BJP ಹಿಮಾಚಲ ಪ್ರದೇಶದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?: ದಿನೇಶ್ ಗುಂಡೂರಾವ್

Update: 2022-12-08 14:25 GMT

ಬೆಂಗಳೂರು, ಡಿ.8: ಕೇವಲ ಗುಜರಾತ್ ವಿಧಾನಸಭಾ ಚುನಾವಣೆಯ ಗೆಲುವನ್ನೇ ದೇಶದ ಗೆಲುವು ಎಂಬಂತೆ ಬಿಜೆಪಿ ನಾಯಕರು ಸಂಭ್ರಮಿಸುತ್ತಿದ್ದಾರೆ. ಆದರೆ ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದೂ ಹೀನಾಯವಾಗಿ ಸೋತಿರುವುದನ್ನು ಮರೆ ಮಾಚುತ್ತಿರುವುದೇಕೆ? ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದ ಬಿಜೆಪಿಯವರು ಹಿಮಾಚಲ ಪ್ರದೇಶದ ಫಲಿತಾಂಶದ ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಗುಜರಾತ್ ಚುನಾವಣೆಯ ಫಲಿತಾಂಶ ನಿರೀಕ್ಷಿತ. ಪ್ರಧಾನಿ ಮೋದಿ ಗುಜರಾತ್‍ನವರು. ಗುಜರಾತ್‍ನಲ್ಲಿ ಸೋತರೆ ತಮಗೆ ಮುಖಭಂಗ ಎನ್ನುವ ಕಾರಣಕ್ಕೆ ಚುನಾವಣಾ ಪೂರ್ವದಲ್ಲಿ ಮೋದಿ ತಮ್ಮ ತವರು ರಾಜ್ಯಕ್ಕೆ ವಿಪರೀತ ಕೊಡುಗೆ ನೀಡಿದ್ದರು. ಗುಜರಾತ್‍ನಲ್ಲಿ ಬಿಜೆಪಿ ಗೆಲ್ಲಲು ಇದು ಕೂಡ ಪ್ರಮುಖ ಕಾರಣ. ಜೊತೆಗೆ ಆಮ್ ಆದ್ಮಿ ಪಕ್ಷದ ಸ್ಪರ್ಧೆಯಿಂದ ಬಿಜೆಪಿಗೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.

ಗುಜರಾತ್ ಚುನಾವಣೆಯ ಫಲಿತಾಂಶ ಕರ್ನಾಟಕದಲ್ಲಿ ನಡೆಯುವ ಚುನಾವಣೆಯ ದಿಕ್ಸೂಚಿ ಎಂದು ಬಿಜೆಪಿಯವರ ವಾದ. ಹಾಗಾದರೆ ಹಿಮಾಚಲ ಪ್ರದೇಶದ ಫಲಿತಾಂಶ ದಿಕ್ಸೂಚಿಯಲ್ಲವೇ? ದಿಲ್ಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದು ದಿಕ್ಸೂಚಿಯಲ್ಲವೇ? ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಸೋಲು ದಿಕ್ಸೂಚಿಯಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಗುಜರಾತ್ ಹೊರತುಪಡಿಸಿ ಬಿಜೆಪಿಯ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ ಎನ್ನುವುದಕ್ಕೆ ಹಿಮಾಚಲ ಪ್ರದೇಶ, ದಿಲ್ಲಿ ಮಹಾನಗರ ಪಾಲಿಕೆ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶವೇ ಸಾಕ್ಷಿ. ಆದರೂ ಬಿಜೆಪಿಯವರು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಗುಜರಾತ್ ಗೆಲುವೊಂದನ್ನೇ ಸಂಭ್ರಮಿಸುತ್ತಿದ್ದಾರೆ. ಇದೆಂತಾ ವಿಚಿತ್ರ? ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

Similar News