ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ಆತನ ಕಾರು ಚಾಲಕನ ಮೇಲೆ ಹಾಡಹಗಲೇ ಗುಂಡಿನ ದಾಳಿ

Update: 2022-12-08 14:44 GMT

ಬೆಂಗಳೂರು (Bengaluru), ಡಿ.8: ರಾಜಧಾನಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಆತನ ಕಾರು ಚಾಲಕನ ಮೇಲೆ ಹಾಡಹಗಲೇ ದುಷ್ಕರ್ಮಿಗಳು ಪಿಸ್ತೂಲಿನಿಂದ ಗುಂಡಿನ ದಾಳಿ ನಡೆಸಿರುವ ಘಟನೆ ಕೆ.ಆರ್.ಪುರಂನ ಸೀಗೆಹಳ್ಳಿ ಬಳಿಯ ಹಾಸ್ಯಗಾರ್ಡನ್‍ನಲ್ಲಿ ನಡೆದಿದೆ.

ಗುರುವಾರ ಮಧ್ಯಾಹ್ನ ಸೀಗೆಹಳ್ಳಿಯ ಹಾಸ್ಯಗಾರ್ಡನ್‍ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಶಿವಶಂಕರ್ ರೆಡ್ಡಿ, ಕಾರು ಚಾಲಕ ಅಶೋಕ್ ಮೇಲೆ ದುಷ್ಕರ್ಮಿಗಳ ತಂಡ ನಾಲ್ಕೈದು ಸುತ್ತು ಪಿಸ್ತೂಲಿನಿಂದ ಗುಂಡಿನ ದಾಳಿ ಮಾಡಿದ್ದಾರೆನ್ನಲಾಗಿದೆ.

ಘಟನೆಯಲ್ಲಿ ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಅಶೋಕ್, ಶಿವಶಂಕರ್ ರೆಡ್ಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕೆ.ಆರ್.ಪುರಂ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ರಸ್ತೆ ಬದಿ ನಿಂತಿದ್ದಾಗ ಏಕಾಏಕಿ ಬಂದು ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನೂ, ಶಿವಶಂಕರ್ ರೆಡ್ಡಿ ಆಂಧ್ರಪ್ರದೇಶದ ಮದನಪಲ್ಲಿ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದರು. ಎರಡು ಕೊಲೆಗಳು ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪವಿದೆ. 

ಕೆಆರ್‍ಪುರಂ ಲಿಮಿಟ್ಸ್ ನಲ್ಲಿ ಅಪಾರ್ಟ್ಟ್ ಮೆಂಟ್ ನಿರ್ಮಾಣ ಮಾಡಿಸುತ್ತಿದ್ದು, ಮಧ್ಯಾಹ್ನದ ವೇಳೆಗೆ ಕಾಮಗಾರಿ ವೀಕ್ಷಿಸಲು ತನ್ನ ಚಾಲಕ ಅಶೋಕ್ ಜೊತೆ ಹೋಗಿದ್ದ. ಈ ವೇಳೆ ಒಟ್ಟು ನಾಲ್ಕು ಜನ ಆರೋಪಿಗಳು ಗುಂಡಿನ ದಾಳಿ ಮಾಡಿದ್ದಾರೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Similar News