಯಕಿಯರು ಇದ್ದಾರೆ) ಯಾವುದೇ ಭಾರತೀಯ ಚಿತ್ರ ನಿರ್ದೇಶಕರು ಸ್ಫೂರ್ತಿ ಪಡೆದಿಲ್ಲ. ಗಾಂಧೀಜಿ ಆ ಅಲೆಯ ಶಿಖರಪ್ರಾಯರಾಗಿದ್ದರು. ಚಿತ್ರವು ಅವರನ್ನು ಅದ್ವಿತೀಯ ಎಂದು ತೋರಿಸಿದ ಬಗೆ ಅವರಿದ್ದುದಕ್ಕಿಂತ ಹೆಚ್ಚೇನಲ್ಲ. ಆದರೆ ಇತರ ಅಂಶಗಳನ್ನು ಕಡಿಮೆ ಮಾಡುವ ಮೂಲಕ ಇದನ್ನು ಸಾಧ್ಯವಾಗಿಸಲಾಗಿದೆ.’
ಮೇಲ್ನೋಟದ್ದು, ಆದರೆ ನೋಡಬಹುದು- ರಿಚರ್ಡ್ ಅಟೆನ್‌ಬರೋ ಅವರ ಗಾಂಧಿಯ ಬಗ್ಗೆ ಇಂದಿರಾ ಗಾಂಧಿಯವರ ವಿಮರ್ಶೆ ಅದಾಗಿತ್ತು. ಮತ್ತು ಹಾಗೆ ಇತ್ತು

Similar News