ವಾರಾಹಿ ಕಾಲುವೆಗೆ ತಕ್ಷಣ ನೀರು ಹಾಯಿಸುವಂತೆ ಆಗ್ರಹ : ಹರಿಪ್ರಸಾದ್ ಶೆಟ್ಟಿ

Update: 2022-12-04 13:08 GMT

ಕುಂದಾಪುರ, ಡಿ.4: ಈ ಹಿಂದೆ ನೀಡಿದ ಭರವಸೆಯಂತೆ ಡಿ.1ಕ್ಕೆ ವಾರಾಹಿ ಕಾಲುವೆಗೆ ನೀರು ಹಾಯಿಸಬೇಕಾ ಗಿದ್ದು, ಈ ತನಕ ನೀರು ಹಾಯಿಸಿಲ್ಲ. ನೀರು ಹಾಯಿಸುವ ದಿನಾಂಕದ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಯನ್ನೂ ನೀಡಿಲ್ಲ.  ಆದ್ದರಿಂದ ಕೂಡಲೇ ವಾರಾಹಿ ಕಾಲುವೆಗೆ ನೀರು ಹಾಯಿಸಬೇಕೆಂದು  ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ಧಾರೆ.

ರೈತರ 2ನೇ  ಭತ್ತದ ಬೆಳೆಗೆ  ಡಿಸೆಂಬರ್ ಮೊದಲ ವಾರದಲ್ಲಿ ನೀರಿನ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಡಿಸೆಂಬರ 1ನೇ ತಾರೀಕಿಗೆ ನೀರು ಹಾಯಿಸಲಾಗುವುದೆಂದು ಸಚಿವರ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಉಡುಪಿ ಜಿಲ್ಲಾ ರೈತ ಸಂಘಕ್ಕೆ ಮತ್ತು ರೈತರಿಗೆ ಭರವಸೆ ನೀಡಿದ್ದರು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿ ವರ್ಷ ಮುಗ್ದ ರೈತರು ಕಾಡಿ-ಬೇಡಿ ನೀರು ಪಡೆಯುವ ಪರಿಸ್ಥಿತಿ ಎದುರಾಗಿರುವುದು ನೋವಿನ ಸಂಗತಿ . ಪ್ರತಿ ವರ್ಷ ಮಳೆಗಾಲದಲ್ಲಿ ಕಾಲುವೆಗೆ ಹಾನಿಯಾಗುವುದು ಸಾಮಾನ್ಯ ವಿಚಾರ. ಇದನ್ನು ಸಕಾಲದಲ್ಲಿ ದುರಸ್ಥಿ ಪಡಿಸುವುದು ಇಲಾಖೆಯ ಜವಾಬ್ದಾರಿ. ವಾರಾಹಿ ಎಡದಂಡೆ ನಾಲೆಯ ನೀರು ಸಿಗುವ ರೈತರು ವಾರಾಹಿ ನಾಲೆಯ ನೀರನ್ನು ನಂಬಿ ಸಾವಿರಾರು ಎಕ್ರೆ ಅಡಿಕೆ ತೋಟ ಮಾಡಿದ್ದಾರೆ. ನಾಲೆಯ ದುರಸ್ಥಿ ನೆಪದಲ್ಲಿ ನೀರು ಹಾಯಿಸದಿದ್ದಲ್ಲಿ  ಅಡಿಕೆ ತೋಟಗಳಿಗೆ ಡಿಸೆಂಬರ ತಿಂಗಳಲ್ಲೇ ನೀರಿನ ಕೊರತೆಯಾಗಲಿದೆ ಎಂದವರು ಹೇಳಿದ್ದಾರೆ.

ಹೀಗಾಗಿ ಯಾವುದೇ ಸುಳ್ಳು ಕಾರಣ ನೀಡದೆ ಕೂಡಲೇ ವಾರಾಹಿ ಕಾಲುವೆಗೆ ನೀರು ಹಾಯಿಸಬೇಕು ಮತ್ತು ನೀರು ಹಾಯಿಸುವ ದಿನಾಂಕದ ಬಗ್ಗೆ ರೈತರಿಗೆ ಸ್ಪಷ್ಟವಾದ ಪೂರ್ವ ಮಾಹಿತಿ ನೀಡಬೇಕೆಂದು ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಒತ್ತಾಯಿಸಿದ್ದಾರೆ. 

Similar News